ಬೆಳ್ತಂಗಡಿ: ಸಹಸ್ರಾರು ವರ್ಷಗಳ ಕಾಲ ಪರಕೀಯ ದಾಳಿ ದೇಶದ ಮೇಲೆ ಆಗಿದ್ದರೂ ದೈವ, ದೇವರುಗಳ ಮೇಲಿನ ನಮ್ಮ ನಂಬಿಕೆಗಳೇ ನಮ್ಮ ಹಿರಿಮೆ-ಗರಿಮೆಗಳು ಇನ್ನೂ ಉಳಿದುಕೊಳ್ಳಲು ಕಾರಣ ಎಂದು ಚಿತ್ರದುರ್ಗ ಮಠದ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ನುಡಿದರು.
ಓಡಿಲ್ನಾಳ ಗ್ರಾಮದ ಮೈರಲ್ಕೆ ಶ್ರೀರಾಮನಗರದಲ್ಲಿರುವ ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಮೊದಲ ದಿನವಾದ ಭಾನುವಾರ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ನಮ್ಮೊಳಗಿರುವ ಪರಸ್ಪರ ಭಾವನಾತ್ಮಕ ಸಂಬಂಧವಿರುವುದರಿಂದಲೇ ಕಾಶ್ಮೀರದಿಂದ ಕನ್ಯಾಕುಮಾರಿಯವರಿಗಿನ ದೇವಾಲಯಗಳನ್ನು ಸಂದರ್ಶಿಸುತ್ತೇವೆ. ದೈವೀ ಭಾವನೆಗಳು ದೇಶವನ್ನು ಜೋಡಿಸಿವೆಯಲ್ಲದೆ ಒಗ್ಗಟ್ಟು ಮೂಡಿಸುವ ಶಕ್ತಿ ಅದಕ್ಕಿದೆ. ಉತ್ತರ ಭಾರತೀಯರು ದಕ್ಷಿಣದ ದೇವಾಲಯಗಳನ್ನು ಸಂದರ್ಶಿಸುವುದು, ದಕ್ಷಿಣ ಭಾರತೀಯರು ಉತ್ತರಕ್ಕೆ ಹೋಗುವುದು ಸರ್ವೇ ಸಾಮಾನ್ಯವಾಗಿದೆ. ಭಾರತ ಹಾಗೂ ದೈವತ್ವ ಇದು ಒಂದಕ್ಕೊಂದು ಪೂರಕ ಹಾಗೂ ಬಿಟ್ಟಿರಲಾರದ ಅಂಶವಾಗಿದೆ. ಹೀಗಾಗಿ ಪ್ರಾಕೃತಿಕ ದಾಳಿ ಮತ್ತು ಪರಕೀಯ ದಾಳಿಗಳಿಂದ ದೇವಾಲಯಗಳು ನಾಶ ಹೊಂದಿದ್ದರೂ ಅವನ್ನು ಮತ್ತೆ ಪುನರುಜ್ಜೀವನಗೊಳಿಸಲಾಗಿದೆ ಎಂದರು.
ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ದೇವರ ಮೇಲಿನ ಭಯ ಭಕ್ತಿಗಳನ್ನು ಯಾರಿಂದಲೂ ಕುಗ್ಗಿಸಲು ಸಾಧ್ಯವಿಲ್ಲ. ಅದಕ್ಕೆ ಈ ದೇವಸ್ಥಾನದಲ್ಲಿ ಇಂದು ಸೇರಿರುವ ಜನಸ್ತೋಮವೇ ಉದಾಹರಣೆ. ದೇವರು ಇದ್ದಾನೆ ಅಥವಾ ಇಲ್ಲಾ ಎಂಬ ಎಡ-ಬಲದ ವಿಚಾರಗಳು ಅವರವರ ಅನುಭವಕ್ಕೆ ಬಿಟ್ಟದ್ದು. ಈ ಚರ್ಚೆ ಮನುಕುಲ ಇರುವ ತನಕ ಇರಲಿದೆ. ಶಾಂತಿಯಿಂದ ಬದುಕಿ ಬಾಳಲು ನಮ್ಮ ನಂಬಿಕಗಳೇ ಕಾರಣವಾಗಿವೆ ಎಂದು ಅವರು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಾಸಕ ಹರೀಶ್ ಪೂಂಜ ಅವರು, ಶಿವನ ಮೂರ್ತಿಯ ಶೋಭಾ ಯಾತ್ರೆಯ ಹಾಗೂ ಹೊರಕಾಣಿಕೆಯ ಸಮರ್ಪಣೆಯ ವೈಭವವನ್ನು ನೋಡಿದಾಗ ಕಿರಾತಮೂರ್ತಿ ದೇವಸ್ಥಾನದ ಮಹಿಮೆ ಅರಿವಾಗುತ್ತದೆ. ಅಲ್ಲದೆ ದೂರದ ಚಿತ್ರದುರ್ಗದ ಸ್ವಾಮೀಜಿಯವರ ಪಾದಸ್ಪರ್ಶ ನಮಗೆ ಇನ್ನಷ್ಟು ಸ್ಪೂರ್ತಿಯನ್ನು ತಂದಿದೆ ಎಂದರು.
ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ಎಂ. ಶ್ರೀಹರ್ಷ ಸಂಪಿಗೆತ್ತಾಯ ಧಾರ್ಮಿಕ ಸಭಾ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ಬೆಳ್ತಂಗಡಿ ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಿ. ಯದುಪತಿ ಗೌಡ ಅವರು ಮಕ್ಕಳಲ್ಲಿ ಧರ್ಮ ಜಾಗೃತಿಯ ಅರಿವನ್ನು ಮೂಡಿಸುವುದು ಹೇಗೆ ಎಂಬ ಬಗ್ಗೆ ಧಾರ್ಮಿಕ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಗುರುವಾಯನಕರೆ ಪ್ರಾ.ಕೃ.ಪ.ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಭಗೀರಥ ಜಿ. ಭಾಗವಹಿಸಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಾಜ್ಪ್ರಕಾಶ್ ಶೆಟ್ಟಿ ಪಡ್ಡೈಲು, ಕೋಶಾಧಿಕಾರಿ ಮನೋಹರ್ ಪಿ.ಸಿ., ಓಡಿಲ್ನಾಳ ಧರ್ಮೋತ್ಥಾನ ಟ್ರಸ್ಟ್ ಅಧ್ಯಕ್ಷ ಪಿ. ವೃಷಭ ಆರಿಗ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಧರಣೇಂದ್ರ ಜೈನ್ ಸ್ವಾಗತಿಸಿದರು. ಕೋಶಾಧಿಕಾರಿ ಮನೋಹರ ವಂದಿಸಿದರು. ಪ್ರಜ್ಞಾ ಬಿ. ಓಡಿಲ್ನಾಳ ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ಜ್ಞಾನ ಐತಾಳ್ ನೇತೃತ್ವದ ಹೆಜ್ಜೆನಾದ ಮಂಗಳೂರು ತಂಡದಿಂದ ನೃತ್ಯ ಸಂಗೀತ ವೈಭವ ನಡೆಯಿತು.