ಸುಳ್ಯ (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಕಾರಿನ ಬಂಪರ್ ಒಳಗೆ ಸಿಲುಕಿ 70 ಕಿಲೋಮೀಟರ್ ಸಾಗಿ ಬದುಕಿ ಬಂದ ಶ್ವಾನವೊಂದರ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ತನ್ನ ಮರಿಗಳಿಂದ ಬೇರ್ಪಟ್ಟ ಆ ಶ್ವಾನವನ್ನು ಮತ್ತೆ ಮರಿಗಳೊಂದಿಗೆ ಸೇರಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಜನ ಆಗ್ರಹಿಸಿದ್ದರು. ಆದರೆ ಈ ಶ್ವಾನವೊಂದರ ಹಿಂದೆ ಇನ್ನೊಂದು ಅವಿನಾಭಾವ ಸಂಬಂಧದ ಕಥೆಯೂ ಇದೆ.
ಸುಳ್ಯ ಸಮೀಪದ ಬಳ್ಪ ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ರೈಯವರ ಅರಣ್ಯ ಇಲಾಖೆಗೆ ಸಂಬಂಧಪಟ್ಟ ಕ್ವಾರ್ಟರ್ಸ್ ಗೆ ಈ ಶ್ವಾನ ದಿನವೂ ಬರುತ್ತಿತ್ತು. ಅದಕ್ಕೆ ಸಂತೋಷ್ ರೈ ಮತ್ತವರ ಮಗಳು ಸಾನ್ವಿ ಪ್ರತಿದಿನ ಆಹಾರ ಹಾಕುತ್ತಿದ್ದರು. ಇತ್ತ ಅಫಘಾತವಾಗಿ ಪುತ್ತೂರು ಸೇರಿದ ಶ್ವಾನವನ್ನು ತಂದು ಮರಿಗಳೊಂದಿಗೆ ಸೇರಿಸುವಂತೆ ತಂದೆ ಸಂತೋಷ್ ಅವರಲ್ಲಿ ಮಗಳು ಸಾನ್ವಿ ಪಟ್ಟು ಹಿಡಿದಿದ್ದಳು. ಮಗಳ ಹಠಕ್ಕೆ ಕಟ್ಟು ಬಿದ್ದು ಶ್ವಾನಕ್ಕಾಗಿ ಪುತ್ತೂರಿನ ತಮ್ಮ ಪರಿಚಯದವರೊಂದಿಗೆ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಶ್ವಾನ ಪುತ್ತೂರಿನ ಮನೆಯೊಂದರ ಬಳಿ ಇರುವ ಬಗ್ಗೆ ಮಾಹಿತಿ ಪಡೆದರು. ತಕ್ಷಣವೇ ಪುತ್ತೂರಿಗೆ ತೆರಳಿದ ಸಂತೋಷ್ ರೈ ಗೆ ಶ್ವಾನ ಸಿಗದ ಕಾರಣ ಪುತ್ತೂರಿನ ನಗರದಾದ್ಯಂತ ಶ್ವಾನಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಹುಡುಕಾಟದ ಬಳಿಕ ಕೊನೆಗೂ ಶ್ವಾನ ಪತ್ತೆಯಾಗಿದೆ. ಶ್ವಾನವನ್ನು ಕಾರಿನಲ್ಲಿ ಕೊಂಡೊಯ್ದ ಅವರು ಮರಿಗಳ ಜೊತೆ ಸೇರಿಸಿದ್ದಾರೆ. ಶ್ವಾನ ಮತ್ತು ಮರಿಗಳನ್ನು ಸೇರಿದ್ದಕ್ಕೆ ಸಾನ್ವಿ ತುಂಬಾ ಖುಶಿ ಆಗಿದ್ದಾರೆ.