ಮಂಗಳೂರು: ಈ ಬಾರಿ ವಾಡಿಕೆಗಿಂತ ಹೆಚ್ಚಿಗೆ ಸುಡುತ್ತಿರುವ ಬಿಸಿಲಿನಿಂದ ಭೂಮಿಯ ಮೇಲೆ ಕಾವೇರಿದೆ. ಇದರಿಂದ ಮನೆ ಒಳಗೂ ಇರಲಾಗದೇ ಹೊರಗು ಹೋಗಲಾದೆ ಜನರು ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನೈಸರ್ಗಿಕವಾಗಿ ಹಸುವಿನ ಸಗಣಿಯಿಂದ ಮನೆಯ ಗೋಡೆಗೆ ಬಳಸುವ ಪೈಂಟ್ನ್ನು ತಯಾರಿಸಲಾಗುತ್ತಿದೆ ಇದು ಮಂಗಳೂರಿನ ಹೊಸ ಅನ್ವೇಷಣೆ ಆಗಿದೆ. ಈ ಗುಡಿಕೈಗಾರಿಕೆಯನ್ನು ಆರಂಭಿಸಿದ್ದು ಹಳೆಯಂಗಡಿ ನಿವಾಸಿ ಅಕ್ಷತಾ ಎ.
ಗ್ರಾಮದ ಗುಡಿ ಕೈಗಾರಿಕೆಯಲ್ಲಿ ಗೋಮಯದಿಂದ(ಹಸುವಿನ ಸೆಗಣಿ) ತಯಾರಿಸುವ ಪರಿಸರ ಸ್ನೇಹಿ ಬಣ್ಣ ಜನಪ್ರಿಯವಾಗುತ್ತಿದೆ. “ಸನ್ನಿಧಿ ಪ್ರಕೃತಿ” ಎಂಬ ಬ್ರಾಂಡ್ ಹೆಸರಿನಲ್ಲಿ ಈ ಪರಿಸರ ಸ್ನೇಹಿ ಬಣ್ಣವು ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಮತ್ತು ಯಾವುದೇ ವಾಸನೆಯಿಲ್ಲದ ಮತ್ತು ಅಗ್ಗದ ವೆಚ್ಚದ್ದಾಗಿದೆ.
ಅಕ್ಷತಾ ಅವರು 2022 ರಲ್ಲಿ ರಾಜಸ್ಥಾನದ ಜೈಪುರದಲ್ಲಿರುವ ಕುಮಾರಪ್ಪ ನ್ಯಾಷನಲ್ ಹ್ಯಾಂಡ್ಮೇಡ್ ಪೇಪರ್ ಇನ್ಸ್ಟಿಟ್ಯೂಟ್ನಲ್ಲಿ ಉದ್ಯಮಶೀಲತಾ ತರಬೇತಿ ಅಧಿವೇಶನದಲ್ಲಿ ಭಾಗವಹಿಸಿದ ನಂತರ ಈ ಗುಡಿ ಕೈಗಾರಿಕೆಯನ್ನು ಪ್ರಾರಂಭಿಸಿದರು.
ಈ ಸುಡು ಬೇಸಿಗೆಯಲ್ಲಿ ಈ ಗುಡಿ ಕೈಗಾರಿಕೆ ಉದ್ಯಮಕ್ಕೆ ಕರ್ನಾಟಕದಾದ್ಯಂತ ಅಲ್ಲದೇ ನೆರೆಯ ರಾಜ್ಯಗಳಿಂದಲೂ ಬೇಡಿಕೆ ಹೆಚ್ಚಾಗಿದೆ. ನೈಸರ್ಗಿಕ ಬಣ್ಣವು ಥರ್ಮಲ್ ಇನ್ಸುಲೇಟರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ವಿಕಿರಣವನ್ನು ತಡೆಯುತ್ತದೆ, ಇದರಿಂದಾಗಿ ಬೇಸಿಗೆಯಲ್ಲಿ ಮನೆ ತಂಪಾಗಿರುತ್ತದೆ ಎಂದು ಘಟಕದ ಮಾಲಕಿ ಅಕ್ಷತಾ ಎ ಹೇಳುತ್ತಾರೆ.