ಬೆಳ್ತಂಗಡಿ: ಕೆಲ ದಿನಗಳ ಹಿಂದೆ ಉಜಿರೆಯಲ್ಲಿ ಚರಂಡಿಯನ್ನು ತ್ಯಾಜ್ಯಗಳಿಂದ ಮುಕ್ತಗೊಳಿಸಿ, ನೀರು ಸರಾಗವಾಗಿ ಹರಿಯಲು ಮಾಡಿದ್ದರೂ ಸೋಮವಾರ ಸಂಜೆ ಸುರಿದ ಮಹಾಮಳೆಗೆ ರಸ್ತೆ ನದಿಯೊಳಗೋ, ನದಿ ರಸ್ತೆಯೊಳಗೋ ಎಂಬಂತಾಗಿತ್ತು.
ರಾಷ್ಟ್ರೀಯ ಹೆದ್ದಾರಿಯ ಉಜಿರೆಯ ಕೆಳಗಿನ ಪೇಟೆಯ ಸುಮಾರು 700ಮೀ. ದೂರದ ರಸ್ತೆ ಅಕ್ಷರಶ: ನದಿಯಂತಾಗಿತ್ತು. ಮಳೆಗೆ ನೀರು ರಸ್ತೆಯಲ್ಲಿ ಎರಡು ಅಡಿಗಿಂತ ಅಧಿಕ ಹರಿದು ಸಮೀಪದ ಕೆಲವು ಅಂಗಡಿಗಳಿಗೂ ನುಗ್ಗಿತು.ವಾಹನ ಸವಾರರು ಪಾದಚಾರಿಗಳು ಸಂಚಾರಕ್ಕೆ ತೀವ್ರ ಸಮಸ್ಯೆ ಎದುರಿಸಿದರು.
ಜೂ.14ರಂದು ಹಾಗೂ ಕಳೆದ ವಾರ ಇಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು.
ಜೂನ್ ತಿಂಗಳಲ್ಲಿ ನೀರು ರಸ್ತೆಯಲ್ಲಿ ಹರಿದ ಬಳಿಕ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಚರಂಡಿಗಳನ್ನು ದುರಸ್ತಿ ಮಾಡಲಾಗಿತ್ತು. ಆದರೆ ಕಾಮಗಾರಿ ಅರ್ಧಂಬರ್ಧ ನಿರ್ವಹಿಸಿದ ಕಾರಣ ಮತ್ತೆ ಮತ್ತೆ ಸಮಸ್ಯೆ ಉಂಟಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಚರಂಡಿಗಳಲ್ಲಿ ತುಂಬಿರುವ ತ್ಯಾಜ್ಯ, ಬ್ಲಾಕ್ ಆಗಿರುವ ಮೋರಿಗಳು, ಚರಂಡಿಯಲ್ಲಿರುವ ಗಿಡಗಂಟಿ, ಫೋನ್ ಕೇಬಲ್ ಗಳು ಕೂಡ ಇಲ್ಲಿ ರಸ್ತೆಗೆ ನೀರು ನುಗ್ಗಲು ಕಾರಣವಾಗಿದೆ.
ಈ ಪ್ರದೇಶದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಗಾಲದಲ್ಲಿ ಆಗಾಗ ಸಮಸ್ಯೆ ಕಂಡು ಬರುತ್ತಿದ್ದು ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸುವ ಅಗತ್ಯವಿದೆ.