ಪುತ್ತೂರು: ಪುತ್ತೂರು ದೇವಭೂಮಿಯಾಗಿದ್ದು, ಪರಶುರಾಮ ಸೃಷ್ಟಿ ಹಿರಿಮೆ ಹೊಂದಿದೆ ಪ್ರದೇಶ. ಸಾಗರ ಮತ್ತು ಪಶ್ಚಿಮ ಘಟ್ಟಗಳ ಸಾಲಿನಿಂದ ಆವೃತವಾದ ಪುಣ್ಯಭೂಮಿ. ಇಲ್ಲಿನ ಆಚಾರ ವಿಚಾರ ಸಂಸ್ಕೃತಿ ಹಿರಿಮೆಯ ಬಗ್ಗೆ ಹಿಂದಿನಿಂದಿಲೂ ಅರಿವಿತ್ತು. ಆದರೆ ಕಾಂತಾರ ಸಿನಿಮಾ ವೀಕ್ಷಣೆ ಮಾಡಿದ ಬಳಿಕ ಇಲ್ಲಿನ ದೈವ , ದೇವರ ಆಗಾಧ ಶಕ್ತಿಯ ಬಗ್ಗೆ ಅಭಿಮಾನ ನೂರ್ಮಡಿಯಾಯಾಯಿತು. ದಕ್ಷಿಣ ಕನ್ನಡ ಜಿಲ್ಲೆ ಜಲ, ವಾಯು, ರಸ್ತೆ, ರೈಲ್ವೆ ಮಾರ್ಗಗಳನ್ನು ಹೊಂದಿರುವ ವ್ಯಾಪಾರ ವಹಿವಾಟಿಗೆ ಯೋಗ್ಯ ಪ್ರದೇಶ. ಗುಜರಾತಿಗಳಿಗೆ ಕರ್ನಾಟಕ ರಾಜ್ಯದವರೊಂದಿಗೆ ಅವಿನಾಭಾವ ನಂಟಿದೆ. ಗುಜರಾತಿನ ಸುಪಾರಿ ವಹಿವಾಟು ಕರಾವಳಿಯನ್ನೇ ಪ್ರಮುಖವಾಗಿ ಅವಲಂಬಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಪುತ್ತೂರು ಕ್ಯಾಂಪ್ಕೋ ಸಂಸ್ಥೆ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕ್ಯಾಂಪ್ಕೋ ಸುವರ್ಣ ಮಹೋತ್ಸವಕ್ಕೆ ಬರಬೇಕೆ ಬೇಡವೆ ಎಂಬ ಗೊಂದಲದಲ್ಲಿದ್ದೆ. ಆದರೆ ಸಂಸ್ಥೆ ಇತಿಹಾಸ ಅರಿತ ಬಳಿಕ ಬರಬೇಕೆಂದು ನಿಶ್ಚಯಿಸಿದೆ. ವಾರಾಣಸಿ ಸುಬ್ರಾಯ ಭಟ್ ಸ್ಥಾಪಿಸಿದ ಕ್ಯಾಂಪ್ಕೋ ಸಂಸ್ಥೆಯೆಂಬ ಗಿಡ ಇಂದು ಹೆಮ್ಮರವಾಗಿ ಬೆಳೆದು ಸಹಸ್ರಾರು ಕುಟುಂಬಗಳಿಗೆ ಆಶ್ರಯ ತಾಣವಾಗಿದೆ. 3500 ಸಾವಿರ ಕೋಟಿ ವ್ಯವಹಾರ ನಡೆಸುವ ಮೂಲಕ ರೈತರ ಆಶಾಕಿರಣವಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆ ನಿರ್ದೇಶಕರು, ಆಡಳಿತಮಂಡಳಿಯ ಶ್ರಮ ಪ್ರತಿ ಸಹಕಾರಿ ಸಂಸ್ಥೆಗಳಿಗೆ ಮಾದರಿ ಎಂದರು.
