ಮಂಗಳೂರು: ಕೆಎಂಸಿ ಆಸ್ಪತ್ರೆ, ಅತ್ತಾವರ, ಮಂಗಳೂರಿನ ವೈದ್ಯರ ತಂಡದ ವೈದ್ಯಕೀಯ ಪರಿಣತಿ ಮತ್ತು ತಂಡ ಪ್ರಯತ್ನದ ಮೂಲಕ 19 ವರ್ಷ ವಯಸ್ಸಿನ ಯುವಕನೊಬ್ಬ ಆರು ತಿಂಗಳುಗಳಿಂದ ತನ್ನ ಎಡ ದವಡೆಗೆ ಅಂಟಿಕೊಂಡಿದ್ದ ಮಾರಕ ಗಡ್ಡೆಯಿಂದ ಮುಕ್ತಿ ಪಡೆದುಕೊಂಡಿದ್ದಾನೆ. ಉತ್ತರ ಕರ್ನಾಟಕದ ಹಲವಾರು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಹಾರ ಸಿಗದ ಬಳಿಕ ಈ ಯುವಕನಿಗೆ ಆಶಾಕಿರಣವಾದದ್ದು ಅತ್ತಾವರ ಕೆಎಂಸಿ ಆಸತ್ರೆಯ ಹೆಸರಾಂತ ಪ್ಲಾಸ್ಟಿಕ್ ಸರ್ಜನ್ ಡಾ| ಕೃಷ್ಣಪ್ರಸಾದ್ ಶೆಟ್ಟಿ ಅವರು.
ಕಿರಣ್ ಗುಣ ಹೊಂದಿದ ದಾರಿ ಸುಲಭವಾದದ್ದು ಆಗಿರಲಿಲ್ಲ. ಅವನ ಸಣ್ಣ ವಯಸ್ಸು ಮತ್ತು ಗಡ್ಡೆಯ ಮಾರಕತೆಯನ್ನು ಗಮನದಲ್ಲಿ ಇರಿಸಿಕೊಂಡು ಅವನಿಗೆ ತಕ್ಷಣ ಶಸ್ತ್ರಚಿಕಿತ್ಸೆ ಮಾಡಬೇಕಾಗಿತ್ತು. ಇದಕ್ಕಾಗಿ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಡಾ| ಕೃಷ್ಣಪ್ರಸಾದ್ ಶೆಟ್ಟಿ, ಸರ್ಜಿಕಲ್ ಆಂಕಾಲಜಿ ವಿಭಾಗದ ಡಾ| ಶತ್ರದು ರೇ, ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗದ (ಒಎಂಎಫ್ಎಸ್) ಡಾ| ಸಂದೀಪ್ ಮತ್ತು ಅರಿವಳಿಕೆ ಶಾಸ್ತ್ರಜ್ಞೆ ಡಾ| ಮೇಘಾ ತಮ್ಮ ವೈದ್ಯಕೀಯ ಪರಿಣತಿಯನ್ನು ಒರೆಗೆ ಹಚ್ಚಿ ಶಸ್ತ್ರಚಿಕಿತ್ಸಾತ್ಮಕ ಮೈಲಿಗಲ್ಲೊಂದನ್ನು ಸ್ಥಾಪಿಸಿದರು.
ಈ ಶಸ್ತ್ರಚಿಕಿತ್ಸೆಯಲ್ಲಿ ಎಡ ದವಡೆಯ ಮೂಳೆಯಿಂದ ಸಂಧಿಯ ಸಹಿತ ಗಡ್ಡೆಯನ್ನು ಪೂರ್ಣವಾಗಿ ತೆಗೆದುಹಾಕುವುದು ಸೇರಿತ್ತು. ರೋಗಿ ಕಿರಣ್ ಅವರ ಜೀವನ ಗುಣಮಟ್ಟವನ್ನು ಮರಳಿ ಒದಗಿಸಿಕೊಡುವುದಕ್ಕಾಗಿ ದವಡೆಯ ಎಲುಬಿನ ಪುನರ್ ರಚನೆ ಅಗತ್ಯವಾಗಿತ್ತು. ಈ ಸಂಕೀರ್ಣ ಕಾರ್ಯವಿಧಾನದಲ್ಲಿ ಅವನ ಕಾಲಿನ ಮೂಳೆಯಿಂದ ಒಂದು ಭಾಗವನ್ನು ತೆಗೆದು ಕೆಲಸ ಮಾಡಬಲ್ಲ ಹೊಸ ದವಡೆ ಸಂಧಿಯನ್ನಾಗಿ ರೂಪಿಸಿ ಅಳವಡಿಸಲಾಯಿತು.
ಕಿರಣ್ ಅವರಿಗೆ ನಡೆಸಲಾದ ಈ ಶಸ್ತ್ರಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿದ್ದು, ಗಡ್ಡೆಯನ್ನು ಪೂರ್ಣವಾಗಿ ನಿವಾರಿಸಲಾಗಿದೆಯಲ್ಲದೆ ಕೆಲಸ ಮಾಡಬಲ್ಲ ಸಹಜ ದವಡೆಯನ್ನು ಪುನರ್ಸ್ಥಾಪಿಸಲಾಗಿದೆ. ಅತ್ತಾವರ ಕೆಎಂಸಿ ಆಸತ್ರೆಯ ವೈದ್ಯಕೀಯ ಪರಿಣತರ ಅಸಾಮಾನ್ಯ ನೈಪುಣ್ಯ ಮತ್ತು ಜೀವನವನ್ನು ಬದಲಾಯಿಸಬಲ್ಲ ವೈದ್ಯಕೀಯ ಪರಿಹಾರಗಳನ್ನು ಒದಗಿಸುವ ಅವರ ಅವಿಶ್ರಾಂತ ಬದ್ಧತೆಯಲ್ಲಿ ಈ ಶಸ್ತ್ರಚಿಕಿತ್ಸೆ ಒಂದು ಉಲ್ಲೇಖಾರ್ಹ ಸಾಧನೆಯಾಗಿದೆ.
