ಸುಳ್ಯ: ಸುಳ್ಯದ ಕೃಷಿಕರನ್ನು ಬಾಧಿಸುತ್ತಿರುವ ಅಡಿಕೆ ಎಲೆ ಹಳದಿ ರೋಗಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಹಾಗೂ ಸುಳ್ಯದ ೧೧೦ ಕೆ.ವಿ. ವಿದ್ಯುತ್ ಸಬ್ಸ್ಟೇಶನ್ ಕಾಮಗಾರಿ ಮಾಡಿಸುವ ನಿಟ್ಟಿನಲ್ಲಿ ಎ.ಎ.ಪಿ ಬದ್ಧವಾಗಿದ್ದು, ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾದರೆ ಮೊದಲ ಕೆಲಸವಾಗಿ ಇದನ್ನೇ ಮಾಡುತ್ತೇವೆ. ಇದಕ್ಕಾಗಿ ಯಾವ ಹೋರಾಟಕ್ಕೂ ನಾವು ಬದ್ಧರಾಗಿದ್ದು ಆ ಕೆಲಸವನ್ನು ಮಾಡಿಯೇ ಮಾಡುತ್ತೇವೆ ಎಂದು ಎಎಪಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಹಾಗೂ ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ ಹೇಳಿದ್ದಾರೆ.
ಮೇ.೬ರಂದು ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅಶೋಕ್ ಎಡಮಲೆಯವರು ಎಎಪಿ ಕರ್ನಾಟಕದಲ್ಲಿ ಕೆಲವು ಗ್ಯಾರಂಟಿಗಳನ್ನು ಪ್ರಣಾಳಿಕೆಯಲ್ಲಿ ಹಾಕಿಕೊಂಡಿದ್ದು ಅಧಿಕಾರಕ್ಕೆ ಬಂದ ತಕ್ಷಣ ಹಂತ ಹಂತವಾಗಿ ಇದನ್ನು ಕಾರ್ಯರೂಪಕ್ಕೆ ತರಲಾಗುವುದು. ಯಾವುದೇ ರಾಜಕೀಯ ಪಕ್ಷಗಳು ೧೦೦ ಶೇ. ಕೆಲಸ ಶೇ.0 ಕಮಿಷನ್ ಎಂದು ಎಲ್ಲಿಯೂ ಹೇಳಿಲ್ಲ. ಆದರೆ ನಾವು ಆ ನಿಟ್ಟಿನಲ್ಲಿ ಬದ್ಧರಾಗಿದ್ದೇವೆ. ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ಮತ್ತು ಅಗತ್ಯವಿರುವ ಬಜೆಟ್ ನೀಡಲಾಗುತ್ತದೆ. ಗೃಹಬಳಕೆದಾರರಿಗೆ ಪ್ರತಿ ತಿಂಗಳು ೩೦೦ ಯೂನಿಟ್ ವಿದ್ಯುತ್ ಉಚಿತ. ಪ್ರತಿ ಮನೆಗೆ 24 ಗಂಟೆ ವಿದ್ಯುತ್ ಪೂರೈಕೆ. ಶಿಕ್ಷಣ ಗ್ಯಾರಂಟಿ ಯೋಜನೆಯಲ್ಲಿ ದೆಹಲಿಯಂತೆ ಖಾಸಗಿ ಶಾಲೆಗಳಿಗಿಂತ ಸರಕಾರಿ ಶಾಲೆಗಳನ್ನು ಉತ್ತಮಗೊಳಿಸುವುದು. ಉನ್ನತ ಶಿಕ್ಷಣದ ಬ್ಯಾಂಕ್ ಸಾಲಗಳಿಗೆ ಸರಕಾರದಿಂದ ಗ್ಯಾರಂಟಿ. ವಿದ್ಯಾರ್ಥಿಗಳಿಗೆ ಉಚಿತ ಸಿಟಿ ಬಸ್ ಸಾರಿಗೆ ವ್ಯವಸ್ಥೆ. ಖಾಸಗಿ ಶಾಲೆಗಳಿಗೆ ಶುಲ್ಕವನ್ನು ನಿಗದಿಪಡಿಸಲು ಮತ್ತು ನಿಯಂತ್ರಿಸಲು ಶುಲ್ಕ ಸಮಿತಿ ರಚನೆ. ಗುತ್ತಿಗೆ ಶಿಕ್ಷಕರಿಗೆ ಕಾರ್ಯಂ ಕೆಲಸ. ಆರೋಗ್ಯ ಗ್ಯಾರಂಟಿಯಲ್ಲಿ ಮಾತ್ರೆಯಿಂದ ಶಸ್ತ್ರ ಚಿಕಿತ್ಸೆವರೆಗೂ ಎಲ್ಲವೂ ಉಚಿತ. ಪ್ರಾಥಮಿಕ ಆರೈಕೆಗಾಗಿ ಪ್ರತೀ ಪ್ರದೇಶ ಮತ್ತು ಪಂಚಾಯತ್ನಲ್ಲಿ ದೆಹಲಿ ಮಾದರಿ ಮೊಹಲ್ಲಾ ಕ್ಲಿನಿಕ್ ಇತ್ಯಾದಿ ವ್ಯವಸ್ಥೆ. ಯುವಕರಿಗೆ ಗ್ಯಾರಂಟಿಗಳನ್ನು ತರಲಾಗಿದ್ದು ಅವುಗಳಲ್ಲಿ ಯುವಕರಿಗೆ ಉದ್ಯೋಗ ಗ್ಯಾರಂಟಿ. ಉದ್ಯೋಗ ಸಿಗುವವರೆ ತಿಂಗಳಿಗೆ ರೂ. ೩ ಸಾವಿರ ನಿರುದ್ಯೋಗ ಭತ್ಯೆ. ೧೨ ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಕಲ್ಪಿಸಲು ತಿಂಗಳಿಗೆ ರೂ ೫ ಸಾವಿರ ಸ್ಟೈಫಂಡ್ ನೊಂದಿಗೆ ೬ ತಿಂಗಳ ಉದ್ಯೋಗ ತರಬೇತಿ. ಮಹಿಳೆಯರಿಗಾಗಿ ಸರಕಾರಿ ಉದ್ಯೋಗದಲ್ಲಿ ಶೇ.೩೩ ಮೀಸಲಾತಿ, ಉಚಿತ ಸಿಟಿಬಸ್ ಸಾರಿಗೆ, ೧೮ ವರ್ಷ ಮೇಲ್ಪಟ್ಟ ಪ್ರತಿ ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಗೆ ಮಾಸಿಕ ರೂ.೧೦೦೦ ಸಬಲೀಕರಣ ಭತ್ಯೆ, ರೈತರಿಗೆ ರೈತರು ವಿರೋಧಿಸುವ ೩ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದು, ಸಾಮಾಜಿಕ ವೈದ್ಧಾಪ್ಯ ವೇತನ ಮಾಸಿಕ ರೂ ೪೦೦ ರಿಂದ ೧೫೦೦ ಕ್ಕೆ ಹೆಚ್ಚಳ, ವಿಧವಾ ಪಿಂಚಣಿ ರೂ.೮೦೦ ರಿಂದ ರೂ.೨ ಸಾವಿರ ಹೆಚ್ಚಳ, ನಾಗರಿಕ ಸೇವೆಗಳ ಗ್ಯಾರಂಟಿ, ಉದ್ಯೋಗಗಳು ಮತ್ತು ಉದ್ಯೋಗಕ್ಕಾಗಿ ಗ್ಯಾರಂಟಿ ಹೀಗೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಎಎಪಿ ಅಭ್ಯರ್ಥಿ ಸುನಮ ಬೆಳ್ಳಾರ್ಕರ್ ಮಾತನಾಡಿ ನಾನು ಗ್ರಾಮೀಣ ಭಾಗದಲ್ಲಿ ಸುತ್ತಿದ್ದೇನೆ. ನನ್ನ ತಂದೆಯವರು ಶಾಸಕರಾಗಿದ್ದ ಸಂದರ್ಭದಲ್ಲಿ ಆದ ಕೆಲಸವನ್ನು ಜನರು ಈಗಲೂ ನೆನಪಿಸುತ್ತಿದ್ದಾರೆ. ಆದರೆ ಆ ಬಳಿಕದಲ್ಲಿ ಏನು ಕೆಲಸಗಳಾಗಿಲ್ಲ. ಕೆಲವು ಮನೆಗಳು ಸೀರೆಯ ಗೋಡೆ ಕಟ್ಟಿಕೊಂಡು ಇನ್ನೂ ಇದೆ. ಕೆಲವರಿಗೆ ಹಕ್ಕುಪತ್ರ ಸಿಕ್ಕಿಲ್ಲ. ರಸ್ತೆ, ಸೇತುವೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸುಳ್ಯ ಮೀಸಲು ಕ್ಷೇತ್ರ. ಇಲ್ಲಿಗೆ ಹೆಚ್ಚು ಅನುದಾನ ಬರಬೇಕು. ಆದರೆ ಇಲ್ಲಿಯವರು ಅನುದಾನ ತರುವಲ್ಲಿ ಪ್ರಯತ್ನಿಸಲೇ ಇಲ್ಲ ಎಂದು ಹೇಳಿದರು.
ಚುನಾವಣಾ ಉಸ್ತುವಾರಿ ಕಲಂದರ್ ಎಲಿಮಲೆ ಮಾತನಾಡಿ, ಈ ಬಾರಿ ಸುಳ್ಯದಲ್ಲಿ ಜನರು ಎಎಪಿಯನ್ನು ಮೆಚ್ಚಿಕೊಂಡಿದ್ದಾರೆ. ಪ್ರಚಾರದ ವೆಳೆ ಉತ್ತಮ ಪ್ರತಿಕ್ರಿಯೆ ಇದೆ. ಮೇ.೮ರಂದು ತಾಲೂಕಿನ ಪ್ರತೀ ನಗರ ವ್ಯಾಪ್ತಿಯಲ್ಲಿ ಪ್ರಚಾರ ನಡೆಯಲಿದೆ ಎಂದು ಅವರು ವಿವರ ನೀಡಿದರು.