ಬೆಂಗಳೂರು: ಇಂದು ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ದೇಶದ ಎಲ್ಲಾ ಸ್ಥಳಗಳಲ್ಲಿ ಈ ರಾಹುಗ್ರಸ್ತ ಚಂದ್ರಗ್ರಹಣ ಗೋಚರಿಸಲಿದೆ. ಇನ್ನು ಗ್ರಹಣ ಹಿನ್ನಲೆ ರಾಜ್ಯದ ಪ್ರಮುಖ ದೇವಸ್ಥಾಗಳು ಬಂದ್ ಆಗಿದೆ.
ಕದ್ರಿ ಶ್ರೀ ಮಂಜುನಾಥ ದೇವರಿಗೆ ಅವಧಿಗೆ ಮೊದಲು ಮಹಾಪೂಜೆ ನಡೆದಿದ್ದು, ಪ್ರತೀ ನಿತ್ಯ ರಾತ್ರಿ 8 ಗಂಟೆಗೆ ನೆರವೇರುತ್ತಿದ್ದ ಮಹಾಪೂಜೆ, ಇಂದು 7 ರಿಂದ 7.30ರ ಅವಧಿಯಲ್ಲಿ ಮುಕ್ತಾಯವಾಗಿದೆ. ಮಹಾಪೂಜೆ ಮುಗಿದ ಬೆನ್ನಲ್ಲೇ ದೇವರ ದರ್ಶನ ಕೂಡ ಬಂದ್ ಮಾಡಲಾಗಿದ್ದು, ದೇವಸ್ಥಾನದ ಹೊರ ಆವರಣದಲ್ಲಿ ಮಾತ್ರ ಪ್ರದಕ್ಷಿಣೆಗೆ ಬರಲು ಅವಕಾಶ ಕಲ್ಪಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಕೂಡ ಬಂದ್ ಮಾಡಲಾಗಿದೆ. ರಾತ್ರಿಯ ಮಹಾಪೂಜೆಯನ್ನು ಬೇಗ ಮಾಡಿ ಬಂದ್ ಮಾಡಲಾಗಿದ್ದು, ನಾಳೆ ಬೆಳಿಗ್ಗೆವರೆಗೂ ದೇವರ ದರ್ಶನಕ್ಕೆ ನಿರ್ಬಂಧಿಸಲಾಗಿದೆ. ಸಂಜೆಯ ಆಶ್ಲೇಷಾ ಬಲಿ ಹಾಗೂ ರಾತ್ರಿಯ ಅನ್ನದಾನ ಸೇವೆಯೂ ಬಂದ್ ಮಾಡಲಾಗಿದೆ.
ಚಂದ್ರಗ್ರಹಣ ಹಿನ್ನೆಲೆ ಮಂಡ್ಯದ ಪುರಾಣ ಪ್ರಸಿದ್ಧ ದೇವಸ್ಥಾನಗಳು ಬಂದ್ ಆಗಿವೆ, ಮೇಲುಕೋಟೆ ಚೆಲುವನಾರಾಯಣಸ್ವಾಮಿ, ನಿಮಿಷಾಂಬ ದೇವಿ, ಶ್ರೀರಂಗಪಟ್ಟಣದ ರಂಗನಾಥ, ಲಕ್ಷ್ಮೀಜನಾರ್ದನ ದೇವಸ್ಥಾನ ಸೇರಿ ಜಿಲ್ಲೆಯ ಹಲವು ದೇವಸ್ಥಾನಗಳ ಬಾಗಿಲು ಮುಚ್ಚಲಾಗಿದೆ. ನಾಳೆ ಬೆಳಗ್ಗೆ ಎಂದಿನಂತೆ ದೇಗುಲ ಶುದ್ಧೀಕರಣ ಮಾಡಿ ಪೂಜೆ ನಡೆಯಲಿದೆ.