ಮಂಗಳೂರು: ರಾಜ್ಯಕ್ಕೆ ಅನ್ಯಾಯವಾಗುತ್ತಿರೋದನ್ನ ಶಾಸಕ ಹರೀಶ್ ಪೂಂಜ ಒಪ್ಪಿಕೊಳ್ಳಬೇಕು, ಅದನ್ನು ಬಿಟ್ಟು ಮೊಂಡುವಾದ ಪ್ರದರ್ಶನ ಮಾಡಿದ್ರೆ ಏನ್ ಹೇಳೋದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕ ಹರೀಶ್ ಪೂಂಜಾ `ಹಿಂದೂಗಳ ತೆರಿಗೆ, ಹಿಂದೂಗಳ ಹಕ್ಕು’ ಅಭಿಯಾನಕ್ಕೆ ಕರೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯಕ್ಕೆ ಬರುವ ತೆರಿಗೆ ಪ್ರಮಾಣದಲ್ಲಿ ಯಾವುದೇ ವೃದ್ಧಿಯಾಗಿಲ್ಲ. ಈ ವಿಚಾರ ಪೂಂಜಾ ಮಾತನಾಡಬೇಕು. ಇದರಲ್ಲೂ ಅವರು ಜನರನ್ನು ಒಡೆಯಲು ಹೊರಟಿರುವುದು ದುರ್ದೈವದ ವಿಚಾರ. ಇವರದ್ದೆಲ್ಲಾ ಇದೇ ಕುತಂತ್ರ, ಧರ್ಮದ ಹೆಸರಿನಲ್ಲಿ ಅನ್ಯಾಯದ ಕೆಲಸ ಮಾಡುತ್ತಿದ್ದಾರೆ ಎಂದು ಎಂದು ಕಿಡಿಕಾರಿದರು.
ಈ ವೇಳೆ ಜಿಲ್ಲೆಯ ಸಾಂಪ್ರದಾಯಿಕ ಕೋಳಿ ಅಂಕ ನಿರ್ಬಂಧ ವಿಚಾರವಾಗಿ ಮಾತನಾಡಿದ ಅವರು, ಕೋಳಿ ಅಂಕದ ವಿಚಾರ ನನಗೆ ಯಾವುದೇ ದೂರು ಬಂದಿಲ್ಲ ಎಂದರು. ನನ್ನ ಗಮನಕ್ಕೆ ಯಾರೂ ತಂದಿಲ್ಲ, ಯಾರಾದರೂ ಗಮನಕ್ಕೆ ತಂದರೆ ಚರ್ಚೆ ಮಾಡುತ್ತೇನೆ. ಆಟಕ್ಕೋಸ್ಕರ ಮತ್ತು ಜೂಜಿಗಾಗಿ ಕೋಳಿ ಅಂಕ ಮಾಡಲಾಗುತ್ತದೆ. ಆಟ ನಮ್ಮ ಕಲೆ ಮತ್ತು ಸಂಪ್ರದಾಯ, ಕ್ರೀಡೆ ಎಂದು ಒಪ್ಪಿಕೊಳ್ಳಬೇಕು. ಕಂಬಳ, ಜಲ್ಲಿಕಟ್ಟು ಮಾಡ್ತಾರೆ, ಆದರೆ ಜೂಜು ಹೆಚ್ಚಾದಾಗ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.