ಮಂಗಳೂರು: ಚುನಾವಣಾ ಆಯೋಗದ ಸೂಚನೆಯನ್ವಯ ಅರ್ಹ ವಿದ್ಯಾರ್ಥಿಗಳಿಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಲು ವೋಟರ್ಸ್ ಹೆಲ್ಪ್ಲೈನ್ ಅಪ್ಲಿಕೇಶನ್ ಬಳಕೆ ಕುರಿತಂತೆ ಅಗತ್ಯ ಪ್ರಾತ್ಯಕ್ಷಿಕೆಯನ್ನು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಗುರುವಾರ ಆಯೋಜಿಸಲಾಗಿತ್ತು.
ಪ್ರಭಾರ ಪ್ರಾಂಶುಪಾಲ ಡಾ. ಹರೀಶ ಎ ಅವರ ನೀತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಿಕೆ, ಕಾಲೇಜಿನ ಮತದಾರರ ಸಾಕ್ಷರತಾ ಸಂಘದ ನೋಡಲ್ ಅಧಿಕಾರಿ ಡಾ. ಭಾರತಿ ಪಿಲಾರ್ ಅವರು ವೋಟರ್ಸ್ ಹೆಲ್ಪ್ಲೈನ್ ಅಪ್ಲಿಕೇಶನ್ ಬಳಕೆಯ ಕುರಿತು, ಇನ್ನೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳದ ಅರ್ಹ ವಿದ್ಯಾರ್ಥಿಗಳಿಗೆ ಹಂತಹಂತವಾಗಿ ವಿವರಿಸಿ ಹೇಳಿದರು. ಗೂಗಲ್ ಪ್ಲೇ ಸ್ಟೋರ್ನಿಂದ ಡೌನ್ ಲೋಡ್ ಮಾಡಬಹುದಾದ ಈ ಅಪ್ಲಿಕೇಶನ್ ಮೂಲಕ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂದು ಪರೀಕ್ಷಿಸಬಹುದು, ಜೊತೆಗೆ ದೂರು ಸಲ್ಲಿಸಲೂ ಸಾಧ್ಯವಿದೆ, ಎಂದರು.
ಒಂದು ಹಂತದಲ್ಲಿ 200 ವಿದ್ಯಾರ್ಥಿಗಳಂತೆ ಎರಡು ಹಂತಗಳಲ್ಲಿ ಒಟ್ಟು ಸುಮಾರು 400 ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆಯ ಲಾಭ ಪಡೆದರು.