ಸಮಗ್ರತೆ, ರಾಷ್ಟ್ರೀಯ ಭದ್ರತೆಗೆ ಒತ್ತು: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಆದರೆ ಕಾಂಗ್ರೆಸ್, ಪಿಎಫ್ಐ ಸೇರಿದಂತೆ ದೇಶ ವಿರೋಧಿ ಶಕ್ತಿಗಳಿಗೆ ಬೆಂಬಲ ನೀಡಿ, ಪೋಷಿಸುವ ಕೆಲಸ ಮಾಡುತ್ತಿದೆ. ಕಾಶ್ಮೀರದಲ್ಲಿ ಅರ್ಟಿಕಲ್ 370 ತೆಗೆದುಹಾಕಿದರೆ ಕಾಶ್ಮೀರದಲ್ಲಿ ರಕ್ತಪಾತವಾಗುತ್ತದೆ ಎಂದು ವಿರೋಧಪಕ್ಷದವರು ಕೊಂಕು ನುಡಿದಿದ್ದರು. ಆದರೆ ಆ ಬಗ್ಗೆ ಕೇಂದ್ರ ಸರ್ಕಾರ ದಿಟ್ಟ ಕ್ರಮ ಕೈಗೊಂಡಿತು. ಕೇಂದ್ರ ಸರ್ಕಾರ, ಪಿಎಫ್ಐನಂತಹ ಭಯೋತ್ಪಾದಕರೊಂದಿಗೆ ಸಂಬಂಧವಿರುವ ಸಂಘಟನೆ ನಿಷೇಧಿಸಿ ದಿಟ್ಟ ಕ್ರಮ ಕೈಗೊಂಡಿತು. ಆದರೆ ಕಾಂಗ್ರೆಸ್ ಆಡಳಿತದ ವೇಳೆ ಭ್ರಷ್ಟಾಚಾರ, ಭಯೋತ್ಪಾದನೆಯೇ ಅವರ ಮೂಲತತ್ವವಾಯಿತು ಎಂದು ಆರೋಪಿಸಿದರು.
ಟಿಪ್ಪು ನಂಬುವ ಕಾಂಗ್ರೆಸ್, ಅಬ್ಬಕ್ಕನನ್ನು ನಂಬುವ ಬಿಜೆಪಿ: ಮತಾಂಧ ಟಿಪ್ಪು ತತ್ವಗಳಲ್ಲಿ ನಂಬಿಕೆಯಿರಿಸಿರುವ ಕಾಂಗ್ರೆಸ್ ಬೇಕೆ ಅಥವಾ ದೇಶದಲ್ಲಿ ಮೊದಲ ಬಾರಿಗೆ ಸ್ವಾತಂತ್ರ್ಯದ ಕಹಳೆ ಮೊಳಗಿಸಿ ರಾಣಿ ಅಬ್ಬಕ್ಕನ ಮೇಲೆ ನಂಬಿಕೆಯಿರಿಸಿರುವ ಬಿಜೆಪಿ ಭವಿಷ್ಯದಲ್ಲಿ ಅಧಿಕಾರಕ್ಕೆ ಬರಬೇಕೆ ಎಂಬುದನ್ನು ಪುತ್ತೂರು ಸಹಿತ ಕರ್ನಾಟಕದ ಜನತೆ ನಿರ್ಧರಿಸಬೇಕಿದೆ. ಕಾಂಗ್ರೆಸ್ ಅಡಳಿತ ಅವಧಿಯಲ್ಲಿ ಕರ್ನಾಟಕ ಗಾಂಧಿ ಪರಿವಾರದ ಎಟಿಎಂ ಆಗಿತ್ತು ಎಂದು ವ್ಯಂಗ್ಯವಾಡಿದರು.
