News Karnataka Kannada
Sunday, May 19 2024
ಮಂಗಳೂರು

ದಕ್ಷಿಣ ಕನ್ನಡ ಹಾಲು ಒಕ್ಕೂಟ: 2,414 ಸದಸ್ಯರ ಹೆಚ್ಚಳ

Photo Credit : News Kannada

ಮಂಗಳೂರು:- ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಪ್ರಸ್ತುತ 396 ಸಂಘಗಳ 35,707 ಸಕ್ರಿಯ ಸದಸ್ಯರಿಂದ 2,86,576 ಲೀಟರ್ ಹಾಲು ಸಂಗ್ರಹಣೆಯಾಗುತ್ತಿದೆ ಹಾಗೂ ಉಡುಪಿ ಜಿಲ್ಲೆಯಲ್ಲಿ 338 ಸಂಘಗಳ 29,396 ಸಕ್ರಿಯ ಸದಸ್ಯರಿಂದ 1,89,806 ಲೀಟರ್ ಹಾಲು ಸಂಗ್ರಹಣೆಯಾಗುತ್ತಿದೆ.

ಡಿಸೆಂಬರ್ 2021ರ ಮಾಹೆಯಲ್ಲಿ ದ.ಕ ಜಿಲ್ಲೆಯಲ್ಲಿ 392 ಸಂಘಗಳ 36,943 ಸಕ್ರಿಯ ಸದಸ್ಯರಿಂದ 3,09,872 ಲೀ. ಹಾಗೂ ಉಡುಪಿ ಜಿಲ್ಲೆಯಲ್ಲಿ 338 ಸಂಘಗಳ 30,553 ಸಕ್ರಿಯ ಸದಸ್ಯರಿಂದ ಒಟ್ಟು 2,09,532 ಲೀ. ಹಾಲು ಸಂಗ್ರಹಣೆಯಾಗುತ್ತಿದೆ.

ಇದನ್ನು ಗಮನಿಸಿದಾಗ ಜಿಲ್ಲೆಯಲ್ಲಿ 1,236 ಸಕ್ರಿಯ ಸದಸ್ಯರು ಹಾಗೂ ಉಡುಪಿ ಜಿಲ್ಲೆಯಲ್ಲಿ 1,157 ಸಕ್ರಿಯ ಸದಸ್ಯರು ಸೇರಿ ಒಟ್ಟು 2,393 ಸಕ್ರಿಯ ಸದಸ್ಯರು ಕಡಿಮೆಯಾಗಿರುತ್ತಾರೆ. ಈ ಅವಧಿಯಲ್ಲಿ ಒಟ್ಟಾರೆಯಾಗಿ ಒಕ್ಕೂಟದ ವ್ಯಾಪ್ತಿಯಲ್ಲಿ 2,414 ಸದಸ್ಯರು ಹೆಚ್ಚಳವಾಗಿರುತ್ತಾರೆ.

ಮೇಲ್ಕಂಡ ಅಂಕಿ ಅಂಶಗಳ ಪ್ರಕಾರ ಸಕ್ರಿಯ ಸದಸ್ಯತ್ವವು ಕಡಿಮೆಯಾಗಲು ರಾಸುಗಳು ಗರ್ಭಾವಸ್ಥೆಯಲ್ಲಿರುವುದು, ಸ್ವಾಭಾವಿಕವಾಗಿ ಹೈನುಗಾರರು ವಯಸ್ಸಿನ ಕಾರಣದಿಂದ ಹೈನುಗಾರಿಕೆಯಿಂದ ನಿವೃತ್ತಿ, ನಗರೀಕರಣ, ಪಟ್ಟಣಕ್ಕೆ ವಲಸೆ ತೆರಳಿರುವುದು, ಕೋವಿಡ್ ಕಾಯಿಲೆ ಕಡಿಮೆಯಾಗಿ ಪರ್ಯಾಯ ಉದ್ಯೋವಕಾಶಗಳು ಪ್ರಾರಂಭಗೊಂಡಿರುವುದು ಪ್ರಮುಖ ಕಾರಣಗಳಾಗಿರುತ್ತವೆ.

