ಮಂಗಳೂರು: ಬಡವರ ಬದುಕನ್ನು ಬಲಿಪಡೆಯುತ್ತಿರುವ ಸ್ಕಿಲ್ ಗೇಮ್, ವಿಡಿಯೋ ಗೇಮ್, ಇಸ್ಪೀಟ್ ಕ್ಲಬ್, ಜುಗಾರಿ ಅಡ್ಡೆಗಳು ರಾಜಾರೋಷವಾಗಿ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಇವುಗಳ ವಿರುದ್ದ ಯಾವುದೇ ಕ್ರಮಕೈಗೊಳ್ಳದೆ ಕೇವಲ ನಾಟಕೀಯ ಬೆಳವಣೆಗೆ ರೀತಿಯಲ್ಲಿ ಕೆಲದಿನಗಳಿಗಷ್ಟೇ ಬಾಗಿಲು ಮುಚ್ಚಿಸಿ ಈಗ ಮತ್ತೆ ಯಥಾಸ್ಥಿತಿ ಪ್ರಾರಂಭಗೊಂಡಿದೆ. ಈ ರೀತಿ ರಾಜಾರೋಷವಾಗಿ ನಡೆಯುತ್ತಿರುವ ಜೂಜುಕೇಂದ್ರಗಳ ಮೇಲೆ ಕ್ರಮಕೈಗೊಳ್ಳಲಾಗದ ಮಂಗಳೂರು ನಗರ ಪೊಲೀಸ್ ಆಯುಕ್ತರ ನಡೆಯನ್ನು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ವಿರೋಧಿಸುತ್ತದೆ. ಜೂಜುಕೇಂದ್ರಗಳಿಗೆ ಶಾಶ್ವತ ಬಾಗಿಲು ಮುಚ್ಚಲು ಕ್ರಮಕೈಗೊಳ್ಳಲು ಸಾಧ್ಯವಾಗದ ಪೊಲೀಸ್ ಆಯುಕ್ತರನ್ನು ವರ್ಗಾವಣೆಗೊಳಿಸಿ ದಕ್ಷ ಅಧಿಕಾರಿಯನ್ನು ನೇಮಿಸಬೇಕೆಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ಮಂಗಳೂರು ಪೊಲೀಸ್ ಕಮೀಷನರೇಟ್ ವ್ತಾಪ್ತಿಯಲ್ಲಿ ಸ್ಕಿಲ್ ಗೇಮ್, ಇಸ್ಪೀಟ್ ಕ್ಲಬ್, ಜುಗಾರಿ ಅಡ್ಡೆಗಳು ರಾಜರೋಷವಾಗಿ ನಡೆಯುತ್ತಿದ್ದು ಈ ಬಗ್ಗೆ ಹಲವಾರು ಬಾರಿ ಪೊಲೀಸ್ ಇಲಾಖೆಯ ಗಮನಕ್ಕೆ ತಂದರೂ ಪೊಲೀಸ್ ಇಲಾಖೆ ಅವುಗಳ ನಿಯಂತ್ರಿಸಲು ಯಾವೊಂದು ಕ್ರಮಗಳನ್ನು ಕೈಗೊಳ್ಳದೇ ಇದ್ದಾಗ ಡಿವೈಎಫ್ಐ ಸಂಘಟನೆ ನಗರ ಜೂಜುಕೇಂದ್ರಗಳಿಗೆ ಮುತ್ತಿಗೆ ಹಾಕಿ ಸಾಂಕೇತಿಕ ಪ್ರತಿಭಟನೆ ನಡೆಸಿ ಇಲಾಖೆಯ ಗಮನಕ್ಕೆ ತಂದು ಮುಂದೆ ಈ ಜೂಜುಕೇಂದ್ರಗಳು ಶಾಶ್ವತವಾಗಿ ಮುಚ್ಚಬೇಕೆಂದು ನಗರದ ಮಿನಿವಿಧಾನ ಸೌಧದ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಂಡು ಒತ್ತಾಯಿಸಲಾಗಿತ್ತು. ಈ ನಡುವೆ ಕೆಲವು ದಿನಗಳ ಕಾಲ ಬಾಗಿಲು ಮುಚ್ಚಿಸಿದ ಪೊಲೀಸ್ ಇಲಾಖೆ ಈಗ ಮತ್ತೆ ಬಾಗಿಲು ತೆರೆದಿರುವ ಜೂಜುಕೇಂದ್ರಗಳ ಮೇಲೆ ಕ್ರಮಕೈಗೊಳ್ಳದೇ ಇರಲು ಕಾರಣ ಏನು? ಎಲ್ಲಾ ಜೂಜುಕೇಂದ್ರಗಳಿಗೆ ಬಾಗಿಲು ಮುಚ್ಚಿಸಿದ್ದೇವೆಂದು ಮಾಧ್ಯಮದ ಮುಂದೆ ಉತ್ತರಿಸಿದ ಆಯುಕ್ತರು ಈಗ ಮತ್ತೆ ಬಾಗಿಲು ತೆರೆದಿರುವ ಜೂಜುಕೇಂದ್ರಗಳ ಬಗ್ಗೆ ಏನನ್ನುತ್ತಾರೆ? ಪೊಲೀಸರು ಬಾಗಿಲು ಮುಚ್ಚಿಸಿದ ನಂತರ ಮತ್ತೆ ಬಾಗಿಲು ತೆರೆಯುವಷ್ಟು ಧೈರ್ಯ ಈ ಜೂಜುಕೇಂದ್ರ ನಡೆಸುವ ಮಾಫಿಯಾಗಳಿಗೆ ಎಲ್ಲಿಂದ ಬಂತು? ನಗರದಲ್ಲಿ ಇಂತಹ ಜೂಜುಕೇಂದ್ರ ರಾಜಾರೋಷವಾಗಿ ನಡೆಯುತ್ತಿರುವುದರ ಹಿಂದೆ ಪೊಲೀಸ್ ಇಲಾಖೆಯ ಸಹಕಾರಗಳಿವೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿ ಬರುತ್ತಿವೆ. ಇಂತಹ ಆರೋಪಗಳಿಗೆ ಪೊಲೀಸ್ ಆಯುಕ್ತರು ಯಾಕೆ ಉತ್ತರಿಸುತ್ತಿಲ್ಲ?. ಸದ್ರಿ ನಗರದಲ್ಲಿ ಕಾನೂನು ಸುವ್ಯವಸ್ಥೆಯ ದಯನೀಯ ವೈಫಲ್ಯದಿಂದ ಹಾಡುಹಗಲೇ ಕೊಲೆ, ಸುಲಿಗೆ, ದರೋಡೆಯಂತಹ ಘಟನೆಗಳು ನಡೆಯುತ್ತಿದ್ದು ಇವುಗಳನ್ನೆಲ್ಲಾ ನಿಯಂತ್ರಿಸಲಾಗದ ಪೊಲೀಸ್ ಇಲಾಖೆಯ ಕಾರ್ಯವೈಖರಿಯಿಂದ ಮಂಗಳೂರಿನ ಜನತೆ ಪೊಲೀಸರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತರು ಇಷ್ಟೊಂದು ಜನವಿರೋಧಿಯಾಗಿ ವರ್ತಿಸಬಾರದು.
ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಈ ಕೂಡಲೇ ರಾಜಾರೋಷವಾಗಿ ನಡೆಯುತ್ತಿರುವ ಸ್ಕಿಲ್ ಗೇಮ್, ವಿಡಿಯೋ ಗೇಮ್, ಇಸ್ಪೀಟ್ ಕ್ಲಬ್, ಜುಗಾರಿ ಅಡ್ಡೆಗಳನ್ನು ಶಾಶ್ವತವಾಗಿ ಮುಚ್ಚಲು ಕ್ರಮಕೈಗೊಳ್ಳಬೇಕು ಅಸಾಧ್ಯವಾದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರನ್ನು ವರ್ಗಾವಣೆಗೊಳಿಸಿ ದಕ್ಷ ಅಧಿಕಾರಿಯನ್ನು ನೇಮಿಸಲಿ ಎಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ರಾಜ್ಯ ಸರಕಾರವನ್ನು ಒತ್ತಾಯಿಸಿದೆ ಎಂದು ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಕಾರ್ಯದರ್ಶಿ ಸಂತೋಷ್ ಬಜಾಲ್ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.