ಮಂಗಳೂರು: ಕೋವಿಡ್ ಸಮಯದಲ್ಲಿ ರೂಪುಗೊಂಡ ಸಿನಿಮಾ ಅಬತರ ಆ.18ರ ಕೃಷ್ಣ ಜನ್ಮಾಷ್ಟಮಿಯಂದು ತೆರೆ ಕಾಣಲಿದೆ. ಹಲವಾರು ವಿಶೇಷತೆಗಳನ್ನು ಒಳಗೊಂಡ ಈ ಸಿನಿಮಾವನ್ನು ಖ್ಯಾತ ರಂಗ ನಿರ್ದೇಶಕ ದೇವದಾಸ್ ಕಾಪಿಕಾಡ್ ಹಾಗೂ ಅವರ ಪುತ್ರ ಅರ್ಜುನ್ ಕಾಪಿಕಾಡ್ ಕೋವಿಡ್ ಕಾಲದಲ್ಲಿ ರೂಪಿಸಿದ್ದು, ಇದೀಗ ರಿಲೀಸ್ ಆಗಲಿದೆ.
ಈ ಸಿನಿಮಾದಲ್ಲಿ ನಾಯಕ ನಟನಾಗಿ ಅರ್ಜುನ್ ಕಾಪಿಕಾಡ್ ಅವರು ಅಭಿನಯಿಸುವುದರೊಂದಿಗೆ ಮೊದಲ ಬಾರಿಗೆ ಅವರು ಆ್ಯಕ್ಷನ್ ಕಟ್ ಹೇಳಲಿದ್ದಾರೆ. ವಿಶೇಷವೆಂದರೆ ಸಿನಿಮಾದ ರಿಲೀಸ್ ಆಗೋದಕ್ಕಿಂತ ಮೊದಲೇ ಮಂಗಳೂರು, ಮೂಡುಬಿದಿರೆ, ಪುತ್ತೂರು, ಉಡುಪಿ, ಪಡುಬಿದ್ರೆ, ಕಿನ್ನಿಗೋಳಿ, ಗುರುಪುರ, ಕುಲಶೇಖರ ಮೊದಲಾಡೆ ಇರುವ ಅನಾಥಾಶ್ರಮದ ಮಕ್ಕಳಿಗೆ ಸಿನಿಮಾ ತೊರಿಸುವ ಕೆಲಸವನ್ನು ಚಿತ್ರತಂಡ ವ್ಯವಸ್ಥೆ ಮಾಡಿದೆ. ಆ.16 ಹಾಗೂ 17ರಂದು 800ಕ್ಕೂ ಅಧಿಕ ಮಕ್ಕಳು ಕೆಎಸ್ಆರ್ ಟಿಸಿ ಬಳಿಯಿರುವ ಆ್ಯಡ್ ಲ್ಯಾಬ್ ಚಿತ್ರಮಂದಿರದಲ್ಲಿ ಈ ಸಿನಿಮಾ ವೀಕ್ಷಿಸಲಿದ್ದಾರೆ.
ಸಂಪೂರ್ಣ ಹಾಸ್ಯಮಯ ಕಥಾಹಂದರವುಳ್ಳ ಈ ಸಿನಿಮಾಕ್ಕೆ ದೇವದಾಸ್ ಕಾಪಿಕಾಡ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಬೊಳ್ಳಿ ಮೂವೀಸ್ ಲಾಂಛನದಡಿಯಲ್ಲಿ ಮೂಡಿ ಬಂದ ಅಬತರ ಸಿನಿಮಾದ ನಟಿ ಗಾನಾ ಭಟ್ ಮೊದಲ ಬಾರಿಗೆ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಖ್ಯಾತ ಹಿನ್ನೆಲೆ ಗಾಯಕ ನಕುಲ್ ಅಭ್ಯಂಕರ್ ಈ ಸಿನಿಮಾಗೆ ಮೊದಲ ಬಾರಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಶೇಷವೆಂದರೆ ಪದವಿ ವಿದ್ಯಾರ್ಥಿ ನಿಖಿಲ್ ಸಾಲ್ಯಾನ್ ನಿರ್ಮಾಪಕರಾಗಿದ್ದು ಹಾಗೂ ವೀರಾಜ್ ಅತ್ತಾವರ ಸಹ ನಿರ್ಮಾಪಕರಾಗಿದ್ದಾರೆ.