ತಿ.ನರಸೀಪುರ: ಜನರು ಜೀವನ ಕಳೆದುಕೊಂಡಾಗ, ಪ್ರವಾಹದಲ್ಲಿ ಕೊಚ್ಚಿ ಹೋದಾಗ ಬಾರದ ಪ್ರೀತಿ, ಈಗ ಪ್ರಧಾನಿ ಮೋದಿಯವರಿಗೆ ಕರ್ನಾಟಕ ಜನತೆಯ ಮೇಲೆ ಎಲ್ಲಿಲ್ಲದ ಪ್ರೀತಿ ಹುಟ್ಟಿಕೊಂಡಿದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.
ತಾಲೂಕಿನ ಬನ್ನೂರಿನ ಡೈರಿ ವೃತ್ತದಲ್ಲಿ ನಡೆದ ಜೆಡಿಎಸ್ ಪಕ್ಷದ ಅಭ್ಯರ್ಥಿಯ ಪರ ಬಹಿರಂಗ ಪ್ರಚಾರದ ಸಭೆಯಲ್ಲಿ ಅವರು ಮಾತನಾಡಿ, ರಾಜ್ಯದ ಜನತೆ ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿದ್ದಾಗ ಪ್ರಧಾನಿ ಮೋದಿ, ಅಮಿತ್ ಶಾ ಅವರು ಬಂದು ಸಾಂತ್ವನವನ್ನು ಕೂಡ ಹೇಳಲಿಲ್ಲ. ಈಗ ಕರ್ನಾಟಕ ರಾಜ್ಯಕ್ಕೆ ನಿರಂತರ ಭೇಟಿ ನೀಡುತ್ತಿದ್ದು, ಇದು ಜೇಡರ ದಾಸಿಮಯ್ಯರ ವಚನವೊಂದರ ತಾತ್ಪರ್ಯದ ತದ್ರೂಪ. ಕರ್ನಾಟಕದ ಜನತೆ ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಬಿಜೆಪಿಯ 25 ಸಂಸದರು ಬಾಯಿ ಬಿಡಲಿಲ್ಲ . ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ಸಮಸ್ಯೆಗಳನ್ನು ಆಲಿಸುವ ವ್ಯವಧಾನವೂ ಇಲ್ಲ. ದಕ್ಷಿಣ ಭಾರತದ ಜನತೆ ಎಂದರೆ ಬಿಜೆಪಿ ಪಕ್ಷಕ್ಕೆ ಅಸಡ್ಡೆ ಎಂದು ಆರೋಪ ಮಾಡಿದರು.
ಕೇಂದ್ರ ಸರ್ಕಾರ ಹಲವಾರು ವಿಚಾರಗಳಲ್ಲಿ ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕರ್ನಾಟಕದ ಜಿಎಸ್ಟಿ ಪಾಲು ಸಮರ್ಪಕವಾಗಿ ಹಂಚಿಕೆ ಆಗುತ್ತಿಲ್ಲ. ನರೇಂದ್ರ ಮೋದಿಯವರು ಬೆಲೆ ಏರಿಕೆಯಿಂದ ದೇಶದ ಬಡ ಜನರ ಹೊಟ್ಟೆ ಮೇಲೆ ಹೊಡೆದು ವಿಶ್ವದ ಮುಂದೆ ‘ವಿಶ್ವಗುರು’ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಬಡವರ ಶಾಪ ಅವರನ್ನು ಬಿಡುವುದಿಲ್ಲ ಎಂದರು.
ಕಳೆದ 70 ವರ್ಷಗಳಲ್ಲಿ ಆಳಿದ ರಾಷ್ಟ್ರೀಯ ಪಕ್ಷಗಳು ದೇಶದ ಹಲವು ಜ್ವಲಂತ ಸಮಸ್ಯೆಗಳಾದ ಶಿಕ್ಷಣ, ಉದ್ಯೋಗ, ಅರೋಗ್ಯ, ವಸತಿ, ನೀರಾವರಿ, ಮಹಿಳಾ ಸಬಲೀಕರಣ ಮತ್ತು ರೈತರ ಬವಣೆಗಳನ್ನು ಬಗೆಹರಿಸಲು ವಿಫಲವಾಗಿವೆ. ರಾಷ್ಟ್ರೀಯ ಪಕ್ಷಗಳಿಗೆ ಜನತೆಯ ದುಃಖ ದುಮ್ಮಾನ ಬೇಕಿಲ್ಲ, ಅವರ ತಿಜೋರಿ ತುಂಬಿಸುವ ಚಿಂತೆ. ಹಾಗಾಗಿ ಈ ಬಾರಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಪಕ್ಷವನ್ನು ಗೆಲ್ಲಿಸುವ ಮುಖೇನ ಅಧಿಕಾರಕ್ಕೆ ತಂದಲ್ಲಿ ಕರ್ನಾಟಕದ ಜನತೆ ಧ್ವನಿ ಮತ್ತು ಶಕ್ತಿಯಾಗಿ ಜೆಡಿಎಸ್ ನಿಲ್ಲಲಿದೆ ಎಂದರು.
ಶಾಸಕ ಎಂ.ಅಶ್ವಿನ್ ಕುಮಾರ್ ಮಾತನಾಡಿ, ಒಬ್ಬ ಸಾಮಾನ್ಯ ಜಿಲ್ಲಾ ಪಂಚಾಯ್ತಿ ಸದಸ್ಯನಾಗಿದ್ದ ನನ್ನನ್ನು ಕಳೆದ ಬಾರಿ ಕ್ಷೇತ್ರದ ಜನತೆ ಶಾಸಕನಾಗಿ ಮಾಡಿದ್ದೀರಿ. ನನಗೆ ಸಿಕ್ಕ ಅಲ್ಪ ಅವಕಾಶದಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಈಗ ಮತ್ತೊಂದು ಅವಧಿಗೆ ನಿಮ್ಮ ಮುಂದೆ ಬಂದಿದ್ದೇನೆ. ನಿಮ್ಮ ಪ್ರೀತಿ ವಿಶ್ವಾಸದಿಂದ ನನ್ನನ್ನು ಗೆಲ್ಲಿಸಬೇಕಾಗಿ ಮನವಿ ಮಾಡಿದರು.
ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಬನ್ನೂರು ರಾಮಸ್ವಾಮಿ, ರಾಜ್ಯ ಉಪಾಧ್ಯಕ್ಷ ಎಸ್.ಎನ್ .ಸಿದ್ದಾರ್ಥ, ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ, ಕ್ಷೇತ್ರಾಧ್ಯಕ್ಷ ಚಿನ್ನಸ್ವಾಮಿ, ಕಾರ್ಯಾಧ್ಯಕ್ಷ ಮಂಜುನಾಥ್,ಪುರಸಭೆ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಉಪಾಧ್ಯಕ್ಷೆ ಭಾಗ್ಯ, ಮಾಜಿ ಜಿ .ಪಂ .ಸದಸ್ಯರಾದ ಎಂ.ಆರ್ .ಸೋಮಣ್ಣ, ಜಯಪಾಲ್ ಭರಣಿ, ಎಂ.ಕೆ .ಸಿದ್ದರಾಜು, ವೆಂಕಟೇಶ್, ರಾಜು,ಗೊರವನಹಳ್ಳಿ ನಾಗರಾಜು,ಮುಖಂಡರಾದ ಪ್ರಭುಸ್ವಾಮಿ,ಚಿಕ್ಕಜವರಪ್ಪ, ಎಂ.ಆರ್.ಶಿವಮೂರ್ತಿ ಹಾಜರಿದ್ದರು.