ಪುತ್ತೂರು: ಪುತ್ತೂರಿನಲ್ಲಿ ಸರಕಾರಿ ಶಾಲೆಗಳನ್ನು ಉತ್ತಮ ರೀತಿಯಲ್ಲಿ ಶಾಸಕ ಸಂಜೀವ ಮಠಂದೂರು ಅಭಿವೃದ್ಧಿ ಮಾಡಿದ್ದಾರೆ. ಅದೇ ಕ್ರಮವನ್ನು ಮಾದರಿಯಾಗಿಟ್ಟುಕೊಂಡು ರಾಜ್ಯದಲ್ಲಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಲು ಪ್ರಯತ್ನಿಸಲಾಗುವುದು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಮಲೆ ಮಹದೇಶ್ವರ ಬೆಟ್ಟದಲ್ಲಿ ಆರಂಭಗೊಂಡ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಶನಿವಾರ ಸುಳ್ಯದ ಮೂಲಕ ಪುತ್ತೂರಿಗೆ ಆಗಮಿಸಿದ್ದು, ಪುತ್ತೂರು ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಸಮೀಪದ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಿದ ಕ್ರಮವನ್ನು, ಅವರಿಂದಲೇ ತಿಳಿದುಕೊಂಡು ತನ್ನ ಕ್ಷೇತ್ರದಲ್ಲಿಯೂ ಅಳವಡಿಸಿಕೊಳ್ಳುತ್ತೇನೆ. ಮುಂದೆ ರಾಜ್ಯಕ್ಕೂ ಇದೇ ಮಾದರಿಯನ್ನು ವಿಸ್ತರಿಸಲು ಪ್ರಯತ್ನಿಸಲಾಗುವುದು ಎಂದರು.
ಇಂತಹ ಹಲವಾರು ಅಭಿವೃದ್ಧಿ ಕಾರ್ಯಗಳ ಜೊತೆಗೆ ಸಂಸ್ಕಾರ, ಧರ್ಮದ ವಿಚಾರದಲ್ಲಿಯೂ ಬಿಜೆಪಿ ಸರಕಾರ ಕೆಲಸ ಮಾಡಿದೆ ಎಂದ ಅವರು, ಈ ಬಾರಿಯ ಚುನಾವಣೆ ಬರೀಯ ಅಭಿವೃದ್ಧಿಗೋಸ್ಕರವಷ್ಟೇ ಅಲ್ಲ, ಧರ್ಮ, ಧಾರ್ಮಿಕ ವಿಚಾರಗಳನ್ನು ಉಳಿಸಲೋಸುಗ ನಡೆಯಲಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಸಂಜೀವ ಮಠಂದೂರು ಅವರು, ರಾಜ್ಯ, ರಾಷ್ಟ್ರದ ಅಭಿವೃದ್ಧಿ ಕಾರ್ಯಗಳಿಗೆ ಡಬಲ್ ಇಂಜಿನ್ ಸರ್ಕಾರವೇ ಕಾರಣ. ಆದ್ದರಿಂದ ಜನತೆ ಬಿಜೆಪಿ ಸರ್ಕಾರದ ಮೇಲೆ ವಿಶ್ವಾಸ ಇಟ್ಟಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ಸಂಚಾಲಕ ದತ್ತಾತ್ರೇಯ, ಸಹಸಂಚಾಲಕ ಕಿಶೋರ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಉದಯ್ ಕುಮಾರ್ ಶೆಟ್ಟಿ, ಗೋಪಾಲಕೃಷ್ಣ ಹೇರಳೆ, ಚನಿಲ ತಿಮ್ಮಪ್ಪ ಶೆಟ್ಟಿ, ರಾಜೇಶ್ ಕಾವೇರಿ, ರಾಮ್ ದಾಸ್ ಬಂಟ್ವಾಳ, ಭಾಮಿ ಅಶೋಕ್ ಶೆಣೈ, ದೇವದಾಸ್ ಶೆಟ್ಟಿ, ಕಸ್ತೂರಿ ಪಂಜ, ಬೂಡಿಯಾರ್ ರಾಧಾಕೃಷ್ಣ ರೈ, ಆರ್.ಸಿ. ನಾರಾಯಣ್, ವಿದ್ಯಾಗೌರಿ, ಸುನಿಲ್ ದಡ್ಡು, ಮಲ್ಲಿಕಾ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ನಗರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿದರು. ಗ್ರಾಮಾಂತರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್ ವಂದಿಸಿದರು.
ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಸುಳ್ಯದಿಂದ ಪುತ್ತೂರಿಗೆ ಆಗಮಿಸಿದ್ದು, ಪುತ್ತೂರು ಬಸ್ ನಿಲ್ದಾಣದಿಂದ ವೆಂಕಟ್ರಮಣ ದೇವಳದವರೆಗೆ ಮೆರವಣಿಗೆಯಲ್ಲಿ ಸಾಗಿ ಬರಲಾಯಿತು.