ದೇಶದ ಪ್ರತಿಷ್ಠಿತ ಬ್ಯಾಂಕ್ಗಳಲ್ಲಿ ಒಂದಾಗಿರುವ ಕರ್ಣಾಟಕ ಬ್ಯಾಂಕ್ ತನ್ನ ‘ಕೆಬಿಎಲ್-ಫಿನ್ಒನ್’ -ಫಿನ್ಟೆಕ್ ಗ್ರೋತ್ ಕಾರ್ಯಕ್ರಮದ ಎರಡನೇ ಆವೃತ್ತಿಯನ್ನು ಸೆಪ್ಟೆಂಬರ್ 5 ರಿಂದ 7 ರ ವರೆಗೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯುತ್ತಿರುವ ‘ಗ್ಲೋಬಲ್ ಫಿನ್ಟೆಕ್ ಫೆಸ್ಟ್-2023′ ರಲ್ಲಿ ಆಯೋಜಿಸಿತು. ‘ದಫಿನ್ಟೆಕ್ಮೀಟ್ಅಪ್’ ಎನ್ನುವ ಸಂಸ್ಥೆಯ ಸಹಭಾಗಿತ್ವದೊಂದಿಗೆ ನಡೆಸಲಾದ ಈ ಕಾರ್ಯಕ್ರಮದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಡಿಜಿಟಲ್ ಆರ್ಥಿಕ ವ್ಯವಸ್ಥೆಯ ಒಳಗೊಳ್ಳುವಿಕೆಯ ಸಾಧ್ಯತೆಯನ್ನು ಕುರಿತು ಪ್ರಧಾನವಾಗಿ ವಿಚಾರವಿನಿಮಯ ಮಾಡಿಕೊಳ್ಳಲಾಯಿತು.
ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಓ ಶ್ರಿಕೃಷ್ಣನ್ ಹೆಚ್ ಅವರು ಮಾತನಾಡಿ “ಕರ್ಣಾಟಕ ಬ್ಯಾಂಕ್ ಫಿನ್ಟೆಕ್ಗಳ ಜೊತೆಗೂಡಿ ಡಿಜಿಟಲ್ ಆರ್ಥಿಕ ವ್ಯವಸ್ಥೆಯನ್ನು ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಉದ್ಯಮಿಗಳಿಗೆ ಹಾಗೂ ಇತರ ಗ್ರಾಹಕರಿಗೆ ನೀಡುವಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿರುವುದಕ್ಕೆ ಸಂತಸಪಡುತ್ತದೆ. ಬ್ಯಾಂಕ್ ಶತಮಾನೋತ್ಸವವನ್ನು ಆಚರಿಸುತ್ತಿದ್ದು, ‘ಸ್ಟಾರ್ಟ್ ಅಪ್ ಎಟ್ 100’ ಮೂಲಕ ‘ಕರ್ನಾಟಕದ ಕರ್ಣಾಟಕ ಬ್ಯಾಂಕ್, ಭಾರತದ ಕರ್ಣಾಟಕ ಬ್ಯಾಂಕ್’ ಆಗಿ ಮತ್ತಷ್ಟು ಬಲಿಷ್ಠವಾಗಿ ಹೊರಹೊಮ್ಮಲಿದೆ.
ಮುಖ್ಯವಾಗಿ ಬ್ಯಾಂಕ್, ಎನ್ಬಿಎಫ್ಸಿಗಳು ಹಾಗೂ ಫಿನ್ಟೆಕ್ ಕಂಪೆನಿಗಳ ಸಹಯೋಗದೊಂದಿಗೆ ಡಿಜಿಟಲ್ ಉತ್ಪನ್ನಗಳಾದ ಡಿಜಿಟಲ್ ಕ್ರೆಡಿಟ್ ಕಾರ್ಡ್, ಯುಪಿಐ ಮೂಲಕ ಕ್ರೆಡಿಟ್, ಇನ್ಶುರೆನ್ಸ್, ಹೂಡಿಕೆ, ವೈಯಕ್ತಿಕ ಸಾಲ ವಿತರಣೆ ಇತ್ಯಾದಿಗಳಿಗೆ ಆದ್ಯತೆ ನೀಡಿ ಎಲ್ಲಾ ಗ್ರಾಹಕರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ.
ಈ ಸಂದರ್ಭದಲ್ಲಿ ಬ್ಯಾಂಕಿನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀ ಶೇಖರ್ ರಾವ್ ಅವರು ಮಾತನಾಡಿ “ಕರ್ಣಾಟಕ ಬ್ಯಾಂಕ್ ಮೊದಲನೆಯದಾಗಿ ಕೃಷಿ ಹಾಗೂ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಉದ್ಯಮಿಗಳಿಗೆ ಆದ್ಯತೆ ನೀಡುವುದು, ಎರಡನೆಯದಾಗಿ ಗ್ರಾಹಕರ ಅವಶ್ಯಕತೆಗಳಿಗೆ ತಕ್ಕುದಾದ ಆರ್ಥಿಕ ಪ್ರೋಡಕ್ಟ್ಗಳನ್ನು ಪರಿಚಯಿಸುವುದು, ಮೂರನೆಯದಾಗಿ ಫಿನ್ಟೆಕ್ ಕಂಪೆನಿಗಳೊಂದಿಗೆ ಸೌಹಾರ್ದಯುತ ಸಹಯೋಗದಂತಹ ಈ ಮೂರು ಅಂಶಗಳಿಗೆ ಹೆಚ್ಚು ಗಮನ ನೀಡಿ ಡಿಜಿಟಲ್ ಆರ್ಥಿಕ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಂಡು ಮುನ್ನಡೆಯಲಿದೆ” ಎಂದು ನುಡಿದರು.
ಕರ್ಣಾಟಕ ಬ್ಯಾಂಕಿನ ವಿವಿಧ ವಿಭಾಗಗಳನ್ನು ಪ್ರತಿನಿಧಿಸುವ ಉನ್ನತ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.