News Karnataka Kannada
Friday, May 17 2024
ಮಂಗಳೂರು

ಪುತ್ತೂರು: ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲಿರುವ ಅಮಿತ್ ಶಾ

Campco is a co-operative organization established by the people for the people for the people.
Photo Credit : News Kannada

ಪುತ್ತೂರು: ಪುತ್ತೂರಿನ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಫೆ.11ರ ಶನಿವಾರದಂದು ನಡೆಯಲಿರುವ ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಕೇಂದ್ರ ಸಚಿವ ಅಮಿತ್ ಶಾ  ಉದ್ಘಾಟನೆ ಮಾಡಲಿದ್ದಾರೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಯಾಂಪ್ಕೊ ನಿಯಮಿತ ಮಂಗಳೂರಿನ ಅಧ್ಯಕ್ಷರು ಎ ಕಿಶೋರ್ ಕುಮಾರ್ ಕೊಡ್ಗಿ, ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಭಾರತ ಸರಕಾರದ ಸಂಸದೀಯ ವ್ಯವಹಾರಗಳ ಸಚಿವರು ಪ್ರಹ್ಲಾದ್ ಜೋಶಿ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಭಾಗವಹಿಸಲಿದ್ದಾರೆ. ಲೋಕಸಭಾ ಸದಸ್ಯರು, ಮಂಗಳೂರು ಮತ್ತು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರು ನಳಿನ್ ಕುಮಾರ್ ಕಟೀಲ್ ಈ ಕಾರ್ಯಕ್ರಮಕ್ಕೆ ಶುಭ ಕೋರಲಿದ್ದಾರೆ.

ಕರ್ನಾಟಕ ಸರ್ಕಾರದ ಇಂಧನ ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ವಿ. ಸುನಿಲ್ ಕುಮಾರ್, ಕರ್ನಾಟಕ ಸರ್ಕಾರದ ಗೃಹ ಸಚಿವರು ಅರಗ ಜ್ಞಾನೇಂದ್ರ, ಕರ್ನಾಟಕ ಸರ್ಕಾರದ ಸಹಕಾರ ಸಚಿವರಾಗಿರುವ ಎಸ್. ಟಿ ಸೋಮಶೇಖರ್, ಕರ್ನಾಟಕ ಸರಕಾರದ ಬಂದರು ಮತ್ತು ಒಳನಾಡು ಸಾರಿಗೆ ಸಚಿವರಾದ ಅಂಗಾರ ಎಸ್, ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಪುತ್ತೂರು ವಿಧಾನಸಭಾ ಕ್ಷೇತ್ರದ ಸದಸ್ಯರು ಸಂಜೀವ ಮಠಂದೂರು, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸದಸ್ಯರು ಯು. ರಾಜೇಶ್ ನಾಯ್ಕ್ ಉಪಸ್ಥಿತರಿರಲಿದ್ದಾರೆ.

ಕ್ಯಾಂಪ್ಕೊ ಲಿಮಿಟೆಡ್, 1973 ರಲ್ಲಿ ಸ್ಥಾಪಿಸಲಾದ ಪ್ರತಿಷ್ಠಿತ ಬಹು ರಾಜ್ಯ ಸಹಕಾರಿಸಂಘವಾಗಿದೆ. ಭಾರತದಾದ್ಯಂತ ವ್ಯಾಪಕವಾದ ಸಂಗ್ರಹಣೆ ಮತ್ತು ಮಾರುಕಟ್ಟೆಯನ್ನು ಹೊಂದಿರುವ ಕ್ಯಾಂಪ್ಕೊ ಜನರಿಂದ ಜನರಿಗಾಗಿ ಜನರಿಗೋಸ್ಕರ ಸ್ಥಾಪಿತವಾದ ಸಹಕಾರಿಸಂಸ್ಥೆ. ಅಡಿಕೆ, ಕೊಕ್ಕೊ, ರಬ್ಬರ್ ಮತ್ತು ಇದೀಗ ಕರಿಮೆಣಸಿನ ವ್ಯವಹಾರಗಳ ಜೊತೆಗೆ ಕೊಕ್ಕೊ ಆಧಾರಿತ ಚಾಕೊಲೇಟ್ ಮತ್ತು ಇತರ ಅರೆ-ಸಿದ್ಧ ಕೊಕ್ಕೊ ಉತ್ಪನ್ನಗಳನ್ನು ಸಹ ತಯಾರಿಸಿ ಮಾರುಕಟ್ಟೆಗೆ ನೀಡುತ್ತಿದೆ.

