ಪುಣೆ: ವಿರೋಧ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರಾದ ಶರದ್ ಪವಾರ್ ಅವರು ಮಂಗಳವಾರ ಮಹಾರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಮಿತ್ರಪಕ್ಷಗಳು ಅವರನ್ನು ಒತ್ತಾಯಿಸಿದ್ದು, ಶರದ್ ಪವಾರ್ ಈ ನಡುವೆಯೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಇಬ್ಬರೂ ನಾಯಕರು ಒಟ್ಟಿಗೆ ಕಾಣಿಸಿಕೊಂಡಿದ್ದು, ಪ್ರತಿಪಕ್ಷಗಳ ಒಕ್ಕೂಟ ಇಂಡಿಯಾ ಸದಸ್ಯರಿಗೆ ಇರಿಸುಮುರುಸು ತಂದಿದೆ. ತಿಲಕ್ ಸ್ಮಾರಕ ಮಂದಿರ ಟ್ರಸ್ಟ್ (ಹಿಂದ್ ಸ್ವರಾಜ್ ಸಂಘ) ಕಾರ್ಯಕ್ರಮ ಆಯೋಜಿಸಿತ್ತು. ಪ್ರತಿ ವರ್ಷ ಲೋಕಮಾನ್ಯ ತಿಲಕರ ಪುಣ್ಯತಿಥಿಯಾದ ಆಗಸ್ಟ್ 1 ರಂದು ರಾಷ್ಟ್ರದ ಅಭಿವೃದ್ಧಿಗಾಗಿ ಗಮನಾರ್ಹ ಕೊಡುಗೆಗಳನ್ನು ನೀಡಿದ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ.
ಸಮಾರಂಭದಲ್ಲಿ ಉಭಯ ನಾಯಕರು ಪರಸ್ಪರ ಆತ್ಮೀಯವಾಗಿ ಶುಭಾಶಯ ಕೋರಿದರು. ಪಿಎಂ ಮೋದಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಹಿರಿಯರ ಬಳಿಗೆ ತೆರಳಿದರು. ಈ ವೇಳೆ ಶರದ್ ಪವಾರ್ ನಗುತ್ತಾ ಪ್ರಧಾನಿಯನ್ನು ಬೆನ್ನು ತಟ್ಟಿದರು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ ಹೀಗೆ ಹೇಳಿದರು. ಪ್ರಶಸ್ತಿ ಜತೆಗೆ ಜವಾಬ್ದಾರಿ ಕೂಡ ಹೆಚ್ಚಾಗುತ್ತದೆ, ಈ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು 140 ಕೋಟಿ ಜನರಿಗೆ ಅರ್ಪಿಸುತ್ತೇನೆ, ಇ ದರೊಂದಿಗೆ ಪ್ರಶಸ್ತಿಯೊಂದಿಗೆ ಪಡೆದ ಮೊತ್ತವನ್ನು ನಮಾಮಿ ಗಂಗೆ ಯೋಜನೆಗೆ ನೀಡುವುದಾಗಿ ಪ್ರಧಾನಿ ಮೋದಿ ಘೋಷಿಸಿದರು.
ಲೋಕಮಾನ್ಯ ಗಂಗಾಧರ ತಿಲಕ್ ಅವರಿಗೆ ಯುವಕರನ್ನು ಗುರುತಿಸುವ ಕಲೆ ಇತ್ತು, ವೀರ ಸಾವರ್ಕರ್ ಅವರು ವಿದೇಶದಲ್ಲಿ ವ್ಯಾಸಂಗ ಮಾಡಬೇಕೆಂದು ತಿಲಕರು ಬಯಸಿದ್ದರು ಮತ್ತು ಮರಳಿ ಬಂದ ನಂತರ ದೇಶಕ್ಕೆ ಸೇವೆ ಸಲ್ಲಿಸಬೇಕು ಎಂದು ಕೂಡ ಹೇಳಿದ್ದರು. ಇಂದು ವಿದೇಶಿ ದಾಳಿಕೋರರ ಹೆಸರಲ್ಲಿ ನಿರ್ಮಿಸಿರುವ ರಸ್ತೆಯ ಹೆಸರನ್ನು ಬದಲಾಯಿಸಿದರೆ ಕೆಲವರಿಗೆ ಕೋಪ ಕೆರಳುತ್ತದೆ, ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ ಸರ್ದಾರ್ ಪಟೇಲರು ಲೋಕಮಾನ್ಯ ಗಂಗಾಧರ ತಿಲಕರ ಪ್ರತಿಮೆ ಸ್ಥಾಪಿಸುವಂತೆ ಬ್ರಿಟಿಷರಿಗೆ ಸವಾಲು ಹಾಕಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕಾರ್ಯಕ್ರಮದಲ್ಲಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮಾತನಾಡಿ, ಪುಣೆಗೆ ದೇಶದಲ್ಲಿ ಮಹತ್ವದ ಸ್ಥಾನವಿದೆ, ಇಂದು ಈ ಗೌರವವನ್ನು ಇಲ್ಲಿಂದ ಮಾತ್ರ ನೀಡಲಾಗುತ್ತಿದೆ. ದೇಶದ ಮೊದಲ ಸರ್ಜಿಕಲ್ ಸ್ಟ್ರೈಕ್ ಮಾಡಿದವರು ಛತ್ರಪತಿ ಶಿವಾಜಿ ಎಂದರು. ದೇಶಕ್ಕಾಗಿ ತಿಲಕರು ಮತ್ತು ಮಹಾತ್ಮ ಗಾಂಧಿಯವರ ಕೊಡುಗೆ ಬಹಳ ದೊಡ್ಡದಾಗಿದೆ ಮತ್ತು ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ಅವರು ಹೇಳಿದರು.