ಉಚ್ಚಿಲ: ಉಚ್ಚಿಲದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಸಮಾವೇಶ, ಮೀನುಗಾರರರೊಂದಿಗೆ ಸಂವಾದ ಬಳಿಕ ರಾಹುಲ್ ಗಾಂಧಿಗೆ ಮಹಿಳೆಯೊಬ್ಬರು ಅಂಜಲ್ ಮೀನು ನೀಡಿದ್ದರು. ಈ ವೇಳೆ ಕಾಂಗ್ರೆಸ್ ಮುಖಂಡರೆಲ್ಲರೂ ಫೋಟೋಗೆ ಫೋಸ್ ನೀಡಿದ್ದರು. ಬಳಿಕ ಅದನ್ನು ಕೇರಳದ ಸಂಸದರೊಬ್ಬರಿಗೆ ರಾಹುಲ್ ನೀಡಿದ್ದರು. ಬಳಿಕ ಅದೇ ಆವರಣದಲ್ಲಿರುವ ಉಚ್ಚಿಲ ಮಹಾಲಕ್ಷ್ಮಿ ದೇವಳಕ್ಕೆ ರಾಹುಲ್ ಗಾಂಧಿ ಹೋಗುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೀನು ಮಟ್ಟಿದ ಕಾರಣ ದೇವಳದೊಳಗೆ ಪ್ರವೇಶಿಸಲು ಒಪ್ಪಲಿಲ್ಲ. ದೇವಳದ ಮುಂಭಾಗಕ್ಕೆ ಹೋದ ರಾಹುಲ್ ಗಾಂಧಿ ಬಳಿಕ ದೇವಸ್ಥಾನ ಒಳ ಆವರಣಕ್ಕೆ ಹೋಗಲು ಒಪ್ಪಲಿಲ್ಲ. ಮೀನು ಮುಟ್ಟಿದ್ದೇನೆ. ಆದ ಕಾರಣ ದೇವಳ ಪ್ರವೇಶ ಮಾಡುವುದಿಲ್ಲ ಎಂದು ಹೊರಗೆ ನಿಂತರು. ಬಳಿಕ ಅರ್ಚಕರು ಹೊರಗೆ ಬಂದು ಆರತಿ ಪ್ರಸಾದ ನೀಡಿದರಲ್ಲದೆ ಶಾಲು ಹೊದಿಸಿ ಸನ್ಮಾನ ಮಾಡಿದರು. ಅಲ್ಲದೆ ಭಾರತ್ ಜೋಡೋ ಮೂಲಕ ಧಾರ್ಮಿಕ ಸಾಮರಸ್ಯಕ್ಕೆ ಶ್ರಮಿಸಿದ ರಾಹುಲ್ ಅವರಿಗೆ ಒಳಿತಾಗಲಿ ಇನ್ನು ಹೆಚ್ಚಿನ ದೇಶಸೇವೆ ಮಾಡುವಂತಾಗಲಿ ಎಂದು ಹರಿಸಿದರು.
ಜಾಲತಾಣಗಳಲ್ಲಿ ರಾಹುಲ್ ನಡೆಗೆ ಪ್ರಶಂಸೆ:
ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಮೀನು ತಿಂದು ಧರ್ಮಸ್ಥಳ ದೇವಳಕ್ಕೆ ಪ್ರವೇಶ ಮಾಡಿದ್ದು, ವಿವಾದಕ್ಕೆ ಕಾರಣವಾಗಿತ್ತು. ಈ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಈ ಬಾರಿ ಎಚ್ಚರಿಕೆ ಹೆಜ್ಜೆ ಇರಿಸಿದ್ದು, ಕರಾವಳಿಯ ಸಂಪ್ರದಾಯ ಆಚಾರ ವಿಚಾರಕ್ಕೆ ಗೌರವ ನೀಡಿದ ರಾಹುಲ್ ನಡೆ ಜಾಲತಾಣಗಳಲ್ಲಿ ಪ್ರಶಂಸೆಗೆ ಕಾರಣವಾಗಿದೆ.