ಬೆಳ್ತಂಗಡಿ: ಹಾಸನ ಜಿಲ್ಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಾಯೋಜಿತ ಸ್ವಸಹಾಯ ಸಂಘಗಳಿಗೆ ಅಗತ್ಯವಿರುವ ಪ್ರಗತಿನಿಧಿ ಸಾಲವನ್ನು ಕರ್ಣಾಟಕ ಬ್ಯಾಂಕಿನಿಂದ ಒದಗಿಸುವ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ.
ಒಪ್ಪಂದ ಪತ್ರವನ್ನು ಇಂದು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಕರ್ಣಾಟಕ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಚೀಫ್ ಎಕ್ಸ್ಕ್ಯೂಟಿವ್ ಆಫೀಸರ್ ಮಹಾಬಲೇಶ್ವರ್ ಎಂ.ಎಸ್.ರವರ ಸಮ್ಮುಖದಲ್ಲಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಲ್.ಎಚ್.ಮಂಜುನಾಥ್ರವರು ಬ್ಯಾಂಕಿನ ಮಹಾ ಪ್ರಬಂಧಕ ರವಿಚಂದ್ರಮ್ರವರೊಡನೆ ಒಪ್ಪಂದ ಪತ್ರವನ್ನು ವಿನಿಮಯ ಮಾಡಿಕೊಂಡರು.
ಈ ಒಪ್ಪಂದದನ್ವಯ ಕರ್ಣಾಟಕ ಬ್ಯಾಂಕ್ ರೂ. 1,000 ಕೋಟಿ ಮೊತ್ತದ ಆರ್ಥಿಕ ನೆರವನ್ನು ಹಾಸನ ಜಿಲ್ಲೆಯ ಸ್ವಸಹಾಯ ಸಂಘಗಳಿಗೆ ಘೋಷಿಸಿದೆ. ಇದೇ ಸಂದರ್ಭ ಸಾಂಕೇತಿಕವಾಗಿ 10 ಸ್ವಸಹಾಯ ಸಂಘಗಳಿಗೆ ರೂ. 48 ಲಕ್ಷ ಮೊತ್ತವನ್ನು ಬಿಡುಗಡೆ ಮಾಡಲಾಯಿತು. ಸಂಪೂರ್ಣ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಲ್ಲಿ ನಿರ್ವಹಣೆಯಾಗುವ ಈ ಕಾರ್ಯಕ್ರಮಕ್ಕೆ ಗ್ರಾಮಾಭಿವೃದ್ಧಿ ಯೋಜನೆಯು ಬ್ಯಾಂಕಿನ ನೆರವಿಗನಾಗಿ (ಬಿ.ಸಿ./ಬಿ.ಎಫ್.) ಕಾರ್ಯನಿರ್ವಹಿಸುವುದು. ಪ್ರಸ್ತುತ ಹಾಸನ ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು 26,000 ಸ್ವಸಹಾಯ ಸಂಘಗಳನ್ನು ರಚಿಸಿದ್ದು, ಈ ಸಂಘಗಳ ಖಾತೆಯನ್ನು ಕರ್ಣಾಟಕ ಬ್ಯಾಂಕಿನಲ್ಲಿ ತೆರೆಯಲಾಗುವುದು. ಮೊದಲ ಹಂತದಲ್ಲಿ ಪ್ರತಿಯೊಂದು ಸಂಘಕ್ಕೂ ರೂ. 5 ಲಕ್ಷ ಮೊತ್ತದ ಆರ್ಥಿಕ ನೆರವನ್ನು ಒದಗಿಸಲಾಗುವುದು. ಕ್ರಮೇಣ ಬಲಿಷ್ಠ ಹೊಂದಿದ ಸಂಘಗಳಿಗೆ ರೂ. 20 ಲಕ್ಷದವರೆಗೆ ಆರ್ಥಿಕ ನೆರವನ್ನು ಒದಗಿಸುವ ನಿರ್ಣಯವನ್ನು ಒಪ್ಪಂದ ಪತ್ರದಲ್ಲಿ ಅಳವಡಿಸಲಾಗಿದೆ.
ಒಪ್ಪಂದ ಪತ್ರ ವಿನಿಮಯ ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕಿನ ಅಸಿಸ್ಟಂಟ್ ಜನರಲ್ ಮ್ಯಾನೇಜರ್ಗಳಾದ ವಸಂತ್ ಕುಮಾರ್ ಮತ್ತು ಡೇನಿಸ್ ಹಾಗೂ ಇತರ ಹಿರಿಯ ಅಧಿಕಾರಿಗಳು, ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್, ಮುಖ್ಯ ಹಣಕಾಸು ಅಧಿಕಾರಿಗಳಾದ ಶಾಂತಾರಾಮ್ ಆರ್. ಪೈ, ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಆಡಳಿತ ನಿರ್ದೇಶಕರಾದ ಜನಾರ್ಧನ್ ಇದ್ದರು.