ಬೆಳ್ತಂಗಡಿ: ನಮ್ಮದು ಸಾಮರಸ್ಯದ ಬದುಕಾಗಬೇಕು. ಮುಂದಿನ ಯುವ ಜನಾಂಗ ಸಮಾಜ ಮತ್ತು ರಾಷ್ಟ್ರಕ್ಕೆ ಪೂರಕವಾಗಿ ಬದುಕುತ್ತೇನೆಂಬ ಸಂಕಲ್ಪ ಮಾಡಬೇಕಾಗಿದೆ. ನಾವು ಇನ್ನೊ ಬ್ಬರಿಗೆ ಉಪಕಾರ ಮಾಡದಿದ್ದರೂ ಉಪದ್ರ ಮಾಡಬಾರದು ಎಂದು ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾದ್ಯಾಪಕ ಡಾ. ರವಿ ಎಂ. ಎನ್. ನುಡಿದರು.
ಅವರು ಆ. 21 ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಉಜಿರೆ ರಾಮನಗರದ ಆದರ್ಶ ಸೇವಾ ಸಮಿತಿ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಹಾಗು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಅವರು ತಾಲೂಕಿನ ಪಿ. ಯು .ಸಿ,ಪದವಿ, ಸ್ನಾತಕೋತ್ತರ ಪದವಿ ಹಾಗು ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾನ್ವಿತ 90ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರೂ . 1.50 ಲಕ್ಷ ಮೊತ್ತದ ಪ್ರೋತ್ಸಾಹಧನ ವಿತರಿಸಿದರು. ಅಳದಂಗಡಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ. ಅವರು ತಾವು ಸಂಸ್ಥೆಯಿಂದ ಪಡೆದ ಪ್ರೋತ್ಸಾಹಧನವನ್ನು ವಿದ್ಯಾರ್ಥಿಗಳು ಮರೆಯದೆ ಉದ್ಯೋಗಕ್ಕೆ ಸೇರಿದ ಬಳಿಕ ತಮ್ಮ ಸಂಪಾದನೆಯ ಭಾಗವನ್ನು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹವಾಗಿ ನೆರವಾಗುವ ಮೂಲಕ ಸಮಾಜದ ಋಣ ತೀರಿಸಬೇಕು ಎಂದರು.
ನಿರ್ದೇಶಕರಾದ ಶಿವಕಾಂತ ಗೌಡ ಮತ್ತು ಅಪರ್ಣ ದಂಪತಿಗಳನ್ನು ಸಮ್ಮಾನಿಸಲಾಯಿತು . ಪಟ್ಟೂರು ಶ್ರೀ ರಾಮ ಶಾಲೆಗೆ ಆದರ್ಶ ಸೇವಾ ಸಮಿತಿ ವತಿಯಿಂದ ರೂ 10,000 ಆರ್ಥಿಕ ನೆರವು ನೀಡಲಾಯಿತು. ಆದರ್ಶ ಸೇವಾ ಸಮಿತಿ ಅಧ್ಯಕ್ಷ ರಮೇಶ್ ಪ್ರಭು ಅಧ್ಯಕ್ಷತೆ ವಹಿಸಿ , ಸ್ವಾಗತಿಸಿದರು. ಕಾರ್ಯದರ್ಶಿ ಜಯಂತ ಶೆಟ್ಟಿ ಕುಂಟಿನಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ನಿರ್ದೇಶಕ ಚಂದ್ರಶೇಖರ್ ವರದಿ ಮಂಡಿಸಿ,ರಾಮದಾಸ್ ಭಂಡಾರ್ಕರ್ ಪ್ರತಿಭಾನ್ವಿತ ವಿದ್ಯಾರ್ಥಿಗಳ ವಿವರ ಮಂಡಿಸಿ ಕೊನೆಯಲ್ಲಿ ವಂದಿಸಿದರು. ನಿರ್ದೇಶಕರಾದ ರಮೇಶ್ ಭಟ್, ಶ್ರೀಧರ ಗೌಡ, ರಾಧಾಕೃಷ್ಣ ಶೆಟ್ಟಿ ಸಹಕರಿಸಿದ್ದರು. ನಿರ್ದೇಶಕ ಸಂಜೀವ ಶೆಟ್ಟಿ ಕುಂಟಿನಿ ಕಾರ್ಯಕ್ರಮ ನಿರೂಪಿಸಿದರು.