ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ಶ್ರೀ ಶಂಕರ ಸಭಾಭವನದಲ್ಲಿ ಸೆ.೧೯ರಂದು ಗಣೇಶೋತ್ಸವ ಆಚರಣೆ ನಡೆಯಲಿದೆ.
ಬೆಳಗ್ಗೆ ೬ ಗಂಟೆಯಿಂದ ಗಣಪತಿ ಹವನ, ನಂತರ ಗಣಪತಿ ಮೂರ್ತಿ ಪ್ರತಿಷ್ಠೆ, ವಿದ್ಯಾರ್ಥಿಗಳಿಂದ ಭಜನೆ, ಗಣಪತಿ ಧ್ಯಾನ, ಸಂಗೀತ, ಭರತನಾಟ್ಯ, ಯಕ್ಷಗಾನ, ಚೆಂಡೆ ಮೊದಲಾದ ಅಷ್ಟಾವಧಾನ ಸೇವೆಗಳು ನಡೆಯಲಿವೆ. ಮಧ್ಯಾಹ್ನ ೧೨.೩೦ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ಮತ್ತು ಭೋಜನ ಆಯೋಜನೆಗೊಳ್ಳಲಿದೆ.
ಅಪರಾಹ್ನ ೨ ಗಂಟೆಯಿಂದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಅಧ್ಯಕ್ಷತೆ ವಹಿಸಲಿದ್ದಾರೆ. ಸುಳ್ಯದ ವಾಗ್ಮಿ ಲಕ್ಷ್ಮೀಶ ಗಬ್ಳಡ್ಕ ಉಪನ್ಯಾಸ ನೀಡಲಿದ್ದಾರೆ.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ ಉಪಸ್ಥಿತರಿರುವರು. ಸಂಜೆ ೪ ಗಂಟೆಗೆ ಶ್ರೀ ಗಣಪತಿ ಮೂರ್ತಿ ವಿಸರ್ಜನೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.