ಚಿಕಿತ್ಸೆಗೆ ಕಿರಣ್ ತೋರಿದ ಬದ್ಧತೆ ಮತ್ತು ಶಸ್ತ್ರಚಿಕಿತ್ಸೆಯ ಹಿಂದಿನ ಸಹಯೋಗಿ ಪ್ರಯತ್ನಗಳನ್ನು ಡಾ| ಕೃಷ್ಣಪ್ರಸಾದ್ ಶೆಟ್ಟಿ ಶ್ಲಾಘಿಸಿದ್ದಾರೆ. “ಕಿರಣ್ ಅವರ ಈ ವೈದ್ಯಕೀಯ ಯಾನವು ಅವರ ಪರಿಶ್ರಮ, ವಿನೂತನ ವೈದ್ಯಕೀಯ ಪರಿಹಾರಗಳು ಮತ್ತು ತಂಡ ಪ್ರಯತ್ನಗಳಿಗೆ ಒಂದು ಮಾದರಿಯಾಗಿದೆ. ಚಿಕಿತ್ಸೆಯ ಯಶಸ್ಸಿನ ಬಗ್ಗೆ ನಾವು ಬಹಳ ಹೆಮ್ಮೆ ಹೊಂದಿದ್ದೇವೆ. ಬದ್ಧತೆಯಿರುವ ವೈದ್ಯಕೀಯ ವೃತ್ತಿ ನಿರತರು ಜತೆಗೂಡಿ ರೋಗಿಯ ಬದುಕಿನಲ್ಲಿ ತರಬಹುದಾದ ಬದಲಾವಣೆಗೆ ಈ ಪ್ರಕರಣವು ಸಾಕ್ಷಿಯಾಗಿದೆ” ಎಂದು ಡಾ| ಕೃಷ್ಣಪ್ರಸಾದ್ ಶೆಟ್ಟಿ ಹೊಗಳಿದ್ದಾರೆ.
ಕಿರಣ್ ಅವರು ತಮ್ಮನ್ನು ಕಾಡುತ್ತಿದ್ದ ಗಡ್ಡೆಯಿಂದ ಪೂರ್ಣವಾಗಿ ಮುಕ್ತಿ ಹೊಂದಿ ಚೇತರಿಸಿಕೊಂಡಿರುವುದು ಆಧುನಿಕ ವೈದ್ಯಕೀಯ ಪರಿಣತಿಯ ಪರಿವರ್ತನಾತ್ಮಕ ಸಾಮರ್ಥ್ಯ ಮತ್ತು ವೈದ್ಯ ಸಮುದಾಯದ ಕಾರ್ಯವೈಖರಿಗೆ ನಿದರ್ಶನವಾಗಿದೆ. ಅಸಾಧ್ಯ ಅನ್ನಿಸುವ ಸವಾಲು ಎದುರಿಗಿದ್ದಾಗಲೂ ಆಶಾಕಿರಣವೊಂದು ಇದ್ದೇ ಇರುತ್ತದೆ ಮತ್ತು ಗುಣ ಹೊಂದುವ ಸಾಧ್ಯತೆ ಇರುತ್ತದೆ ಎನ್ನುವುದನ್ನು ಈ ಪ್ರಕರಣವು ನೆನಪಿಸುತ್ತದೆ.
ಅತ್ತಾವರದ ಕೆಎಂಸಿ ಆಸ್ಪತ್ರೆಯು ನರ್ಸಿಂಗ್ ಸೇವೆಗಳ ಪೂರೈಕೆಯಡಿ ಎನ್ಎಬಿಎಚ್ ಎಕ್ಸಲೆನ್ಸ್ ಲೆವೆಲ್ ಪ್ರಮಾಣೀಕೃತವಾಗಿರುವ ಹಿರಿಮೆಯನ್ನು ಹೊಂದಿದ್ದು, ಇದು ದಾದಿ ಸೇವಾ ಪೂರೈಕೆಯಲ್ಲಿ ಆಸ್ಪತ್ರೆಯೊಂದಕ್ಕೆ ಅತ್ಯುಚ್ಚ ಮಟ್ಟದ ಪ್ರಮಾಣೀಕರಣವಾಗಿದೆ. ನರ್ಸಿಂಗ್ ಎಕ್ಸಲೆನ್ಸ್ (ಎಕ್ಸಲೆನ್ಸ್ ಮಟ್ಟ) ಮಾತ್ರವಲ್ಲದೆ, ಅತ್ತಾವರದ ಕೆಎಂಸಿ ಆಸ್ಪತ್ರೆಯು ಅತ್ಯಂತ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಪೂರೈಸುತ್ತಿರುವುದಕ್ಕಾಗಿ ಆಸತೆಗಳಿಗಾಗಿ ಇರುವ 5ನೇ ಆವೃತ್ತಿಯ ಎನ್ಎಬಿಎಚ್ ಪ್ರಮಾಣೀಕರಣವನ್ನೂ ತನ್ನದಾಗಿಸಿಕೊಂಡಿದೆ. ಇದು ಸಂಸ್ಥೆಯ ಇನ್ನೊಂದು ಬಹುದೊಡ್ಡ ಸಾಧನೆಯಾಗಿದೆ.