ಕರಾವಳಿ ಅಭಿವೃದ್ಧಿಗೆ ಯೋಜನೆ: ಪ್ರಧಾನಿ ಮತ್ಸಸಂಪದ ಯೋಜನೆಗೆ ಒತ್ತು ನೀಡಿದ್ದು, ಮಂಗಳೂರು, ಬೆಂಗಳೂರನ್ನು ಸ್ಟಾಟರ್ಪ್ ಹಬ್ ಆಗಿ ಪರಿವರ್ತಿಸಲು ಕ್ರಮ ಕೈಗೊಂಡಿದ್ದಾರೆ. ಶಿರಾಡಿ ಸುರಂಗ ಮಾರ್ಗ ಯೋಜನೆ ಮಾಡಿ ವ್ಯಾಪಾರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಅಲ್ಲದೆ ಮಂಗಳೂರು ಬಂದರು ಪ್ರಗತಿಗೆ ಕ್ರಮ ವಹಿಸಲಾಗಿದೆ ಎಂದು ವಿವರಿಸಿದರು.
ಮತ್ತೆ ಬರುತ್ತೇನೆ ಎಂದ ಶಾ: ಸಮಯದ ಅಭಾವವಿದ್ದು ಭವಿಷ್ಯದಲ್ಲಿ ಮತ್ತೊಮ್ಮೆ ಈ ಪ್ರದೇಶಕ್ಕೆ ಬರುತ್ತೇನೆ. ನಿಮ್ಮ ಮುಂದೆ ಮನಃ ಬಿಚ್ಚಿ ಮಾತನಾಡುತ್ತೇನೆ ಎಂದರು. ಅಲ್ಲದೇ ಬಿಜೆಪಿ ಪೂರ್ಣ ಬಹುಮತದ ಸರ್ಕಾರ ಸರ್ಕಾರ ರಚನೆ ಮಾಡಲು ನಿಮ್ಮ ಸಹಕಾರ ಅಗತ್ಯ ಎಂದರು.
ನಿಮ್ಮ ಧ್ವನಿ ಮೋದಿಗೆ ಕೇಳಲಿ: ಭಾಷಣದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ತ್ರಿಪುರದಲ್ಲಿದ್ದು ಅಲ್ಲಿಗೆ ಬಿಜೆಪಿ ಕಾರ್ಯಕರ್ತರ ಘೋಷಣೆಗಳು ತಲುಪಬೇಕು ಎಂದು ಮನವಿ ಮಾಡಿದರು. ಆಗ ಕಾರ್ಯಕರ್ತರಿಂದ ಭಾರತ್ ಮಾತಾ ಕೀ ಜೈ ಘೋಷಣೆ ಮೊಳಗಿತು.
ದೇವರ, ವೀರವನಿತೆ ಅಬ್ಬಕ್ಕ ಸ್ಮರಣೆ: ಭಾಷಣದ ಆರಂಭದಲ್ಲಿ ರಾಣಿ ಅಬ್ಬಕ್ಕಳಿಗೆ ನೆನೆದು, ಕದ್ರಿ, ಮಂಗಳಾದೇವಿ,ಪುತ್ತೂರು ಮಹಾಲಿಂಗೇಶ್ವರ ದೇವರ ಸ್ಮರಣೆ ಮಾಡಿದರು.
2 ಲಕ್ಷ ಹೊಸ ಪ್ರಾಥಮಿಕ ಸೊಸೈಟಿ ಸ್ಥಾಪನೆ: ಮೂರು ವರ್ಷಗಳಲ್ಲಿ ದೇಶದಲ್ಲಿ 2 ಲಕ್ಷ ಹೊಸ ಪ್ರಾಥಮಿಕ ಕೃಷಿ ಕ್ರೆಡಿಟ್ ಸೂಸೈಟಿ ಸ್ಥಾಪಿಸಲಾಗುವುದು ಎಂದರು. ಪ್ರತಿ ಪಂಚಾಯಿತಿಯಲ್ಲಿ ಬಹು ಆಯಾಮದ ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿ ಸ್ಥಾಪನೆಗೆ ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ. ಪ್ರತಿಯೊಂದು ಪಂಚಾಯಿತಿಯೂ ಒಂದು ಸೊಸೈಟಿ ಹೊಂದಲಿವೆ ಎಂದು ತಿಳಿಸಿದರು.