ಒಕ್ಕೂಟದ ವ್ಯಾಪ್ತಿಯಲ್ಲಿ 2021-22ನೇ ಸಾಲಿನಲ್ಲಿ ದಿನವಹಿ ಸರಾಸರಿ 3,52,085 ಲೀ. ಹಾಲು ಮತ್ತು 60,019 ಕೆ.ಜಿ ಮೊಸರು ಮಾರಾಟವಾಗುತ್ತಿತ್ತು. ಆದರೆ ಪ್ರಸ್ತುತ ಸಾಲಿನಲ್ಲಿ 3,75,992 ಲೀ. ಹಾಲು ಮತ್ತು 70,193 ಕೆ.ಜಿ ಮೊಸರು ಮಾರಾಟವಾಗುತ್ತಿದೆ. ಅಂದರೆ, ದಿನವಹಿ 24,000 ಲೀ. ಹಾಲು ಹಾಗೂ 10,000 ಲೀ. ಮೊಸರು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಅಲ್ಲದೆ, ನಂದಿನಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದ್ದು ಕಳೆದ ಸಾಲಿಗೆ ಹೋಲಿಸಿದಾಗ ಸರಾಸರಿ ಶೇ.25 ರಷ್ಟು ಹೆಚ್ಚು ಮಾರಾಟವಾಗುತ್ತಿದೆ. ಹೆಚ್ಚುವರಿ ಮಾರಾಟದಿಂದಾಗಿ ಒಕ್ಕೂಟಕ್ಕೆ ಇನ್ನೂ ದಿನವಹಿ 40,000 ಲೀ. ಹಾಲಿನ ಅವಶ್ಯಕತೆ ಇದೆ.

ಒಕ್ಕೂಟದ ವ್ಯಾಪ್ತಿಯಲ್ಲಿ ರಾಸುಗಳಿಗೆ ಅಗತ್ಯವಾಗಿ ಬೇಕಾಗಿರುವ ನಂದಿನಿ ಪಶು ಆಹಾರವು ಕಳೆದ ಸಾಲಿನ ಡಿಸೆಂಬರ್ 2021ರ ಮಾಹೆಯಲ್ಲಿ ದ.ಕ. ಜಿಲ್ಲೆಯಲ್ಲಿ 2,761 ಮೆ.ಟನ್ ಹಾಗೂ ಉಡುಪಿ ಜಿಲ್ಲೆಯಲ್ಲಿ 3,090 ಮೆ.ಟನ್ ಸೇರಿ ಒಟ್ಟು 5,851 ಮೆ.ಟನ್ ಮಾರಾಟವಾಗಿರುತ್ತದೆ. ಆದರೆ ಪ್ರಸ್ತುತ ಡಿಸೆಂಬರ್ 2022ರ ಮಾಹೆಯಲ್ಲಿ ದ.ಕ. ಜಿಲ್ಲೆಯಲ್ಲಿ 3,384 ಮೆ.ಟನ್ ಹಾಗೂ ಉಡುಪಿ ಜಿಲ್ಲೆಯಲ್ಲಿ 3,748 ಮೆ.ಟನ್ ಸೇರಿ ಒಟ್ಟು 7133 ಮೆ.ಟನ್ ಪಶು ಆಹಾರ ಮಾರಾಟವಾಗಿ ಡಿಸೆಂಬರ್ 22 ರ ಮಾಹೆಯಲ್ಲಿ ಡಿಸೆಂಬರ್ 21 ರ ಮಾಹೆಗಿಂತ 1,282 ಮೆ.ಟನ್‍ನಷ್ಟು ಉತ್ತಮ ಗುಣಮಟ್ಟದ ಸಮತೋಲನ ಪಶು ಆಹಾರ ಹೆಚ್ಚುವರಿ ಮಾರಾಟವಾಗಿರುತ್ತದೆ. ಪಶು ಆಹಾರದ ಗುಣಮಟ್ಟವನ್ನು ಕಾಯ್ದುಕೊಳ್ಳುವ ವಿಚಾರದಲ್ಲಿ ಪ್ರತಿ ಮಾಹೆಯಾನ ಪಶು ಆಹಾರದ ಮಾದರಿಯನ್ನು ಪರೀಕ್ಷಿಸಿ ಗುಣಮಟ್ಟವನ್ನು ಖಾತರಿಪಡಿಸಿಕೊಳ್ಳಲಾಗುತ್ತಿದೆ.

