ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಕೆಡ್ಡಸ ಹಬ್ಬ ಆಚರಿಸಲಾಯಿತು.
ಕಾರ್ಯಕ್ರಮದ ಮೊದಲಿಗೆ ತುಳಸಿಕಟ್ಟೆಯ ಮುಂದೆ ಗೋಮಯದಿಂದ ಶುದ್ಧೀಕರಿಸಿ, ಭೂಮಿ ದೇವಿಯ ಸಾನಿಧ್ಯ ರಚಿಸಿ, ದೀಪಹಚ್ಚಿ, ಮಣೆಯ ಮೇಲೆ ಎಣ್ಣೆ, ಸೀಗೆಕಾಯಿ, ಅರಶಿನ – ಕುಂಕುಮ, ಪಚ್ಚೆ ಹಸಿರಿನ ಹುಡಿ, ವೀಳ್ಯದೆಲೆ ಇತ್ಯಾದಿಗಳನ್ನು ಭೂಮಿ ದೇವಿಯ ಸ್ನಾನಕೋಸ್ಕರ ಇಟ್ಟು ಹುರುಳಿ, ಹೆಸರುಕಾಳು, ಒಣಕೊಬ್ಬರಿ, ಕಡಲೆಕಾಯಿಗಳ ಮಿಶ್ರಣ(ನನ್ನೇರಿ) ಇದರೊಂದಿಗೆ ತುಳುನಾಡಿನ ವಿವಿಧ ಭಕ್ಷ್ಯಗಳನ್ನು(ಸಾರ್ನಡ್ಡೆ) ಊರಿನ ಹಿರಿಯ ತಾಯಿಯಾದ ಜಯಂತಿಯವರು ಭೂಮಿಗೆ ಎಣ್ಣೆ ಹಾಲು ಹಾಕಿ ಬಡಿಸಿದರು. ವಿದ್ಯಾರ್ಥಿಗಳು ಸುತ್ತ ನಿಂತು ಈ ಕಾರ್ಯಕ್ರಮ ವೀಕ್ಷಿಸಿದರು.
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ವಿದ್ಯಾಶ್ರೀ, ಕೆಡ್ಡಸದ ಮಹತ್ವ ತಿಳಿಸಿದರು. ವೇದಿಕೆಯಲ್ಲಿ ಶ್ರೀರಾಮ ಸೌಹಾರ್ದ ಸಹಕಾರಿ ನಿಯಮಿತ ಇದರ ಕಾರ್ಯನಿರ್ವಾಹಕರಾದ ಸಂಗೀತ, ಶ್ರೀರಾಮ ಶಿಶುಮಂದಿರದ ಪ್ರಮುಖರಾದ ಶೋಭಾ ಹಾಗೂ ಶ್ರೀರಾಮ ಪ್ರಾಥಮಿಕ ವಿಭಾಗದ ಅಧ್ಯಾಪಕರಾದ ಸುಮಂತ್ ಆಳ್ವ ಎಮ್, ರೂಪಕಲಾ ಎಂ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಸುಖೇಶ್ ಸ್ವಾಗತಿಸಿ, ಸುಶ್ಮಿತಾ ಭಟ್ ನಿರೂಪಿಸಿ, ವೈದೇಹಿ ವಂದಿಸಿದರು.