ಪುತ್ತೂರು: ವಿವಿಧ ಆಸೆ, ಆಮಿಷಗಳಿಗೊಳಗಾಗಿ ಲವ್ ಜಿಹಾದ್ ಮೂಲಕ ಯುವತಿಯರು ತಮ್ಮ ಧರ್ಮವನ್ನು ತೊರೆದು ಅನ್ಯ ಧರ್ಮದ ಕಟ್ಟುಪಾಡಿಗೊಳಗಾಗುವ ಮೊದಲು ತಮ್ಮ ಭವಿಷ್ಯದ ಕುರಿತು ಗಂಭೀರ ಚಿಂತನೆ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ನಟಿ, ರಾಜಕಾರಣಿ ಮಾಳವಿಕಾ ಅವಿನಾಶ್ ಕಳಕಳಿ ವ್ಯಕ್ತಪಡಿಸಿದ್ದಾರೆ.
ಪುತ್ತೂರಿನ ತೆಂಕಿಲದಲ್ಲಿರುವ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಭಾಭವನದಲ್ಲಿ ಕೇಶವ ಸ್ಮೃತಿ ಸಂವರ್ಧನ ಸಮಿತಿಯು `ಮಹಿಳೆ: ಹಿಂದೆ, ಇಂದು ಮತ್ತು ನಾಳೆ’ ಎಂಬ ವಿಚಾರಧಾರೆಯಡಿ ಯೋಜಿಸಿದ ಪುತ್ತೂರು ಜಿಲ್ಲಾ ಮಹಿಳಾ ಸಮ್ಮೇಳನ `ನಾರಿ ಶಕ್ತಿ ಸಂಗಮ’ದಲ್ಲಿ ಸಮಾರೋಪದಲ್ಲಿ ಪ್ರೇರಣಾ ನುಡಿಗಳನ್ನಾದರು. ಹಿಂದೂ ಧರ್ಮದಲ್ಲಿ ಏಕ ಪತ್ನಿ ಸಂಸ್ಕಾರವಿದ್ದು, ಮಹಿಳೆಯರು ಪತಿಯೊಂದಿಗೆ ಸಮಾನ ಹಕ್ಕುಗಳಿಗೆ ಬಾಧ್ಯಸ್ಥಳಾಗಿದ್ದರೆ ಮುಸ್ಲಿಂ ಧರ್ಮದಲ್ಲಿ ಬಹು ಪತ್ನಿತ್ವದ ಪದ್ಧತಿಯಿದೆ. ಅನ್ಯ ಧರ್ಮೀಯರನ್ನು ವಿವಾಹವಾಗುವ ಹಿಂದೂ ಯುವತಿ ತನ್ನ ಸಮಾನ ಹಕ್ಕುಗಳಿಂದ ವಂಚಿತಳಾಗುತ್ತಾಳಲ್ಲದೆ ಬಹುಪತ್ನಿತ್ವದಡಿ ಓರ್ವಳಾಗಿ ಬದುಕು ಸಾಗಿಸುವ ಅನಿವಾರ್ಯತೆ ಒದಗಿ ಬರುತ್ತದೆ ಎಂದು ವಿಶ್ಲೇಷಿಸಿದರು.
`ನೀನು ಮತಾಂತರವಾಗಿ ಮುಸ್ಲಿಂ ಧರ್ಮಕ್ಕೆ ಬಂದರಷ್ಟೇ ಪ್ರೀತಿಸುತ್ತೇನೆ’ ಎನ್ನುವುದಾದರೆ ಅದು ಯಾವ ರೀತಿಯ ಪ್ರೀತಿ, ಪ್ರೇಮ ಎಂಬುದನ್ನು ಪ್ರತಿಯೊಬ್ಬ ಯುವತಿ ಅರ್ಥೈಸಿಕೊಳ್ಳಬೇಕಾಗಿದೆ. ಇದಕ್ಕೆ ಪೂರಕವಾಗಿ ಮಹಿಳೆಯರು ಪ್ರಜ್ಞಾವಂತಿಕೆಯನ್ನು ಹೆಚ್ಚಿಸಿಕೊಳ್ಳುವುದಲ್ಲದೆ ಜಗತ್ತಿನ ಆಗು ಹೋಗುಗಳ ಕುರಿತು ಪರಿಜ್ಞಾನ ಹೊಂದಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಭಾರತೀಯ ಚಿಂತನೆಯಲ್ಲಿ ವೇದ ಕಾಲದಿಂದಲೂ ಪುರುಷ ಮಹಿಳೆ ಎಂಬ ಬೇಧ ಭಾವ ಇರಲಿಲ್ಲ. ವಿದೇಶಿಯರ ಆಕ್ರಮಣ, ಶೋಷಣೆಯ ಭಯದಿಂದ ಹಿಂದಕ್ಕೆ ಸರಿಯಲಾರಂಭಿಸಿದ್ದಳು. ಇಂತಹ ಶೋಷಣೆಯಿಂದ ಪಾರಾಗಲು ಆತ್ಮಾಹುತಿಯಂತಹ ಭಯಾನಕ ಕೃತ್ಯಕ್ಕೆ ತನ್ನನ್ನು ಒಡ್ಡಿಕೊಳ್ಳುತ್ತಿದ್ದಳು. ಅಂತೆಯೇ, ಅನೇಕ ವೀರ ಮಹಿಳೆಯರು ಕ್ಷಾತ್ರ ಪ್ರದರ್ಶನ ಮಾಡಿ ಸಾಹಸವನ್ನೂ ಮೆರೆದಿದ್ದಾರೆ. ಇಂತಹ ಸಂದರ್ಭದಲ್ಲಿ ಹಿಂದೂ ಧರ್ಮವನ್ನು ಅನ್ಯರು ಸುಧಾರಣೆ ಮಾಡಲು ಹೋಗಲಿಲ್ಲ. ಬದಲಾಗಿ ಧರ್ಮದೊಳಗಿನ ಮಂದಿ ಸಮಾಜದ ಸುಧಾರಣೆ ಮಾಡಿದ್ದಾರೆ. ಧರ್ಮದ ಸಂಸ್ಕೃತಿ, ಸಂಸ್ಕಾರವನ್ನು ನಾಶಪಪಡಿಸಿ ಸಮಾನತೆಯನ್ನು ಸಾಧಿಸುವ ಉದ್ದೇಶ ಹಿಂದೂ ಧರ್ಮಕ್ಕಿಲ್ಲ ಎಂದು ಮಾಳವಿಕಾ ಅವಿನಾಶ್ ಹೇಳಿದರು.
