ಮಂಗಳೂರು: “ನಾಗರಿಕನ ಕರ್ತವ್ಯಗಳ ಬಗ್ಗೆ ಅರಿವು ಇಂದಿನ ಉದ್ದೇಶವಾಗಿದೆ. ಗಣರಾಜ್ಯೋತ್ಸವವು ಭಾರತದ ಶ್ರೇಷ್ಠ ಯಶಸ್ಸು ಮತ್ತು ಸಾಧನೆಗಳಲ್ಲಿ ಒಂದಾಗಿದೆ. ಭಾರತದ ಜನರು ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಪಾಲಿಸಲು ಇದು ಒಂದು ಕಾರಣವಾಗಿದೆ. ನಾವು ಹೆಮ್ಮೆಪಡುವಂತಹ ದೇಶವನ್ನು ನಿರ್ಮಿಸಲು ನಮ್ಮ ಪೂರ್ವಜರು ಮತ್ತು ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗವನ್ನು ಪ್ರತಿಯೊಬ್ಬರು ನೆನಪಿಸಿಕೊಳ್ಳಬೇಕು. ಇಂದು ನಾವು ಮನೆಯಲ್ಲಿ ಸುರಕ್ಷಿತವಾಗಿದ್ದರೆ ಅದಕ್ಕೆ ಗಡಿಯಲ್ಲಿ ಕಾವಲು ಕಾಯುತ್ತಿರುವ ಯೋಧರೇ ಕಾರಣ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಸಹ ಪ್ರಾಧ್ಯಾಪಕ ಹಾಗೂ ಸಂಶೋಧನಾ ಮಾರ್ಗದರ್ಶಕ ನೌಕಾದಳದ ಕಮಾಂಡರ್ ಡಾ.ಯತೀಶ್ ಕುಮಾರ್ ಅವರು 74ನೇ ಗಣರಾಜೋತ್ಸವ ಪ್ರಯುಕ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ನಂತರ ಹೇಳಿದರು.
“ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವು ನಮಗೆ ಸಂವಿಧಾನದ ಮೂಲಭೂತ ಮೌಲ್ಯಗಳಾಗಿರುತ್ತದೆ.ಈ ರಾಷ್ಟ್ರದಲ್ಲಿರುವ ನಾವು ಪ್ರತಿಯೊಬ್ಬ ವ್ಯಕ್ತಿಯನ್ನು ಸಮಾನವಾಗಿ ಪರಿಗಣಿಸಬೇಕು. ಒಬ್ಬನು ತನ್ನ ಮೂಲಭೂತ ಹಕ್ಕುಗಳ ಬಗ್ಗೆ ಜಾಗೃತನಾಗಿರುವುದರಿಂದ ತನ್ನ ಕರ್ತವ್ಯಗಳ ಬಗ್ಗೆಯೂ ತಿಳಿದಿರಬೇಕು. ಆದುದರಿಂದ ಈ ಹಬ್ಬವನ್ನು ಬಹಳ ಹೆಮ್ಮೆಯಿಂದ ಆಚರಿಸಬೇಕು ಹಾಗೂ ಅದೇ ತರ ನಾವು ನಡೆದುಕೊಳ್ಳಬೇಕು. ಸಂವಿಧಾನ ರಚನೆಯು ಸ್ವಾತಂತ್ರ್ಯ ಪೂರ್ವದಲ್ಲಿಯೇ ಪ್ರಾರಂಭವಾಯಿತು. ನಮ್ಮ ದೇಶವನ್ನು ಉತ್ತಮ ರೀತಿಯಲ್ಲಿ ನಡೆಸಲು ನಮಗೆ ಸಂವಿಧಾನದ ಅಗತ್ಯವಿದೆ. ಭೀಮ್ ರಾವ್ ಅಂಬೇಡ್ಕರ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಯಿತು. 2 ವರ್ಷ 11 ತಿಂಗಳು 18 ದಿನಗಳ ನಂತರ ನಮ್ಮ ಸಂವಿಧಾನ ಸಿದ್ಧವಾಯಿತು. ಸಂವಿಧಾನವು 26 ನವೆಂಬರ್ 1949 ರಂದು ಸಿದ್ಧವಾಗಿದ್ದರೂ ಅದನ್ನು ಜನವರಿ 26, 1950 ರಂದು ಅಂಗೀಕರಿಸಲಾಯಿತು ಮತ್ತು ಆ ದಿನವನ್ನು ಗಣರಾಜ್ಯೋತ್ಸವ ಎಂದು ಆಚರಿಸಲಾಗುತ್ತದೆ.
ವೇದಿಕೆಯಲ್ಲಿ ಮುಖ್ಯ ಸಲಹೆಗಾರ ರಮೇಶ್ ಕೆ, ಶಕ್ತಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಪ್ರಥ್ವಿರಾಜ್ ಮತ್ತು ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ವಿದ್ಯಾ ಕಾಮತ್ ಜಿ ಉಪಸ್ಥಿತರಿದ್ದರು. ಕನ್ನಡ ಶಿಕ್ಷಕ ಶರಣಪ್ಪ ನೇತೃತ್ವದ ಶಾಲಾ ವೃಂದದವರಿಂದ ರಾಷ್ಟ್ರಗೀತೆ, ರಾಷ್ಟ್ರಧ್ವಜಾರೋಹಣ, ರಾಷ್ಟ್ರಗೀತೆ ಹಾಗೂ ಧ್ವಜ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಪ್ರಿಯಾಂಕಾ ರೈ ಕಾರ್ಯಕ್ರಮ ನಿರೂಪಿಸಿದರು, ಮಧುರಾ ಬಿ.ಸಿ ಅತಿಥಿಗಳನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ಶಕ್ತಿ ಸಂಸ್ಥೆಯ ಎಲ್ಲಾ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.