ಮಂಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳ್ಳುವ ಸಂದರ್ಭದಲ್ಲಿ ಅದರ ಆಶಯದಂತೆ ಬಹು ವಿಧ ಪ್ರತಿಭೆಗಳ ಸಂಪೂರ್ಣ ಅನಾವರಣ ಗೊಳಿಸುವಲ್ಲಿ ಹಾಗೂ ಯುವಶಕ್ತಿಯನ್ನು ಪ್ರಬುದ್ಧ ಮಾನವ ಸಂಪನ್ಮೂಲವನ್ನಾಗಿ ರೂಪಿಸಲು ಕೆನರಾ ಸಾಂಸ್ಕೃತಿಕ ಅಕಾಡೆಮಿ ಸ್ಥಾಪನೆಗೊಳ್ಳುತ್ತಿರುವುದು ಹೆಚ್ಚು ಅರ್ಥಪೂರ್ಣವಾಗಿದೆ ಎಂದು ಗೋವಾ ರಾಜ್ಯದ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಹೇಳಿದರು.
ಕೆನರಾ ಶಿಕ್ಷಣ ಸಂಸ್ಥೆ ಸ್ಥಾಪಿಸುತ್ತಿರುವ ಕೆನರಾ ಸಾಂಸ್ಕೃತಿಕ ಅಕಾಡೆಮಿಯನ್ನು ಉದ್ಘಾಟಿಸಿ ಲಾಂಛನವನ್ನು ಅನಾವರಣಗೊಳಿಸಿ ಮಾತನಾಡಿದರು.
ಭಾರತಕ್ಕೆ ಶಕ್ತಿಯುತ ದೂರ ದೃಷ್ಟಿಯನ್ನು ಹೊಂದುವ , ವಿವಿಧ ಕ್ಷೇತ್ರದ ಸಬಲೀಕರಣದ ಕನಸನ್ನು ನನಸುಗೊಳಿಸುವಲ್ಲಿನಮ್ಮ ದೇಶದ ಪ್ರಧಾನ ಮಂತ್ರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಅಮೃತಕಾಲದ ಸಂದರ್ಭ ಇಂತಹ ಅಕಾಡೆಮಿ ಯುವ ಮನಸುಗಳಲಿರುವ ಸಾಂಸ್ಕೃತಿಕ ಹಾಗೂ ಸೃಜನಶೀಲ ವ್ಯಕ್ತಿತ್ವವನ್ನು ಇನ್ನೂ ಗಟ್ಟಿಗೊಳಿಸಲು ಸಾಧ್ಯವಾಗುತ್ತಿರುವುದು ಹೆಮ್ಮೆಯ ಸಂಗತಿ. 132 ವರ್ಷಗಳ ಹಿಂದೆ ಬ್ರಿಟಿಷರ ಆಳ್ವಿಕೆಯ ಸಂದರ್ಭ ಸ್ಥಾಪಿಸಿದ ಶಿಕ್ಷಣ ಸಂಸ್ಥೆಯೊಂದು ಬೆಳೆದು ನಿಲ್ಲುವುದು ಅಷ್ಟೊಂದು ಸುಲಭ ವಿಚಾರವಲ್ಲ. ಆದರೆ ಕೆನರಾ ಸಂಸ್ಥೆಗಳ ಸ್ಥಾಪಕರ ಛಲ ಬಿಡದ ವ್ಯಕ್ತಿತ್ವ ಅಸಾಧ್ಯವಾಗಿರುವುದನ್ನು ಸಾಧಿಸಿ ತೋರಿಸಿದೆ. ಕೆನರಾ ಬ್ಯಾಂಕ್ ಮತ್ತು ಕೆನರಾ ಶಿಕ್ಷಣ ಸಂಸ್ಥೆ ಎಲ್ಲರ ಮನೆ ಮನಗಳಲ್ಲೂ ನೆಲೆಸಲು ಅದರಲ್ಲಿರುವ ಸತ್ವವೇ ಕಾರಣ. ಎಂದರು.
ಕೆನರಾ ಸಾಂಸ್ಕೃತಿಕ ಅಕಾಡೆಮಿ ಎಲ್ಲರ ಹಿತಕಾಯಲಿ ಎಂದರು.
ಕೆನರಾ ಆಡಳಿತ ಮಂಡಳಿಯ ಗೌರವಾನ್ವಿತ ಕಾರ್ಯದರ್ಶಿ ಎಂ ರಂಗನಾಥ್ ಭಟ್ ಮಾತನಾಡಿ ಕೆನರಾ ಸಾಂಸ್ಕೃತಿಕ ಅಕಾಡೆಮಿಯ ಸ್ಥಾಪನೆ ನಮ್ಮ ಅನೇಕ ವರ್ಷಗಳ ಕನಸು. ಇಂದು ಅದರ ಯೋಗ ಯೋಗ ಕೂಡಿಬಂದಿದೆ. ಶೈಕ್ಷಣಿಕ ಚಟುವಟಿಕೆಗಳ ಜೊತೆ ಜೊತೆಯಲಿ ಸಾಂಸ್ಕೃತಿಕ ಕ್ಷೇತ್ರದ ಬೇರೆ ಬೇರೆ ವಿಭಾಗ ಗಳಲ್ಲಿ ಆಸಕ್ತಿ ಇರುವ ಪ್ರತಿಭೆಗಳಿಗೆ ಈ ಕೆನರಾ ಸಾಂಸ್ಕೃತಿಕ ಅಕಾಡೆಮಿ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ.
ಸಂಸ್ಥೆ ಉದ್ಘಾಟನೆಯು ಗೋವಾದ ಮುಖ್ಯಮಂತ್ರಿಗಳಿಂದ ನೆರವೇರುತ್ತಿರುವುದು ಸಂತಸದ ವಿಷಯ. ಕಡಿಮೆ ವೆಚ್ಚದಲ್ಲಿ ಉತ್ಕೃಷ್ಟ ಶಿಕ್ಷಣವನ್ನು ಒದಗಿಸುತ್ತಾ ಬಂದಿರುವ ನಮ್ಮ ಈ ಸಂಸ್ಥೆ ಹೊಸತನದ ಕಲ್ಪನೆಗೆ ಸದಾ ಅವಕಾಶಗಳನ್ನು ನೀಡುತ್ತಾ ಬಂದಿದೆ. ಈ ಅಕಾಡೆಮಿಯ ಸ್ಥಾಪನೆ ಅದಕ್ಕೊಂದು ವಿಶಿಷ್ಟ ಉದಾಹರಣೆ ಎಂದು ಹೇಳಿದರು.
ಕೆನರಾ ಆಡಳಿತ ಮಂಡಳಿಯ ಅಧ್ಯಕ್ಷರಾದ ವಾಸುದೇವ್ ಕಾಮತ್ ಅವರು ಅಧ್ಯಕ್ಷತೆ ವಹಿಸಿದ್ದರು. ಕೆನರಾ ಆಡಳಿತ ಮಂಡಳಿಯ ಜಂಟಿ ಕಾರ್ಯದರ್ಶಿ ಕೆ ಸುರೇಶ್ ಕಾಮತ್, ಟಿ ಗೋಪಾಲಕೃಷ್ಣ ಶೆಣೈ, ಖಜಾಂಚಿ ಸಿ ಎ ವಾಮನ್ ಕಾಮತ್, ಸಹ ಖಜಾಂಚಿ ಸಿ ಎ ಜಗನ್ನಾಥ್ ಕಾಮತ್, ಶಿವಾನಂದ ಶೆಣೈ, ನರೇಶ್ ಶೆಣೈ, ಬಸ್ತಿ ಪುರುಷೋತ್ತಮ್ ಶೆಣೈ, ಸಂಸ್ಥೆಯ ನಿರ್ದೇಶಕರಾದ ಪ್ರೊ. ರಾಧಾಕೃಷ್ಣ ಎಸ್ ಐತಾಳ್ ಕಾರ್ಯಕ್ರಮದ ಸಂಚಾಲಕ ಗೋಪಾಲಕೃಷ್ಣ ಶೆಟ್ಟಿ, ಸಾಂಸ್ಕೃತಿಕ ಅಕಾಡೆಮಿಯ ಸಂಯೋಜಕ ಶ್ರುತ ಕೀರ್ತಿ , ಸಂಸ್ಥೆಯ ಪಿ ಆರ್ ಒ ಉಜ್ವಲ್ ಮಲ್ಯ,ಸಹೋದರಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಬೋಧಕ ಬೋಧಕೇತರ ವರ್ಗ, ಸಂಸ್ಥೆಯ ಹಿತೈಷಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೆನರಾ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಕೆನರಾ ಪದವಿಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕಿ ಸುಜಾತ ಕಾರ್ಯಕ್ರಮ ನಿರೂಪಿಸಿದರು.