ಬೆಳ್ತಂಗಡಿ: ಧರ್ಮವು ಜೀವನದ ಅವಿಭಾಜ್ಯ ಅಂಗವಾದಾಗ ನಾವು ಎಲ್ಲಾ ಕ್ಷೇತ್ರಗಳಲ್ಲಿಯೂ ಉನ್ನತ ಸಾಧನೆಯೊಂದಿಗೆ ಯಶಸ್ಸು ಪಡೆಯಬಹುದು. ಸದಾಚಾರ, ಸತ್ಚಿಂತನೆಯೊಂದಿಗೆ ಮನೆಯೇ ಮಂದಿರವಾದಾಗ ಶಾಂತಿ, ನೆಮ್ಮದಿಯ ಜೀವನ ಸಾಧ್ಯವಾಗುತ್ತದೆ ಎಂದು ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಬೆಳ್ತಂಗಡಿ ತಾಲ್ಲೂಕು ಘಟಕದ ಜಂಟಿ ಆಶ್ರಯದಲ್ಲಿ ಭಾನುವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಗಾಂಧಿ ಜಯಂತಿ ಆಚರಣೆಯ ಅಂಗವಾಗಿ ಆಯೋಜಿಸಿದ ನವಜೀವನ ಸದಸ್ಯರ ಸಮಾವೇಶ ಮತ್ತು ಕೇಂದ್ರ ಒಕ್ಕೂಟಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೈನಂದಿನ ಜೀವನದಲ್ಲಿ ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ವಿಧಿಸಿರುವ ಕೆಲವು ವಿಧಿ-ನಿಯಮಗಳು, ನಿಷೇಧಗಳು ಧರ್ಮದ ಪ್ರತೀಕವಾಗಿದ್ದು ಅವುಗಳನ್ನು ದೃಢಸಂಕಲ್ಪದಿಂದ ಕಟ್ಟುನಿಟ್ಟಾಗಿ ಪಾಲಿಸಿದಾಗ ಜೀವನ ಪಾವನವಾಗುತ್ತದೆ. ಮನೆಯೇ ಮಂದಿರವಾಗಿ ಎಲ್ಲರೂ ಪರಸ್ಪರ ಪ್ರೀತಿ-ವಿಶ್ವಾಸದಿಂದ ಶಾಂತಿ, ನೆಮ್ಮದಿಯ ಗೌರವಪೂರ್ವಕ ಜೀವನ ನಡೆಸಬಹುದು.
ಸಹವಾಸದೋಷದಿಂದ ಮದ್ಯಪಾನದ ದಾಸರಾದಾಗ ದೇಹದ ಒಂದೊಂದು ಅಂಗವೂ ನಿಷ್ಕ್ರಿಯವಾಗಿ, ಪರಾವಲಂಬಿಗಳಾಗಿ ಕ್ಷುಲ್ಲಕ ಜೀವನ ನಡೆಸಬೇಕಾಗುತ್ತದೆ. ತಾತ್ಕಾಲಿಕ ಸಂತೋಷದ ಭ್ರಮೆಯನ್ನು ಬಿಟ್ಟು ಸಂಕಲ್ಪ ಶಕ್ತಿಯಿಂದ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ವ್ಯಸನಮುಕ್ತರಾದ ನವಜೀವನ ಸಮಿತಿ ಸದಸ್ಯರನ್ನು ಅಭಿನಂದಿಸಿದ ಅವರು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಕನಸು ಕಂಡ ಮದ್ಯಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲರೂ ಕಂಕಣ ಬದ್ಧರಾಗಬೇಕು. ಆಗ ಮಾತ್ರ ಗಾಂಧಿ ಜಯಂತಿ ಆಚರಣೆ ಅರ್ಥಪೂರ್ಣವಾಗಿ ಸಾರ್ಥಕವಾಗುತ್ತದೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಅಹಿಂಸಾ ಮಾರ್ಗದಿಂದ ಸಮಾಜದ ಸಂಘಟನೆಯೊಂದಿಗೆ ಗಾಂಧೀಜಿಯವರ ನೇತೃತ್ವದಲ್ಲಿ ಗಳಿಸಿದ ಸ್ವಾತಂತ್ರ್ಯವನ್ನು ಉಳಿಸಿ ರಕ್ಷಿಸಿ, ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಅವರು ಸರ್ವಕಾಲಕ್ಕೂ ಪ್ರಸ್ತುತವಾಗಿದ್ದು ಅವರ ಕನಸನ್ನು ನನಸು ಮಾಡಿ ರಾಷ್ಟ್ರದ ಉಜ್ವಲ ಭವಿಷ್ಯವನ್ನು ರೂಪಿಸಬೇಕು. ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ನೇತೃತ್ವದಲ್ಲಿ ಸ್ವ-ಸಹಾಯ ಸಂಘಗಳ ಮೂಲಕ ಸಮಾಜದ ಸಂಘಟನೆ ಮಾಡಲಾಗಿದೆ. ಮಹಿಳಾ ಸಬಲೀಕರಣದೊಂದಿಗೆ ಆರ್ಥಿಕ ಸ್ವಾವಲಂಬನೆ ಸಾಧಿಸಲಾಗಿದೆ. ಇಂದು ಮಹಿಳೆಯರು ಅಬಲೆಯರಲ್ಲ, ಸಬಲೆಯರು ಎಂದು ಸಾಧಿಸಿ ತೋರಿಸಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಶೇಕಡಾ 80 ರಷ್ಟು ಮಹಿಳೆಯರಿದ್ದಾರೆ. ಎಲ್ಲಾ ಫಲಾನುಭವಿಗಳಲ್ಲಿ ಭವಿಷ್ಯದ ಬಗ್ಯೆ ಭದ್ರತೆ ಮೂಡಿ ಬಂದಿದೆ. ಬದುಕಿನಲ್ಲಿ ಸಂಪಾದನೆ, ಬಳಕೆ ಮತ್ತು ಉಳಿತಾಯದ ಬಗ್ಯೆ ಎಲ್ಲರಿಗೂ ಅರಿವು, ಜಾಗೃತಿ ಉಂಟಾಗಿದೆ. ಪ್ರಗತಿಯಿಂದ ಸಾಧನೆ ಸಾಧ್ಯ ಎಂದು ತಿಳಿದು ಫಲಾನುಭವಿಗಳು 3000 ಕೋಟಿ ರೂ. ಉಳಿತಾಯ ಮಾಡಿದ್ದಾರೆ. 84,000 ಕೋಟಿ ರೂ. ಮೊತ್ತದ ವ್ಯವಹಾರ ನಡೆಸಿದ್ದಾರೆ. ದುಶ್ಚಟಕ್ಕೆ ಬಲಿಯಾಗದೆ ಎಲ್ಲರೂ ಸಾರ್ಥಕ ಜೀವನ ನಡೆಸಬೇಕು ಎಂದು ಸಲಹೆ ನೀಡಿದ ಹೆಗ್ಗಡೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೇಶಕ್ಕೆ ಮಾದರಿಯಾಗಿ ಮೂಡಿ ಬಂದಿದೆ ಎಂದು ಸಂತಸ ವ್ಯಕ್ತ ಪಡಿಸಿದರು.
ಶುಭಾಶಂಸನೆ ಮಾಡಿದ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಕಲಿಯುಗದಲ್ಲಿ ಸಂಘಟನೆಯೇ ಶಕ್ತಿಯಾಗಿದ್ದು, ಬೆಳ್ತಂಗಡಿ ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮ ರಾಜ್ಯದ ಮೂಲಕ ರಾಮರಾಜ್ಯದ ಕನಸು ನನಸಾಗುತ್ತಿದೆ. ಬದುಕಿನಲ್ಲಿ ಧನಾತ್ಮಕ ಪರಿವರ್ತನೆಯೊಂದಿಗೆ ಆರೋಗ್ಯಪೂರ್ಣ ಸಮಾಜ ರೂಪುಗೊಳ್ಳುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ಮಾನವೀಯತೆಯ ಮಹಾಸಂತ, ಅಜಾತಶತ್ರು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ರೂಪಿಸಿದ ಗ್ರಾಮಾಭಿವೃದ್ಧಿ ಯೋಜನೆ ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಎಲ್ಲರೂ ದುಶ್ಚಟ ಮುಕ್ತರಾಗಿ ಸಾರ್ಥಕ ಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ವ್ಯಸನ ಮುಕ್ತರ ಪರವಾಗಿ ನಾರಾವಿ ಗ್ರಾಮದ ಜ್ಯೋತಿಕಾ ಮತ್ತು ಕೊಕ್ಕಡದ ನಿಂಗಪ್ಪ ನಲಿಕೆ ಅನುಭವ ಹಂಚಿಕೊಂಡರು. ನವಜೀವನ ಸಾಧಕರಾದ ತೀರ್ಥಹಳ್ಳಿಯ ಮಂಜುನಾಥ್ ಮತ್ತು ಬೆಂಗಳೂರಿನ ಅಶೋಕ್ ಭಾರದ್ವಾಜ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಬರೆದ ನವಜೀವನ ಪೂಜಾ ಕೃತಿಯನ್ನು ಹೆಗ್ಗಡೆಯವರು ಲೋಕಾರ್ಪಣೆ ಮಾಡಿದರು. ವಿಶೇಷ ಚೇತನರಿಗೆ ಸೌಲಭ್ಯಗಳನ್ನು ವಿತರಿಸಲಾಯಿತು.
ಶ್ರದ್ಧಾಅಮಿತ್, ಡಾ. ಮೈತ್ರಿ, ಸಂಪತ್ ಸಾಮ್ರಾಜ್ಯ, ಅನಿಲ್ ಕುಮಾರ್, ಆರ್.ಬಿ. ಹೆಬ್ಬಳ್ಳಿ, ವಿವೇಕ್ ಪಾೈಸ್, ವಸಂತ ಸಾಲ್ಯಾನ್, ಪ್ರಭಾಕರ ಪೊಸಂದೋಡಿ ಉಪಸ್ಥಿತರಿದ್ದರು.
ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಸ್ವಾಗತಿಸಿದರು. ಯೋಜನಾಧಿಕಾರಿ ಸುರೇಂದ್ರ ಕುಮಾರ್ ಧನ್ಯವಾದವಿತ್ತರು. ಯಶವಂತ್ ಮತ್ತು ತಿಮ್ಮಯ್ಯ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.