ಅಕಾಲಿಕ ಮಳೆಯಿಂದ ಪಶು ಆಹಾರದ ಕಚ್ಚಾ ಪದಾರ್ಥಗಳಾದ ಮೆಕ್ಕೆಜೋಳ, ಅಕ್ಕಿ ತೌಡು, ಕಾಕಂಬಿ ಬೆಲೆಯು ಕನಿಷ್ಟ ಶೇ.20 ರಷ್ಟು ಗಣನೀಯವಾಗಿ ಹೆಚ್ಚಳವಾಗಿರುವ ಕಾರಣದಿಂದ ಪಶು ಆಹಾರದ ಮಾರಾಟ ದರದ ಮೇಲಿನ ಅನುದಾನವನ್ನು ಕಹಾಮವು ಹಿಂಪಡೆದಿರುವ ಕಾರಣ ಪ್ರಸ್ತುತ ಪಶು ಆಹಾರ ದರವು ಹೆಚ್ಚಳವಾಗಿರುತ್ತದೆ.

ಒಕ್ಕೂಟದಿಂದ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸುವ ಹಿತದೃಷ್ಟಿಯಿಂದ ನವಂಬರ್ ತಿಂಗಳಿನಿಂದ ಸದಸ್ಯರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ 2.05 ರೂ.ಗಳನ್ನು ವಿಶೇಷ ಪ್ರೋತ್ಸಾಹಧನವಾಗಿ ಸದಸ್ಯರಿಗೆ ನೀಡುವುದರಿಂದ ಪ್ರತಿ ತಿಂಗಳು ಒಕ್ಕೂಟದಿಂದ ಸರಾಸರಿ 3 ಕೋಟಿಯಷ್ಟು ಹಣ ಹೆಚ್ಚುವರಿಯಾಗಿ ಹಾಲಿನ ಬಟವಾಡೆಗಾಗಿ ವಿನಿಯೋಗಿಸಲಾಗುತ್ತಿದ್ದು, ಇದರಿಂದ ಒಕ್ಕೂಟವು ನಷ್ಟವಾಗಲು ಕಾರಣವಾಗಿರುತ್ತದೆ. ಈ ರೀತಿಯಲ್ಲಿ ವಿಶೇಷ ಪ್ರೋತ್ಸಾಹಧನವನ್ನು ಮುಂದುವರೆಸಿದಲ್ಲಿ ಮುಂದಿನ ಮೂರು ತಿಂಗಳಲ್ಲಿ 9 ರಿಂದ 10 ಕೋಟಿಯಷ್ಟು ಒಕ್ಕೂಟವು ನಷ್ಟ ಹೊಂದಬೇಕಾಗುತ್ತದೆ. ಅಲ್ಲದೆ, ಒಕ್ಕೂಟದಲ್ಲಿ 63 ರಿಂದ 64 ಕೋಟಿಯಷ್ಟು ಹಣ ಅಭಿವೃದ್ಧಿ ನಿಧಿಯಾಗಿ ಸಂಗ್ರಹಣೆಯಾಗಿದ್ದು, ಇದರಿಂದ ಬರುವ ಅಂದಾಜು 3 ಕೋಟಿ ಬಡ್ಡಿಯನ್ನು ಹಾಲಿನ ಖರೀದಿಗೆ ವಿನಿಯೋಗಿಸಿದಾಗ ಒಂದು ತಿಂಗಳು ಹಾಲಿನ ಪ್ರೋತ್ಸಾಹಧನವನ್ನು ಮಾತ್ರ ನೀಡಲು ಸಾಧ್ಯವಾಗುವುದು. ಆದ್ದರಿಂದ ಹಾಲಿನ ಉತ್ಪಾದಕರನ್ನು ಉತ್ತೇಜಿಸುವುದು ಹಾಗೂ ಒಕ್ಕೂಟದ ಆರ್ಥಿಕ ಪರಿಸ್ಥಿತಿಯನ್ನು ಮನಗಂಡು 2023ರ ಜ.11ರಿಂದ ಅನ್ವಯವಾಗುವಂತೆ ಪ್ರತಿ ಲೀಟರ್ ಹಾಲಿಗೆ ರೂ. 2.05 ರೂ.ಗಳ ವಿಶೇಷ ಪ್ರೋತ್ಸಾಹಧನದಲ್ಲಿ 1.05 ರೂ .ಅನ್ನು ಮಾತ್ರ ಹಿಂದಕ್ಕೆ ಪಡೆದುಕೊಂಡು ಉಳಿಕೆ 1 ರೂ.ಗಳ ವಿಶೇಷ ಪ್ರೋತ್ಸಾಹಧನವನ್ನು ಮುಂದುವರೆಸಲಾಗಿದೆ.

