ಬೆಳ್ತಂಗಡಿ : ತಾಲೂಕಿನ ಕಲ್ಮಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿಯಾ ಎಂಬಲ್ಲಿ 2020 ಜೂನ್ ನಲ್ಲಿ ನಡೆದ ದರೋಡೆ ಪ್ರಕರಣಕ್ಕೆ 2 ವರ್ಷ ತುಂಬುತ್ತಾ ಬಂದರು ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ.
ಉಜಿರೆಯಲ್ಲಿ ಅಡಕೆ ವ್ಯಾಪಾರಿಯಾಗಿರುವ ಅಚ್ಯುತ ಭಟ್(57) ರವರು ಕಲ್ಮಂಜ ಗ್ರಾಮದ ನೀರ ಚಿಲುಮೆ ಸಮೀಪದ ಮಿಯಾ ಎಂಬಲ್ಲಿ ಕೃಷಿ ತೋಟ ಹಾಗೂ ಮನೆಯನ್ನು ಹೊಂದಿದ್ದಾರೆ.
2020ರ ಜೂ.26ರಂದು ಮುಂಜಾನೆ 2:40ರ ಹೊತ್ತಿಗೆ ನಾಯಿ ಬೊಗಳಿದ ಸದ್ದು ಕೇಳಿ ತೋಟಕ್ಕೆ ಕಾಡುಪ್ರಾಣಿಗಳು ಬಂದಿರಬಹುದು ಎಂದು ಅಚ್ಯುತ ಭಟ್ ಬಾಗಿಲನ್ನು ತೆರೆದಾಗ ನಾಲ್ವರು 25 ರಿಂದ 30 ರ ಪ್ರಾಯದ ಮುಸುಕುಧಾರಿ ವ್ಯಕ್ತಿಗಳು ಒಳನುಗ್ಗಿ ಭಟ್ಟರನ್ನು ಎಳೆದುಕೊಂಡು ಹೋಗಿ ಕಟ್ಟಿಹಾಕಿದರು.
ಗಲಾಟೆ ಕೇಳಿ ಪಕ್ಕದ ಕೋಣೆಯಲ್ಲಿ ಮಲಗಿದ್ದ ತಂಗಿ ವಿದ್ಯಾ ಕುಮಾರಿ ಹಾಗೂ ತಾಯಿ ಹೊರ ಬಂದಾಗ ಅವರನ್ನು ಕಟ್ಟಿಹಾಕಿ, ಮಕ್ಕಳನ್ನು ಕೋಣೆಯಲ್ಲಿ ಕೂಡಿಹಾಕಿ,ಚಾಕು ತೋರಿಸಿ ಒಂದು ಕೋಟಿ ರೂಪಾಯಿ ನೀಡುವಂತೆ ದರೋಡೆಕೋರರು ಬೇಡಿಕೆ ಇಟ್ಟಿದ್ದರು. ಅಷ್ಟು ಹಣ ತಮ್ಮಲ್ಲಿ ಇಲ್ಲ ಎಂದು ಭಟ್ಟರು ಹೇಳಿದಾಗ ಕಪಾಟುಗಳನ್ನು ಒಡೆದು ಬ್ಯಾಗುಗಳನ್ನು ಜಾಲಾಡಿ
ಸುಮಾರು 350 ಗ್ರಾಂ ಚಿನ್ನ 1 ಕೆಜಿ ಬೆಳ್ಳಿ ಹಾಗೂ ರೂ.25,000 ನಗದು ಸಹಿತ ಸುಮಾರು 12ಲ.ರೂ.ಗಿಂತ ಅಧಿಕ ಮೌಲ್ಯದ ಸೊತ್ತುಗಳನ್ನು ಒಯ್ದಿದ್ದರು. ದರೋಡೆಗೆ ಬಳಸಿದ್ದ ಕೆಲವು ವಸ್ತುಗಳು ಸ್ಥಳದಲ್ಲಿ ಪತ್ತೆಯಾಗಿದ್ದವು.
ಅಂದಿನ ಎಸ್.ಪಿ.ಲಕ್ಮೀಕಾಂತ್, ಡಿವೈಎಸ್ಪಿ ವ್ಯಾಲೆಂಟೈನ್ ಡಿ’ಸೋಜ,ಬೆರಳಚ್ಚು ವಿಭಾಗದ ಡಿವೈಎಸ್ಪಿ ಗಿರೀಶ್ ಸಹಿತ ಪೊಲೀಸ್ ಅಧಿಕಾರಿಗಳು, ಶ್ವಾನದಳ ಸಹಿತ ಆಗಮಿಸಿ ಪರಿಶೀಲನೆ ನಡೆಸಿದ್ದರು. ಪ್ರಕರಣ ನಡೆದು2 ವರ್ಷ ಕಳೆದರೂ ದರೋಡೆಕೋರರ ಯಾವುದೇ ಸುಳಿವು ಲಭಿಸಿಲ್ಲ.
“ಈ ಪ್ರಕರಣದ ಹೆಚ್ಚಿನ ಯಾವುದೇ ಸುಳಿವು ಇದುವರೆಗೆ ಲಭ್ಯವಾಗಿಲ್ಲ,ತನಿಖೆ ಮುಂದುವರೆದಿದೆ” – ಶಿವಕುಮಾರ್, ಪೊಲೀಸ್ ವೃತ್ತ ನಿರೀಕ್ಷಕರು, ಬೆಳ್ತಂಗಡಿ ಠಾಣೆ.