3576 ರೈತರ ಸದಸ್ಯತ್ವದೊಂದಿಗೆ ಶುರುವಾದ ಕ್ಯಾಂಪ್ಕೊ ಈಗ 1,38,000 ಕ್ಕೂ ಹೆಚ್ಚು ರೈತರ ಸದಸ್ಯತ್ವವನ್ನು ಹೊಂದಿದೆ. ಎಪ್ಪತ್ತರ ದಶಕದಲ್ಲಿ ಅಡಿಕೆ ಮಾರುಕಟ್ಟೆಯಲ್ಲಿ ಉಂಟಾದ ಏರುಪೇರಿನಿಂದ ರೈತರನ್ನು ಪಾರುಮಾಡಲು ಉತ್ಪನ್ನಗಳಿಗೆ ಸ್ಥಿರವಾದ ಮಾರುಕಟ್ಟೆಯನ್ನು ನೀಡುವ ಮೂಲಕ ಬೆಳೆಗಾರರ ಜೀವನದ ಗುಣಮಟ್ಟವನ್ನು ಸುಧಾರಿಸುವ ಮುಖ್ಯ ಉದ್ದೇಶದಿಂದ ಕ್ಯಾಂಪ್ಕೊ ಸ್ಥಾಪಿಸಲಾಯಿತು. ಕರ್ನಾಟಕ ಮತ್ತು ಕೇರಳ ಎರಡೂ ರಾಜ್ಯಗಳ ವಿಶಿಷ್ಟ ಸಂಯೋಜನೆಯ ಮುಖಾಂತರ ಕರ್ನಾಟಕ ಸಹಕಾರ ಸಂಘಗಳ ಕಾಯಿದೆಯಡಿಯಲ್ಲಿ ವಾರಣಾಶಿ ಸುಬ್ರಾಯ ಭಟ್ ಅವರ ರೈತೋಪಯೋಗಿ ದೂರದೃಷ್ಠಿತ್ವದಿಂದ ಸ್ಥಾಪಿಸಲಾದ ಕ್ಯಾಂಪ್ಕೊ ಲಿಮಿಟೆಡ್ ಅಂದಿನ ಅಡಿಕೆ ಮಾರುಕಟ್ಟೆಯ ಬಿಕ್ಕಟ್ಟಿನ ಪರಿಸ್ಥಿತಿಯನ್ನು ತಗ್ಗಿಸಿತು.

