ಮಂಗಳೂರು: ಹಲವಾರು ವರ್ಷಗಳ ಸತತ ಸಂಶೋಧನೆ, ಚಿಕಿತ್ಸೆ ಹಾಗೂ ವೈದ್ಯಕೀಯ ರಂಗದಲ್ಲಾದ ಅಭೂತಪೂರ್ವ ಬೆಳವಣಿಗೆಯಿಂದ ಲಕ್ಷಾಂತರ ಮಂದಿಯನ್ನು ಬಲಿ ತೆಗೆದುಕೊಂಡ ಕೆಲವು ಮಾರಕ ರೋಗಗಳನ್ನು ನಿರ್ಮೂಲನೆ ಮಾಡುವಲ್ಲಿ ನಾವು ಯಶಸ್ವಿ ಸಾಧಿಸಿದ್ದೇವೆ ಎಂದು ಎಂದು ಆಸ್ಟರ್ ಡಿಎಂ ಹೆಲ್ತ್ ಕೇರ್ ನ ಸಂಸ್ಥಾಪಕ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾಕ್ಟರ್ ಅಜಾದ್ ಮೂಪನ್ ಅಭಿಪ್ರಾಯಪಟ್ಟರು.
ಅವರು ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ 13ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಬೇರೆ ದೇಶಗಳಿಗೆ ಹೋಲಿಸಿದಾಗ ನಮ್ಮ ದೇಶದಲ್ಲಿ ಪದವೀಧರ ವೈದ್ಯಕೀಯ ಹಾಗೂ ಅರೆವೈದ್ಯಕೀಯ ವೃತ್ತಿಪರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಇವರೆಲ್ಲರೂ ನಮ್ಮ ಭವಿಷ್ಯವನ್ನು ನಿರ್ಧರಿಸುವವರಾಗಿದ್ದಾರೆ. ಇಷ್ಟರ ತನಕ ನಾವು ಪರಿಣಾಮಾತ್ಮಕ ಬದಲಾವಣೆ ತರುವಲ್ಲಿ ಪ್ರಮುಖ ಸಾಧನೆ ಮಾಡಿದ್ದೇವೆ ಇನ್ನು ಮುಂದೆ ನಾವು ಜನರ ಜೀವನಮಟ್ಟ ಸುಧಾರಣೆ ಮಾಡುವಲ್ಲಿ ಸಕಲ ಪ್ರಯತ್ನಗಳನ್ನು ಕ್ರೂಢೀಕರಿಸಬೇಕಾಗಿದೆ, ಸಂಶೋಧನೆ ಹಾಗೂ ನೂತನ ಆವಿಷ್ಕಾರ ಕ್ಷೇತ್ರದಲ್ಲಿ ಇಂದಿನ ವೈದ್ಯಕೀಯ ಹಾಗೂ ಅರವೈದ್ಯಕೀಯ ವೃತ್ತಿಪರ ಪದವೀಧರರು ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಮುಂದಿನ ಭವಿಷ್ಯ ಉಜ್ವಲವಾಗಿದೆ ಮತ್ತು ವಿಭಿನ್ನವಾಗಿದೆ. ಹೊಸ ತಾಂತ್ರಿಕ ಆವಿಷ್ಕಾರ ಕೃತಕ ಬುದ್ಧಿಮತ್ತೆ ಹಾಗೂ ಸಂಶೋಧನೆಯಂತಹ ಅವಕಾಶಗಳಿಂದಾಗಿ ನಮ್ಮ ಶಕ್ತಿಯು ಹೆಚ್ಚಿದೆ, ಪ್ರತಿಬಂಧಕ ಮುಂಚೆಯೇ ತಿಳಿದುಕೊಳ್ಳಬಹುದಾದ ವ್ಯಕ್ತಿಗತ ಚಿಕಿತ್ಸೆ ಹಾಗೂ ಬಾಗಿದಾರ ಪಾಲ್ಗೊಳ್ಳುವಿಕೆಯಲ್ಲಿ ಚಿಕಿತ್ಸೆ ಕೈಗೊಳ್ಳುವಂತಹ ಸಾಧ್ಯತೆಗಳು ಇನ್ನು ಮುಂದೆ ಸಾಧ್ಯವಾಗಬೇಕು ಎಂದವರು ಆಶಯ ವ್ಯಕ್ತಪಡಿಸಿದರು
ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ 13ನೇ ವಾರ್ಷಿಕ ಘಟಿಕೋತ್ಸವವು ಶನಿವಾರ 28 ಅಕ್ಟೋಬರ್ 2023 ರಂದು ಬೆಳಿಗ್ಗೆ 10.30 ಗಂಟೆಗೆ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಎಂಡ್ಯೂರೆನ್ಸ್ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿಒಟ್ಟು ಎರಡು ಸಾವಿರದ ಇನ್ನೂರ ಎಪ್ಪತ್ತೇಳು ಅಭ್ಯರ್ಥಿಗಳು ಪಿ ಎಚ್ ಡಿ ,ಪೋಸ್ಟ್ ಡಾಕ್ಟರ್ ಫೆಲೋಶಿಪ್ ,ಸ್ನಾತಕೋತ್ತರ ಪದವಿ ,ಸ್ನಾತಕೋತ್ತರ ಡಿಪ್ಲೋಮಾ ಮತ್ತು ವಿವಿಧ ವಿಭಾಗಗಳಲ್ಲಿ ಪದವಿಯನ್ನು ಪಡೆದುಕೊಂಡರು. ವಿವಿಧ ಪದವಿಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದವರಿಗೆ 9 ಚಿನ್ನದ ಪದಕಗಳನ್ನು ವಿತರಿಸಲಾಯಿತು ವಿಶ್ವವಿದ್ಯಾಲಯದ ಉಪಕುಲಪತಿ ಡಾಕ್ಟರ್ ಎಂ ವಿಜಯ್ ಕುಮಾರ್ ಸ್ವಾಗತಿಸಿ ವಾರ್ಷಿಕ ವರದಿಯನ್ನು ಮಂಡಿಸಿದರು.
ವಿಶ್ವವಿದ್ಯಾಲಯದ ಕುಲಪತಿ ಡಾ.ಯೆನೆಪೊಯ ಅಬ್ದುಲ್ಲ ಕುಂಞಿ ಘಟಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಇತರ ಶಾಸನಬದ್ಧ ಅಧಿಕಾರಿಗಳು, ವಿವಿಧ ಕಾಲೇಜಿನ ಡೀನ್ಗಳು ವಿವಿಧ ಕೇಂದ್ರದ ಮುಖ್ಯಸ್ಥರು ಮತ್ತು ಘಟಕಗಳ ಅಧ್ಯಾಪಕರು ಮತ್ತು ಅಕಾಡೆಮಿಕ್ ಕೌನ್ಸಿಲ್ ಹಾಗೂ ಬೋರ್ಡ್ ಆಫ್ ಮ್ಯಾನೇಜ್ಮೆಂಟ್ನ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪರೀಕ್ಷಾಂಗ ವಿಭಾಗದ ಕುಲ ಸಚಿವರಾದ ಡಾ.ಬಿ.ಟಿ. ನಂದೀಶ್ ಪದವೀಧರರಿಗೆ ಪ್ರಮಾಣವಚನ ಬೋಧಿಸಿದರು. ಟ್ರಸ್ಟ್ ನ ಚೇರ್ಮನ್ ವೈ ಮಹಮ್ಮದ್ ಕುಂಜಿ , ಯೇನಪ್ಪೋಯಾ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಫರ್ಹಾದ್ ಯೇನೆಪೋಯ, ಸಹ ಉಪಕುಲಪತಿಗಳಾದ ಡಾ. B H ಶ್ರೀಪತಿ ರಾವ್, BOM ಸದಸ್ಯರಾದ ಯೇನೇಪೋಯ ಅಬ್ದುಲ್ಲ ಜಾವೇದ್, ಡಾ. ಅಕ್ತರ್ ಹುಸೇನ್ , IAE ಕಾರ್ಯದರ್ಶಿ, ಡಾ. ಸಿ.ಪಿ.ಐ. ಹಬೀಬ್ ರೆಹಮಾನ್, IAE ಟ್ರಸ್ಟೀ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾಕ್ಟರ್ ಗಂಗಾಧರ ಸೋಮಯಾಜಿ ಧನ್ಯವಾದ ಸಮರ್ಪಿಸಿದರು ಕಾರ್ಯಕ್ರಮವನ್ನು, ಡಾಕ್ಟರ್ ಮಲ್ಲಿಕಾ ಶೆಟ್ಟಿ ಮತ್ತು ಡಾಕ್ಟರ್ ರೋಷಲ್ ಟೆಲ್ಲಿಸ್ ನಿರೂಪಿಸಿದರು.