ಮಂಗಳೂರು: ಉತ್ತಮ ನಾಳೆಗಾಗಿ ಪ್ಲಾಸ್ಟಿಕ್ಗಳನ್ನು ಕಡಿಮೆ ಮಾಡುವುದು ಹಾಗೂ ಮರುಬಳಕೆ ಮಾಡುವುದು ಇಂದಿನ ಅಗತ್ಯವಾಗಿದೆ. ಈ ಧ್ಯೇಯದೊಂದಿಗೆ, ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗಿನ ಸ್ವಚ್ಛ ಭಾರತ ಕ್ಲಬ್ ಹಾಗೂ ಸಾಂಸ್ಥಿಕ ಮೌಲ್ಯಗಳು ಮತ್ತು ಉತ್ತಮ ಅಭ್ಯಾಸಗಳ ಸಮಿತಿಯು, ಮಂಗಳೂರಿನ ಸಿಒಡಿಪಿ ಸಂಸ್ಥೆಯ ಸಹಯೋಗದೊಂದಿಗೆ, ತ್ಯಾಜ್ಯ ಪ್ಲಾಸ್ಟಿಕ್ಗಳನ್ನು ಉಪಯುಕ್ತ ಸರಕುಗಳಾಗಿ ಮರುರೂಪಿಸುವ ಮೂಲಕ ಅವುಗಳನ್ನು ಕಡಿಮೆ ಮಾಡುವ ಕಾರ್ಯವನ್ನು ಕೈಗೊಂಡಿತು.
2023, ಜೂನ್ ತಿಂಗಳಲ್ಲಿ ಈ ಚಟುವಟಿಕೆಯನ್ನು ಪ್ರಾರಂಭಿಸಲಾಗಿದ್ದು ಸಂಸ್ಥೆಯ ನರ್ಸಿಂಗ್ ವಿದ್ಯಾರ್ಥಿಗಳು ಮತ್ತು ಶಿಕ್ಷಕರು 2 ಲೀಟರ್ ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ವಿವಿಧೆಡೆಯಿಂದ ಸಂಗ್ರಹಿಸಿದರು ಹಾಗೂ ತ್ಯಾಜ್ಯ ಒಣ ಪ್ಲಾಸ್ಟಿಕ್ಗಳನ್ನು ಸಂಸ್ಥೆಯ ಕ್ಯಾಂಪಸ್ನಿಂದ ಒಟ್ಟು ಮಾಡಿದರು. ಸಂಗ್ರಹಿಸಿದ ಒಣ ಪ್ಲಾಸ್ಟಿಕ್ಗಳನ್ನು ತುಂಡರಿಸಿ ಖಾಲಿ ಬಾಟಲಿಗಳನ್ನು ತುಂಬಿಸಿದರು.
ಈ ಕಾರ್ಯವು ಕಷ್ಟಕರವಾಗಿದ್ದರೂ ವಿದ್ಯಾರ್ಥಿಗಳು ಈ ಕೆಲಸವನ್ನು ಆಸಕ್ತಿಯಿಂದ ಮಾಡಿ ಪರಿಸರದ ಸಂರಕ್ಷಣೆಗೆ ತಮ್ಮ ಅನುದಾನವನ್ನು ನೀಡಿದ್ದಾರೆ. ಪೂರ್ಣಗೊಂಡ ಮೊದಲ 60 ಬಾಟಲಿಗಳನ್ನು ಗುಜ್ಜರಕೆರೆ ಪಾರ್ಕ್, ಜೆಪ್ಪು, ಮೋರ್ಗನ್ಸ್ ಗೇಟ್, ಮಂಗಳೂರಿನಲ್ಲಿ ಇಕೋ-ಬೆಂಚ್ ನಿರ್ಮಿಸಲು ಬಳಸಲಾಗಿದೆ.
ಪ್ಲಾಸ್ಟಿಕ್ ಬಾಟಲಿಗಳನ್ನು ಹೊರತುಪಡಿಸಿ ನಿರ್ಮಾಣಕ್ಕೆ ಮರಳು, ಸಿಮೆಂಟ್, ಆವೆಮಣ್ಣು ಮತ್ತು ಗ್ರಾನೈಟ್ ಕಲ್ಲುಗಳನ್ನು ಬಳಸಲಾಗಿದೆ. ಬೆಂಚಿನ ಕೆಲಸವು ಜನವರಿ 10 ರಂದು ಆರಂಭವಾಗಿ ಜನವರಿ 15, 2024 ಕ್ಕೆ ಪೂರ್ಣಗೊಂಡಿದೆ. ಈ ಕೆಲಸವು ಸಂಸ್ಥೆಯ ಸ್ವಚ್ಛ ಭಾರತ ಕ್ಲಬ್ಬಿನ ಶ್ರೀಮತಿ ಪ್ರಿಯ ಹಾಗೂ ಹಾಗೂ ಸಾಂಸ್ಥಿಕ ಮೌಲ್ಯಗಳು ಮತ್ತು ಉತ್ತಮ ಅಭ್ಯಾಸಗಳ ಸಮಿತಿಯ ಶ್ರೀಮತಿ ಸಾಂಡ್ರಾರವರ ಅಧ್ಯಕ್ಷತೆಯಲ್ಲಿ ನಡೆದಿದೆ.