1986 ರಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕುಸಿತದಿಂದಾಗಿ, ಕೊಕ್ಕೊಗೆ ಯಾವುದೇ ಖರೀದಿದಾರರು ಇರಲಿಲ್ಲ. ಕೊಕ್ಕೊ ಬೆಳೆಗಾರರನ್ನು ಈ ಸಂಕಷ್ಟದಿಂದ ಪಾರು ಮಾಡಲು, ಆಗ್ನೇಯ ಏಷ್ಯಾದಲ್ಲಿ ಎರಡನೇ ಅತಿದೊಡ್ಡ ಚಾಕೊಲೇಟ್ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಮೂಲಕ ಕ್ಯಾಂಪ್ಕೊ ಮಹತ್ತರವಾದ ಜವಾಬ್ದಾರಿಯನ್ನು ವಹಿಸಿ ಕೊಕ್ಕೊ ಬೆಳೆಗಾರರ ಸಂಕಷ್ಟಕ್ಕೆ ಮಿಡಿಯಿತು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಕ್ಯಾಂಪ್ಕೊ ಚಾಕೊಲೇಟ್ ಫ್ಯಾಕ್ಟರಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ವರ್ಷಕ್ಕೆ 23,000 ಮೆಟ್ರಿಕ್ ಟನ್ ಉತ್ಪಾದನೆ ನೀಡುತ್ತಿದೆ. ಸ್ವಯಂಚಾಲಿತ ಮತ್ತು ಅತ್ಯಾಧುನಿಕ ಯಂತ್ರೋಪಕರಣಗಳೊಂದಿಗೆ ಸಂಪೂರ್ಣವಾಗಿ ಸುಸಜ್ಜಿತವಾದ ಕಾರ್ಖಾನೆಯನ್ನು ಅಂದಿನ ರಾಷ್ಟ್ರಪತಿಯಾಗಿದ್ದ ಗ್ಯಾನಿಜೈಲ್ ಸಿಂಗ್ ಅವರು ಉದ್ಘಾಟಿಸಿದರು. ಪರಿಸರ ಸ್ನೇಹಿ ಇಂಧನ ಬಳಕೆಗೋಸ್ಕರ ಕ್ಯಾಂಪ್ಕೊ ಮೂರು ವಿಂಡ್ ಮಿಲ್ ಘಟಕಗಳನ್ನು ಮತ್ತು 500 ಮೆಗಾ ವ್ಯಾಟ್ ಸೌರ ಫಲಕಗಳನ್ನು ಸ್ಥಾಪಿಸಿದೆ. ಫ್ಯಾಕ್ಟರಿಯಲ್ಲಿ ವಿ.ಎ.ಎಂ ಗಳನ್ನು ಕೂಡಾ ಸ್ಥಾಪಿಸಲಾಗಿದೆ.

ಸಮರ್ಥ ಆಡಳಿತಾಧಿಕಾರಿಯಾದ ಎ.ಕಿಶೋರ್ ಕುಮಾರ್ ಕೊಡ್ಗಿಯವರ ಅಧ್ಯಕ್ಷತೆಯಲ್ಲಿ, ವ್ಯವಸ್ಥಾಪಕ ನಿರ್ದೇಶಕರಾದ ಎಚ್. ಎಂ. ಕೃಷ್ಣಕುಮಾರ್ ಅವರ ನಾಯಕತ್ವದಲ್ಲಿ ಕ್ಯಾಂಪ್ಕೊ ದೇಶದಾದ್ಯಂತ 160 ಕ್ಕೂ ಹೆಚ್ಚು ಶಾಖೆಗಳನ್ನೂ, 2000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿ ರೂ.2,778 ಕೋಟಿಗೂ ಹೆಚ್ಚು ವಾರ್ಷಿಕ ವಹಿವಾಟನ್ನು ಸಮರ್ಥಕವಾಗಿ ನಡೆಸುತ್ತಿದೆ. ಸದಸ್ಯರ ಸಹಕಾರ ಹಾಗೂ ಕ್ರಿಯಾತ್ಮಕ ನಾಯಕತ್ವ ಕ್ಯಾಂಪ್ಕೊದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದೆ.

ಬದಲಾಗುತ್ತಿರುವ ಅಡಿಕೆ ಮಾರುಕಟ್ಟೆಯ ಸ್ಥಿತಿ – ಗತಿ, ಮಾರುಕಟ್ಟೆಯ ಏರುಪೇರುಗಳನ್ನು ಸಮರ್ಥವಾಗಿ ಎದುರಿಸಿ ಬೆಳೆಗಾರರ, ಸದಸ್ಯರ ವಿಶ್ವಾಸವನ್ನು ಗಳಿಸಿ ಭವಿಷ್ಯದಲ್ಲಿಯೂ ರೈತರ ಹಿತಾಸಕ್ತಿಯನ್ನು ಕಾಪಾಡುವ ಭರವಸೆ ನೀಡುತ್ತಾ ಸಾಗುತ್ತಿದೆ ಕ್ಯಾಂಪ್ಕೊ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು