ಮಂಗಳೂರು: ಕಂಕನಾಡಿ ಗರಡಿ ಪುಣ್ಯ ಕ್ಷೇತ್ರವಾಗಿದ್ದು, ಇಂತಹ ಕ್ಷೇತ್ರದಲ್ಲಿ ನಡೆಯುತ್ತಿರುವ 150ನೇ ವರ್ಷ ಕಾರ್ಯಕ್ರಮಗಳು ದೈವ-ದೇವರ ಅನುಗ್ರಹದೊಂದಿಗೆ ಅತ್ಯಂತ ವೈಭವ, ಯಶಸ್ವಿಯಾಗಿ ನಡೆಯಲಿ ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಹೇಳಿದರು.
ಕಂಕನಾಡಿ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರ 150ನೇ ವರ್ಷದ ಸಂಭ್ರಮದ ಅಂಗವಾಗಿ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಕಂಕನಾಡಿ ಗರಡಿ ನಿರ್ಮಾಣದ 150ನೇ ವರ್ಷದಲ್ಲಿ ನಮಗೆಲ್ಲ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ನಮ್ಮ ಸುಯೋಗ. ನಾವೆಲ್ಲ ಐಕ್ಯಮತದಲ್ಲಿ ಭಾಗವಹಿಸಿ ಈ ಧಾರ್ಮಿಕ ಉತ್ಸವವನ್ನು ಯಶಸ್ವಿಗೊಳಿಸೋಣ ಎಂದು ಹಾರೈಸಿದರು.
ತುಳುನಾಡಿನಲ್ಲಿ ಹಿರಿಯರು ಸ್ಥಾಪಿಸಿದ ದೇಗುಲ-ದೈವಸ್ಥಾನ ಮೂಲಕ ಆರಾಧನೆಯಾಗುತ್ತಿದ್ದು, ಇದರಿಂದ ಹಿಂದುತ್ವಕ್ಕೆ ನೀಡಿದ ದೊಡ್ಡ ಕೊಡುಗೆ. ನಮ್ಮ ನೆಲದ ಪರಂಪರೆ, ಆಚಾರ, ಸಂಸ್ಕೃತಿ ಮುಂದಿನ ಪೀಳಿಗೆಗೆ ಇಂತಹ ಆಚರಣೆಗಳು ಹೆಚ್ಚು ಹೆಚ್ಚು ಆಗಬೇಕಿದೆ. ಜನಾರ್ದನ ಪೂಜಾರಿ, ಚಿತ್ತರಂಜನ್ ಕೆ. ಅವರು ನಮಗೆಲ್ಲ ಪ್ರೇರಣೆಯಾಗಿದ್ದು, ಧಾರ್ಮಿಕ ಸೇವೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.
ಕಂಕನಾಡಿ ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಕೆ. ಅಧ್ಯಕ್ಷತೆ ವಹಿಸಿದ್ದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಗರಡಿ ಕ್ಷೇತ್ರದ 150ನೇ ಸಂಭ್ರಮ ಸಮಿತಿ ಪ್ರಧಾನ ಸಂಚಾಲಕ ಎಂ. ಮೋಹನ್ ಉಜ್ಜೋಡಿ, ಕಂಕನಾಡಿ ಮಹಾಲಿಂಗೇಶ್ವರ ದೇವಸ್ಥಾನ ಉಪಾಧ್ಯಕ್ಷ ಎ. ಕೃಷ್ಣಮೂರ್ತಿ, ಮರೋಳಿ ಸೂರ್ಯನಾರಾಯಣ ದೇವಸ್ಥಾನದ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಕೆ.ಪಿ.ಶೆಟ್ಟಿ, ಗರಡಿ ಕ್ಷೇತ್ರದ ಮೊಕ್ತೇಸರರಾದ ದಾಮೋದರ ನಿಸರ್ಗ, ದಿವರಾಜ್, ದಿನೇಶ್ ಅಂಚನ್, ವಿಠಲ್, ಜೆ. ಕಿಶೋರ್ ಕುಮಾರ್, ಎ.ವಾಮನ ಅಳಪೆ, ಜೆ.ವಿಜಯ್ ಉಪಸ್ಥಿತರಿದ್ದರು. ದಿನೇಶ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಪೊರೇಟರ್ ಸಂದೀಪ್ ಗರೋಡಿ ವಂದಿಸಿದರು.