ಒಕ್ಕೂಟದ ವ್ಯಾಪ್ತಿಯಲ್ಲಿ ಉಭಯ ಜಿಲ್ಲೆಯಲ್ಲಿ ಪ್ರಸ್ತುತ 16 ಪಶು ವೈದ್ಯಕೀಯ ಶಿಬಿರ ಕಚೇರಿಗಳು ಕಾರ್ಯಾಚರಣೆಯಲ್ಲಿದ್ದು ಒಟ್ಟು 17 ಮಂದಿ ಪಶು ವೈದ್ಯಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ, 6 ತಜ್ಞ ಪಶು ವೈದ್ಯರು ವಿಶೇಷ ಸಲಹಾ ಸೂಚನೆಗಳನ್ನು ನೀಡುತ್ತಿದ್ದಾರೆ. ಇತ್ತೀಚಿನ ವರದಿಯಂತೆ ರಾಜ್ಯದಲ್ಲಿ 28,386 ರಾಸುಗಳು ಚರ್ಮಗಂಟು ರೋಗದಿಂದ ಮರಣಹೊಂದಿದ್ದು, ಉಡುಪಿ ಜಿಲ್ಲೆಯಲ್ಲಿ 54 ರಾಸುಗಳು ಹಾಗೂ zಕ್ಷಿಣ ಕನ್ನಡ ಜಿಲ್ಲೆಯಲ್ಲಿ 229 ರಾಸುಗಳು ಮರಣ ಹೊಂದಿರುವುದಾಗಿ ವರದಿಯಾಗಿರುತ್ತದೆ.

