ಮಂಗಳೂರು: “ಆಧುನಿಕ ಗ್ರಂಥಾಲಯಗಳು ಯಾವುದೇ ಶೈಕ್ಷಣಿಕ ಸಂಸ್ಥೆಯ ಪ್ರಗತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಬಲ್ಮಠ ಕಾಲೇಜು ಗ್ರಂಥಾಲಯವು ಇ-ಲೈಬ್ರೆರಿ ತಂತ್ರಾಂಶವನ್ನು ಅಳವಡಿಸುವುದರ ಮೂಲಕ ಸಂಪೂರ್ಣವಾಗಿ ಸ್ವಯಂಚಾಲಿತವಾಗಿದೆ ಹಾಗೂ ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಏರಿಸಲಾಗಿದೆ” ಎಂದು ಕಾರ್ಕಳ ಮಂಜುನಾಥ ಪೈ ಮೆಮೋರಿಯಲ್ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಗ್ರಂಥಪಾಲಕರಾದ ವೆಂಕಟೇಶ್ ಅವರು ಹೇಳಿದರು.
ಅವರು ಬಲ್ಮಠದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇ-ಗ್ರಂಥಾಲಯದ ಉದ್ಘಾಟನೆಯ ಅಂಗವಾಗಿ ನಡೆದ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ನವದೆಹಲಿಯ ರಾಷ್ಟ್ರೀಯ ಮಾಹಿತಿ ಕೇಂದ್ರವು ಇ-ಗ್ರಂಥಾಲಯದ ಮೂಲಕ ಗ್ರಂಥಾಲಯ ನಿರ್ವಹಣೆಯನ್ನು ಸರಳಗೊಳಿಸಿದೆ ಎಂದು ಅವರು ಹೇಳಿದರು.
ಪ್ರಾಂಶುಪಾಲರಾದ ಪ್ರೊ. ಜಗದೀಶ ಬಾಳ ಅವರು ಇ-ಗ್ರಂಥಾಲಯವನ್ನು ಉದ್ಘಾಟಿಸಿ, ಗ್ರಂಥಾಲಯದ ವಿವಿಧ ಸೇವೆಗಳನ್ನು ಕಂಪ್ಯೂಟರ್ ಮೂಲಕ ವೀಕ್ಷಣೆ ಮಾಡಿ ಚಾಲನೆಯನ್ನು ನೀಡಿದರು ಹಾಗೂ “ಗ್ರಂಥಾಲಯ ಗಣಕೀಕರಣ ಇಂದಿನ ಆಗತ್ಯವಾಗಿದ್ದು, ಕಂಪ್ಯೂಟರ್ ತಂತ್ರಜ್ಣಾನದ ಅಳವಡಿಕೆಯೊಂದಿಗೆ ಇಡೀ ಗ್ರಂಥಾಲಯದ ಚಟುವಟಿಕೆಗಳಿಗೆ ಮಾದರಿಯಾಗಲಿದೆ” ಎಂದು ಹೇಳಿದರು. ಬಳಿಕ ಶ್ರೀ ವೆಂಕಟೇಶ್ ಅವರು ಇ-ಗ್ರಂಥಾಲಯದಲ್ಲಿ ಲಭ್ಯವಿರುವ ವಿವಿಧ ಸೇವೆಗಳನ್ನು ಉಪಯೋಗಿಸುವ ಬಗ್ಗೆ ಹ್ಯಾಂಡ್ಸ್ ಆನ್ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು.
ಗ್ರಂಥಾಲಯ ಮುಖ್ಯಸ್ಥರಾದ ಡಾ. ಶೈಲರಾಣಿ ಬೋಳಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಘಶ್ರೀ ಕಾರ್ಯಕ್ರಮ ನಿರೂಪಿಸಿದರು. ಡಾ. ಚಂದ್ರಶೇಖರ್ ಕೆ. ವಂದನಾರ್ಪಣೆ ಗೈದರು.