ದೆಹಲಿ: ಕೆಲವು ದಿನಗಳ ಹಿಂದೆಯಷ್ಟೇ ಸಂಸತ್ತಿನಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ತಾಳ್ಮೆ ಕಳೆದುಕೊಂಡ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್ ಅವರಲ್ಲಿ ನಾವೇನು ಶಾಲಾ ಮಕ್ಕಳಲ್ಲ ಎಂದಿದ್ದರು.
ಮಂಗಳವಾರ ಪ್ರಶ್ನೋತ್ತರ ವೇಳೆಯಲ್ಲಿ ವಿಮಾನಯಾನದ ಕುರಿತ ಪ್ರಶ್ನೆಯನ್ನು ಕೈ ಬಿಟ್ಟಾಗ ಜಯಾ ಬಚ್ಚನ್, ಕಾಂಗ್ರೆಸ್ನ ದೀಪೇಂದರ್ ಸಿಂಗ್ ಹೂಡಾ ಮತ್ತು ಇತರ ವಿರೋಧ ಪಕ್ಷದ ಸದಸ್ಯರು ಎದ್ದುನಿಂತು ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಅವರಲ್ಲಿ ಏಕೆ ಹೀಗಾಯಿತು ಎಂದು ಕೇಳಿದ್ದಾರೆ. ಈ ವೇಳೆ ಸಭಾಪತಿಯ ಪ್ರತಿಕ್ರಿಯೆಗೆ ಜಯಾ ಸಿಟ್ಟಾಗಿದ್ದರು.
ಇಂದು(ಫೆ.09) ತನ್ನ ವಿದಾಯ ಭಾಷಣದ ವೇಳೆ ಸದನದ ಎಲ್ಲ ಸದಸ್ಯರಲ್ಲಿ ಕ್ಷಮೆಯಾಚಿಸಿರುವ ಜಯಾ ಬಚ್ಚನ್ ನಾನು ಮುಂಗೋಪಿ. ನನಗೆ ಬೇಗ ಸಿಟ್ಟುಬರುತ್ತದೆ. ಆದರೆ ಯಾರನ್ನೂ ನೋಯಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದರು. “ನಾನು ಯಾಕೆ ಕೋಪಗೊಳ್ಳುತ್ತೇನೆ ಎಂದು ಜನರು ನನ್ನನ್ನು ಆಗಾಗ್ಗೆ ಕೇಳುತ್ತಾರೆ. ಅದು ನನ್ನ ಸ್ವಭಾವ, ನಾನು ನನ್ನನ್ನು ಬದಲಾಯಿಸಲು ಸಾಧ್ಯವಿಲ್ಲ. ನಾನು ಏನನ್ನಾದರೂ ಇಷ್ಟಪಡದಿದ್ದರೆ ಅಥವಾ ಒಪ್ಪದಿದ್ದರೆ, ನಾನು ತಾಳ್ಮೆ ಕಳೆದುಕೊಳ್ಳುತ್ತೇನೆ” ಎಂದು ಜಯಾ ಬಚ್ಚನ್ ಹೇಳಿದ್ದಾರೆ. “ನಾನು ನಿಮ್ಮಲ್ಲಿ ಯಾರೊಂದಿಗಾದರೂ ಅನುಚಿತವಾಗಿ ವರ್ತಿಸಿದರೆ ನಾನು ಕ್ಷಮೆಯಾಚಿಸುತ್ತೇನೆ” ಎಂದು ಅವರು ಹೇಳಿದರು.