ಮಂಗಳೂರು: ಚಾರ್ಮಾಡಿ ಘಾಟಿ ಪ್ರದೇಶದ ಚಿಕ್ಕಮಗಳೂರು ವಿಭಾಗದ ಆಲೆಖಾನ್ ಹೊರಟ್ಟಿ ಅರಣ್ಯ ಭಾಗದಲ್ಲಿ ಕಳೆದ 4 ದಿನಗಳ ಹಿಂದೆ ಕಂಡುಬಂದಿದ್ದ ಕಾಡ್ಗಿಚ್ಚು ಹತೋಟಿಗೆ ಅರಣ್ಯ ಇಲಾಖೆ ಹರಸಾಹಸ ನಡೆಸುತ್ತಿದೆ.
ಭಾನುವಾರ ಈ ಪ್ರದೇಶದಗಳಲ್ಲಿ ಕಂಡುಬಂದಿದ್ದ ಕಾಡ್ಗಿಚ್ಚು, ಬಳಿಕ ಹತೋಟಿಗೆ ಬಂದು ಸೋಮವಾರ ಮತ್ತೆ ಕಂಡುಬಂದಿತ್ತು. ಕಾಡ್ಗಿಚ್ಚು ಕಂಡು ಬಂದ ಬಳಿಕ ಇಲಾಖೆ ಸಿಬ್ಬಂದಿ ಅಹರ್ನಿಶಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪ್ರಸ್ತುತ ದೂರದ ಗುಡ್ಡದಲ್ಲಿ ಬೆಂಕಿ ಕಂಡುಬರುತ್ತಿದ್ದು, ಇಲ್ಲಿಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ಇದೆ.ಇದು ಹೀಗೆ ಮುಂದುವರೆದರೆ ಬಾಳೂರು ಅಥವಾ ಕುದುರೆಮುಖ ಕಡೆ ಪಸರಿಸುವ ಸಾಧ್ಯತೆಯು ಇದೆ ಎಂದು ಹೇಳಲಾಗುತ್ತಿದೆ.
ಚಾರ್ಮಾಡಿ ಘಾಟಿಯ ಅಲ್ಲಲ್ಲಿ ಲಘು ಪ್ರಮಾಣದ ಬೆಂಕಿ ಕಂಡುಬರುತ್ತಿದೆ ಎಂದು ಪ್ರತ್ಯಕ್ಷ ದರ್ಶಿ ಪ್ರಯಾಣಿಕರು ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ವನ್ಯಜೀವಿ ವಿಭಾಗದ ಅರಣ್ಯದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಕಂಡುಬಂದಿದ್ದ ಕಾಡ್ಗಿಚ್ಚು ಸಂಪೂರ್ಣ ಹತೋಟಿಗೆ ಬಂದಿದ್ದು ಪ್ರಸ್ತುತ ಯಾವುದೇ ಬೆಂಕಿ ಪ್ರಕರಣಗಳು ವರದಿಯಾಗಿಲ್ಲ ಎಂದು ಬೆಳ್ತಂಗಡಿ ವನ್ಯಜೀವಿ ವಿಭಾಗದ ಆರ್ ಎಫ್ ಒ ಸ್ವಾತಿ ತಿಳಿಸಿದ್ದಾರೆ.