ಮಂಗಳೂರು: ಕರ್ಣಾಟಕ ಬ್ಯಾಂಕ್ ಮಾಜಿ ಚೇರ್ಮನ್ ಪಿ. ಜಯರಾಮ್ ಭಟ್ (72) ಬುಧವಾರ ಮಧ್ಯಾಹ್ನ ನಿಧನರಾದರು.
ಪೊಳಲಿ ಮೂಲದ ಪಿ. ಜಯರಾಮ ಭಟ್ 1951 ರಲ್ಲಿ ಜನಿಸಿದ್ದು, ಅವರು ಕರ್ಣಾಟಕ ಬ್ಯಾಂಕ್ ಎಂಡಿ ಮತ್ತು ಸಿಇಒ ಆಗಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿ ಬ್ಯಾಂಕ್ ನ ಅಭಿವೃದ್ಧಿಗೆ ಶ್ರಮಿಸಿದ್ದರು. ಬುಧವಾರ ಮಧ್ಯಾಹ್ನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೃದಯಾಘಾತದಿಂದ ಕುಸಿದಿದ್ದರು. ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಿದ್ದರೂ ಅವರು ನಿಧನ ಹೊಂದಿದ್ದಾರೆ. ಮುಂಬಯಿನಲ್ಲಿ ಅವರು ಮಂಗಳವಾರ ಯುನಿವರ್ಸಲ್ ಸೋಂಪೋ ವಿಮಾ ಕಂಪನಿಯ ಮಂಡಳಿ ಸಭೆಯಲ್ಲಿ ಭಾಗವಹಿಸಿ, ಊರಿಗೆ ಮರಳುತ್ತಿದ್ದರು ಎಂದು ತಿಳಿದು ಬಂದಿದೆ.
ಜಯರಾಮ ಭಟ್ ಪೊಳಲಿ ವಿದ್ಯಾ ವಿಲಾಸ ಶಾಲೆ, ಗುರುಪುರ ಬೋರ್ಡ್ ಹೈಸ್ಕೂಲ್ ಮತ್ತು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಬಳಿಕ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ರ್ಯಾಂಕ್ನೊಂದಿಗೆ ಎಂಎಸ್ಸಿ ಪೂರ್ಣಗೊಳಿಸಿದ್ದರು. ಕೆಲ ಸಮಯ ಮುಲ್ಕಿಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. 1973 ರಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಕರ್ನಾಟಕ ಬ್ಯಾಂಕ್ ಲಿಮಿಟೆಡ್ಗೆ ಸೇರಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದರು.
1976 ರಲ್ಲಿ ಅವರು ಬ್ರಾಂಚ್ ಮ್ಯಾನೇಜರ್ ಆಗಿ ಬಡ್ತಿ ಪಡೆದರು. 1993 ರಲ್ಲಿ ಬ್ಯಾಂಕಿನ ಮುಖ್ಯ ಕಚೇರಿಯಲ್ಲಿ ಮುಖ್ಯ ಅಕೌಂಟೆಂಟ್ ಆಗಿ ಬಡ್ತಿ ಪಡೆದರು. ನಂತರ ಸಹಾಯಕ ಜನರಲ್ ಮ್ಯಾನೇಜರ್ ಮತ್ತು ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ನೇಮಕಗೊಂಡರು ಮತ್ತು 2005 ರಲ್ಲಿ ಮುಖ್ಯ ಜನರಲ್ ಮ್ಯಾನೇಜರ್ ಹುದ್ದೆಗೇರಿದರು. 2009 ಜುಲೈ 14ರಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಕಗೊಂಡಿದ್ದು, ಸತತ ಮೂರು ಬಾರಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು. ಭಟ್ ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.