ಮಂಗಳೂರು: ಅಣಬೆ ಫ್ಯಾಕ್ಟರಿ ವಿರುದ್ಧ ಆಕ್ರೋಶಗೊಂಡ ಜನತೆ ಪ್ರತಿಭಟನೆ ನಡೆಸಿದ ಘಟನೆ ತಿರುವೈಲ್ ವಾರ್ಡ್ನಲ್ಲಿ ನಡೆದಿದೆ. ಮಂಗಳೂರಿನ ತಿರುವೈಲ್ ವಾರ್ಡ್ನ ವೈಟ್ ಗ್ರೋವ್ ಅಗ್ರಿ ಎಲ್ಎಲ್ಪಿ ಮಶ್ರೂಮ್ ಫ್ಯಾಕ್ಟರಿಯಿಂದ ದುರ್ವಾಸನೆ ಹೊರಹೊಮ್ಮುತ್ತಿದೆ. ಈ ಸಂಬಂಧ ಸ್ಥಳೀಯರು ಫ್ಯಾಕ್ಟರಿ ಗೇಟ್ ಮುಂಭಾಗ ಪ್ರತಿಭಟನೆ ನಡೆಸಿದ್ದು, ಸ್ಥಳಕ್ಕೆ ಬಂದ ವಾಯುಮಾಲಿನ್ಯ ನಿಯಂತ್ರಣ ಅಧಿಕಾರಿ ರವಿ ಜನರೊಂದಿಗೆ ಉದ್ಧಟತನ ಮೆರೆದಿದ್ದಾರೆ ಎನ್ನಲಾಗಿದೆ.
ಮಾಜಿ ಶಾಸಕರೊಬ್ಬರ ಪಾಲುದಾರಿಕೆಯ ಒಡೆತನಕ್ಕೆ ಸೇರಿದ ವೈಟ್ ಗ್ರೋವ್ ಅಗ್ರಿ ಎಲ್ಎಲ್ ಪಿ ಮಶ್ರೂಮ್ ಫ್ಯಾಕ್ಟರಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೊನಾ ಸಂದರ್ಭ ಚಾಕಲೇಟ್ ತಯಾರಕ ಸಂಸ್ಥೆ ಎಂದು ಈ ಫ್ಯಾಕ್ಟರಿಯನ್ನು ಸ್ಥಾಪಿಸಲಾಗಿತ್ತು. ಆ ಬಳಿಕ ಇಲ್ಲಿ ಮಶ್ರೂಮ್ ಬೆಳೆಸಲಾಗುತ್ತಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಫ್ಯಾಕ್ಟರಿಗೆ ಆಗಮಿಸಿದ ಮಾಜಿ ಶಾಸಕರು ‘ತಾವು ಸಾಕಷ್ಟು ಬಂಡವಾಳ ವ್ಯಯ ಮಾಡಿ ಫ್ಯಾಕ್ಟರಿ ಮಾಡಿದ್ದೇವೆ. ನಮ್ಮನ್ನು ಬದುಕಲು ಬಿಡಿ’ ಎಂದು ಹೇಳಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಫ್ಯಾಕ್ಟರಿಯನ್ನು ಸ್ಥಗಿತಗೊಳಿಸುವಂತೆ ಬುಧವಾರ ನಾಗರಿಕರು ವಾಮಂಜೂರಿನಿಂದ ಫ್ಯಾಕ್ಟರಿ ಗೇಟ್ವರೆಗೆ ಮೆರವಣಿಗೆ ಮಾಡಿ ಪ್ರತಿಭಟನೆ ನಡೆಸಿದ್ದರು. ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಕೆಗೆ ಪ್ರಯತ್ನಿಸಿದರು. ಆದರೆ ಫ್ಯಾಕ್ಟರಿಗೆ ಬೀಗ ಜಡಿಯದೇ ನಾವು ಇಲ್ಲಿಂದ ತೆರಳುವುದಿಲ್ಲ ಎನ್ನುವ ಪ್ರತಿಭಟನಾಕಾರರು ಆಕ್ರೋಶಕ್ಕೆ ಮಣಿದ ಅಧಿಕಾರಿಗಳು ಗೇಟ್ಗೆ ಬೀಗ ಜಡಿದರು.