ಮೂಲಭೂತ ನಂಬಿಕೆಗಳ ತಳಹದಿಯಲ್ಲಿ ಮನುಷ್ಯ ಬದುಕುತ್ತಾನೆ. ಲಿಂಗ ತಾರತಮ್ಯವಿಲ್ಲದ ಸಮಾನತೆಯ ಬದುಕು ಹಿಂದೂ ಧರ್ಮದ ತಿರುಳು. ಇದು ಅರ್ಧ ನಾರೀಶ್ವರನಲ್ಲೂ ದರ್ಶನವಾಗುತ್ತದೆ. ಮನುಷ್ಯನ ವಿಕಾಸ ಆತ್ಮದಲ್ಲಿ ಆಗಬೇಕಾಗಿದೆ. ಇದು ಹಿಂದೂ ಧರ್ಮದ ಮೂಲೋದ್ದೇಶವೂ ಹೌದು ಎಂದು ತಿಳಿಸಿದ ಅವರು, ಹಿಂದೂ ಧರ್ಮದಲ್ಲಿ ಮಹಿಳೆಯರು ಪುರುಷರಂತೆ ಇರುವ ಅಗತ್ಯವೂ ಇಲ್ಲ. ಪುರುಷರಂತೆ ಜೀವನ ಶೈಲಿಯ ಅನುಕರಣೆಯೂ ಸಲ್ಲದು. ನಮ್ಮ ಮಹಿಳೆಯರಿಗೆ ಸ್ಥಾನಮಾನ ಗಳಿಸುವುದನ್ನು ಹೊರಗಿನವರು ಬಂದು ಹೇಳಿ ಕೊಡಬೇಕಾದ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಸಭಾ ಕಾರ್ಯಕ್ರಮದ ಮೊದಲು ನಾರೀ ಶಕ್ತಿ ಸಂಗಮಕ್ಕೆ ಚಾಲನೆ
ಹಿರಿಯ ವೈದ್ಯೆ, ಸಮಾಜ ಸೇವಕಿ ಡಾ. ಗೌರಿ ಪೈ ದೀಪ ಪ್ರಜ್ವಲಿಸಿ ಮಹಿಳಾ ಸಮ್ಮೇಳನಕ್ಕೆ ಚಾಲನೆ ನೀಡಿದರು. ಕಮಲಾ ಪ್ರಭಾಕರ ಭಟ್ ಡಾ. ಗೌರಿ ಪೈ ಅವರನ್ನು ಗೌರವಿಸಿದರು.
ವಿದ್ಯಾ ಭಾರತಿ ಕರ್ನಾಟಕ ಪ್ರಾಂತ ಉಪಾಧ್ಯಕ್ಷೆ ಡಾ. ಲಕ್ಷ್ಮಿ ಎನ್. ಪ್ರಸಾದ್, ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಪುತ್ತೂರು ಜಿಲ್ಲಾ ಸಂಚಾಲಕಿ ಸುಗುಣ,ಸಮ್ಮೇಳನದ ವಿಭಾಗ ಸಹ ಸಂಚಾಲಕರಾದ ಗುಣವತಿ ಕೊಲ್ಲಂತಡ್ಕ, ಶ್ರದ್ಧಾ ರೈ,ಸಮಿತಿಯ ಪುತ್ತೂರು ಜಿಲ್ಲಾ ಸಂಚಾಲಕಿಯರಾದ ತೇಜಸ್ವಿನಿ ಶೇಖರ್ ಕಟ್ಟಪುಣಿ,ವಿದ್ಯಾಗೌರಿ, ಶಕುಂತಳಾ, ವಿಜಯ ಸರಸ್ವತಿ ಉಪಸ್ಥಿತರಿದ್ದರು.