ಮಂಗಳೂರು: ತುಳುನಾಡಿನಲ್ಲಿರುವಷ್ಟು ಬಗೆಬಗೆಯ ತಿನಿಸುಗಳು ಇನ್ನೆಲ್ಲೂ ಇಲ್ಲ. ಕೇವಲ ಅಕ್ಕಿಯಿಂದ ಇನ್ನೂರಕ್ಕೂ ಹೆಚ್ಚು ಬಗೆಯ ದೋಸೆ, ಇಪ್ಪತ್ತೈದಕ್ಕೂ ಹೆಚ್ಚು ಬಗೆಯ ಕಡುಬು ಮಾಡಬಲ್ಲವರು ನಾವು. ಎಲ್ಲವೂ ಆರೋಗ್ಯಕ್ಕೆ ಹಾನಿಕರವಲ್ಲದ ಸಮತೋಲಿತ ಆಹಾರಗಳು. ಹಿರಿಯರಿಂದ ಬಂದಿರುವ ಈ ಜ್ಞಾನವನ್ನು ಉಳಿಸಿ, ಬೆಳೆಸುವುದು ನಮ್ಮ ಕರ್ತವ್ಯ, ಎಂದು ಬಂಟ್ವಾಳದ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಡಿ ಶೆಟ್ಟಿ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರವಾಸೋದ್ಯಮ ವಿಭಾಗ ಹಾಗೂ ಬಿಬಿಎ (ಟೂರಿಸಂ ಅಂಡ್ ಟ್ರಾವೆಲ್) ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ʼಬಂಜರ – 2022ʼ ಎಂಬ ಆಹಾರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ರಮೇಶ್.ಕೆ ಮಾತನಾಡಿ, ಹೊಸದಾಗಿ ಆರಂಭವಾಗಿರುವ ಬಿಬಿಎ ಕಾರ್ಯಕ್ರಮಕ್ಕೆ ಸೇರಲು ಆಸಕ್ತರಿಗೆ ಇಂತಹ ಕಾರ್ಯಕ್ರಮಗಳು ಸ್ಪೂರ್ತಿ ನೀಡಲಿವೆ, ಎಂದು ಅಭಿಪ್ರಾಯಪಟ್ಟರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲೆ ಡಾ. ಅನಸೂಯ ರೈ ಮಾತನಾಡಿ, ಕರಾವಳಿ ಪ್ರವಾಸೋದ್ಯಮದಲ್ಲಿ ಇಲ್ಲಿನ ಆಹಾರ ವೈವಿಧ್ಯವೂ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯಕರ ಆಹಾರ ಪದ್ದತಿಯನ್ನು ಕರಾವಳಿಗರು ರೂಢಿಸಿಕೊಂಡಿದ್ದಾರೆ, ಎಂದರು.
ತುಳುನಾಡು ಕ್ಯಾಟ್ರಾಸ್ ಹಾಗೂ ಸಚಿತಾ ಫ್ಯಾಮಿಲಿ ಕಿಚನ್ ಅವರಿಂದ ತಯಾರಿಸಲ್ಪಟ್ಟ ಸ್ವಾದಿಷ್ಟ ತಿನಿಸುಗಳನ್ನು ಖರೀದಿಸಲು ಐದರಿಂದ, ನೂರೈವತ್ತು ರೂಪಾಯಿಯ ಕೂಪನ್ ಗಳಿದ್ದವು. ಸುಮಾರು ಐವತ್ತಕ್ಕೂ ಹೆಚ್ಚಿನ ಬಗೆಯ ತಿಂಡಿಗಳು , ವಿವಿಧ ಬಗೆಯ ಜ್ಯೂಸ್ ಗಳು ಆಕರ್ಷಿಸಿದವು. ಪ್ರವಾಸೋದ್ಯಮ ವಿಭಾಗ ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಮೀನಾಕ್ಷಿ ಎಂ ಎಂ, ಬಿಬಿಎ ಮುಖ್ಯಸ್ಥ ಡಾ. ಎ ಸಿದ್ಧಿಕ್ ಸೇರಿದಂತೆ ಹಿರಿಯ ಪ್ರಾಧ್ಯಾಪಕರು ಭಾಗವಹಿಸಿದ್ದರು. ಉಪನ್ಯಾಸಕ ಶ್ರೀರಾಜ್ ಅತಿಥಿಗಳನ್ನು ಸ್ವಾಗತಿಸಿದರೆ, ಉಪನ್ಯಾಸಕಿ ಪರಿಣಿತಾ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿ ಲಿಖಿತಾ ಜಿ.ಎನ್ ಕಾರ್ಯಕ್ರಮ ನಿರೂಪಿಸಿದರು.