ಚರ್ಮಗಂಟು ರೋಗವು ವೈರಸ್‍ನಿಂದ ಹರಡುವ ಕಾಯಿಲೆಯಾಗಿದ್ದು, ವೈರಸ್ ಕಾಯಿಲೆಗೆ ನಿಖರವಾದ ಔಷಧ ಲಭ್ಯವಿಲ್ಲದಿದ್ದರೂ ಸಹ ಒಕ್ಕೂಟದ ಶಿಬಿರ ಕಚೇರಿಯ ಪಶುವೈದ್ಯರು, ಪಶು ವೈದ್ಯಕೀಯ ಇಲಾಖೆಯ ಸಹಯೋಗದೊಂದಿಗೆ ಸಂಘಗಳ ಕೃ.ಗ ಕಾರ್ಯಕರ್ತರು/ಲಸಿಕೆದಾರರ ಸಹಕಾರದಲ್ಲಿ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅಲ್ಲದೆ ರಾಸುಗಳಲ್ಲಿ ಈ ಕಾಯಿಲೆಯು ಉಲ್ಬಣವಾಗದಂತೆ ಹೋಮಿಯೋಪತಿ ಔಷಧಿ, ಒಕ್ಕೂಟದ ಅನುದಾನದೊಂದಿಗೆ ಪೂರಕ ಔಷಧಿ, ಅಗತ್ಯ ಪಶು ಔಷಧಿಗಳನ್ನು ಸರಬರಾಜು ಮಾಡಿ ಕಾಯಿಲೆಯನ್ನು ಪೂರ್ಣ ರೂಪದಲ್ಲಿ ಹತೋಟಿಯಲ್ಲಿಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗಳ ವೇತನವನ್ನು ಆಯಾಯ ಸಂಘಗಳ ಲಾಭಾಂಶವನ್ನು ಅವಲಂಬಿಸಿ ಸಹಕಾರ ಇಲಾಖೆಯ ಮಾರ್ಗಸೂಚಿಯಂತೆ ನಿಗದಿಯಾಗುತ್ತಿದ್ದು, ಒಕ್ಕೂಟದ ವ್ಯಾಪ್ತಿಯ ಎಲ್ಲಾ ಸಂಘಗಳು ಲಾಭದಲ್ಲಿದ್ದು, ಹೆಚ್ಚಿನ ಸಂಘಗಳಲ್ಲಿ ಈಗಾಗಲೇ ಇಲಾಖಾ ಮಾರ್ಗಸೂಚಿಯಂತೆ ವೇತನ ನಿಗದಿಪಡಿಸಲಾಗಿದೆ.

ರಾಜ್ಯದಾದ್ಯಂತ ಹಾಲಿನ ಶೇಖರಣೆ ಕಡಿಮೆಯಾಗಿದ್ದು ಒಕ್ಕೂಟವು ಹಾಲನ್ನು ಇತರ ಒಕ್ಕೂಟಗಳಿಂದ ಪ್ರಸ್ತುತ ಖರೀದಿಸುತ್ತಿಲ್ಲ. ಒಕ್ಕೂಟವು ಹೈನುಗಾರರ ಹಿತಾಸಕ್ತಿಯನ್ನು ಕಾಪಾಡಲು ಈಗಾಗಲೇ ವಿವಿಧ ಯೋಜನೆಗಳಾದ ಪ್ರೋತ್ಸಾಹಧನ, ಕರು ಸಾಕಾಣಿಕೆ ಯೋಜನೆ, ಹಸಿರು ಮೇವು ಯೋಜನೆ, ಹಾಲು ಹೆಚ್ಚಳ ಕಾರ್ಯಕ್ರಮವನ್ನು ಒಕ್ಕೂಟದ ಅನುದಾನದ ಮೂಲಕ ನಿರಂತರ ನೀಡಲಾಗುತ್ತಿದ್ದು ಅಲ್ಲದೆ ಒಕ್ಕೂಟದ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವುದರಿಂದಲೇ ಹಾಲಿನ ಗುಣಮಟ್ಟದಲ್ಲಿ ರಾಜ್ಯ ಮಟ್ಟದಲ್ಲಿ ಮೊದಲನೇ ಸ್ಥಾನದಲ್ಲಿರಲು ಸಾಧ್ಯವಾಗಿದೆ.

ಇನ್ನು ಮುಂದೆಯೂ ಸಹ ಉನ್ನತ ಸ್ಥಾನದಲ್ಲಿರಲು ಸಮಸ್ತ ಹೈನು ಬಾಂಧವರು ಕೈಜೋಡಿಸುವಂತೆ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾದ ಸುಚರಿತ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು