ಮಂಗಳೂರು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಪೆರಿಬೈಲ್ ಸಮುದ್ರ ತೀರದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಪುರಸಭಾ ಮುಖ್ಯಾಧಿಕಾರಿ ಮುತ್ತಡಿಯವರು ಗಿಡನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ “ನಾವೆಲ್ಲರೂ ಸ್ವಯಂಪ್ರೇರಿತರಾಗಿ, ಸಕಲ ಪ್ರಾಣಿ ಸಂಕುಲಕ್ಕೆ ಸೇರಿರುವ ಈ ಪರಿಸರದ ಸಂರಕ್ಷಣೆ, ಈ ಭೂಮಿಯ ಸ್ವಚ್ಛತೆಯನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು.
ಈ ಅಭಿಯಾನದಲ್ಲಿ ಪುರಸಭೆಯ ಎಲ್ಲಾ ನೌಕರರು, ಸಂಘಸಂಸ್ಥೆಗಳ ಪ್ರತಿನಿಧಿಗಳು, ಪರಿಸರ ಪ್ರೇಮಿಗಳು ಭಾಗವಹಿಸಿದ್ದರು. ಸ್ವಚ್ಛ ಭಾರತ್ ಮಿಶನ್ ಯೋಜನೆಯಡಿ ‘ನನ್ನ ಲೈಫ್ ನನ್ನ ಸ್ವಚ್ಛ ನಗರ’ ಕಾರ್ಯಕ್ರಮದಡಿ ಆರ್.ಆರ್.ಆರ್ ಕೇಂದ್ರಗಳಿಗೆ ಮರುಬಳಕೆಯ ತ್ಯಾಜ್ಯಗಳನ್ನು ನೀಡಿ, ನೋಂದಣಿ ಮಾಡಿದವರಿಗೆ ಮುಖ್ಯಾಧಿಕಾರಿಯವರು ಪ್ರಮಾಣ ಪತ್ರಗಳನ್ನು ವಿತರಿಸಿದರು. ಪರಿಸರ ಅಭಿಯಂತರರಾದ ಸುನೀಲ್ ಪ್ರಸ್ತಾವಿಕವಾಗಿ ವಿಶ್ವ ಪರಿಸರ ದಿನದ ಪ್ರಾಮುಖ್ಯತೆಯನ್ನು ತಿಳಿಸಿದರು. ನಿರೀಕ್ಷಕರಾದ ಲಿಲ್ಲಿ ನಾಯರ್ ಸ್ವಾಗತಿಸಿದರು.