ಕಣ್ಣೂರು: ಇಲ್ಲಿನ ರೈಲು ನಿಲ್ದಾಣದಲ್ಲಿ ನಿಲ್ಲಿಸಿದ್ದ ರೈಲು ಬೆಂಕಿಗಾಹುತಿಯಾಗಿರುವ ಘಟನೆ ಇಂದು ನಸುಕಿನ ಹೊತ್ತು ಸಂಭವಿಸಿದೆ.
ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್ ರೈಲು ಗುರುವಾರ ಮುಂಜಾನೆ ಕಣ್ಣೂರು ಸ್ಟೇಷನ್ನಲ್ಲಿ ನಿಂತಿದ್ದ ವೇಳೆ ರೈಲಿನ ಒಂದು ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರೈಲು ಖಾಲಿಯಿದ್ದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಘಟನೆ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ಪರಿಣಾಮ ರೈಲಿನ ಇತರ ಬೋಗಿಗಳನ್ನು ಬೇರ್ಪಡಿಸಲಾಗಿದೆ. ಘಟನೆ ಸಂಭವಿಸಿದ 100 ಮೀಟರ್ ದೂರದಲ್ಲಿ ಪೆತ್ರೋಲ್ ಬಂಕ್ ಇದ್ದು, ಸಂಭಾವ್ಯ ಭಾರಿ ಅನಾಹುತವನ್ನು ತಪ್ಪಿಸಲಾಗಿದೆ.
ಈ ಕುರಿತು ಪೊಲೀಸರು ಪಕ್ಕದಲ್ಲಿದ್ದ ಸಿಸಿಟಿವಿಯನ್ನು ಪರಿಶೀಲನೆ ಮಾಡಿದ್ದು, ರಾತ್ರಿ 1.15ರ ವೇಳೆಗೆ ಅಪರಿಚಿತ ವ್ಯಕ್ತಿಯೊಬ್ಬ ಕೈಯಲ್ಲಿ ಕ್ಯಾನ್ ಹಿಡಿದುಕೊಂಡು ರೈಲಿನೊಳಗೆ ಪ್ರವೇಶಿಸಿದ ಬಳಿಕ ರೈಲಿನಲ್ಲಿ ಬೆಂಕಿ ಹತ್ತಿಕೊಮಡಿರುವುದು ಕಂಡುಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಪ್ರಕರಣವನ್ನು ಎನ್ಐಎ ತನಿಖೆಗೊಪ್ಪಿಸಲಾಗಿದೆ.
ಕಳೆದ ಏ.2 ರಂದು ಕೋಝಿಕ್ಕೋಡ್ ಜಿಲ್ಲೆಯಲ್ಲಿ ಶಾರುಖ್ ಸೈಫಿ ಎಂಬಾತ ರೈಲಿಗೆ ಬೆಂಕಿ ಹಚ್ಚಿದ ಪರಿಣಾಮ ಒಂದು ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದರು. ಒಂಬತ್ತು ಮಂದಿ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಉನ್ನತಮಟ್ಟದಲ್ಲಿ ತನಿಖೆ ನಡೆಯುತ್ತಿದೆ.