ನಿಡ್ಲೆ, ಡಿ.27: ಇಂದು ಮಧ್ಯಾಹ್ನ 11.30 ರ ವೇಳೆಗೆ ನಿಡ್ಲೆ ಸಮೀಪದ ಬೂಡಜಾಲುವಿನಲ್ಲಿ ಸಿಂಧನೂರು ತಾಲ್ಲೂಕಿನಿಂದ ಬಂದ ಪಿ.ಯು ಕಾಲೇಜು ವಿದ್ಯಾರ್ಥಿಗಳ ಪ್ರವಾಸದ ಬಸ್ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಮಧ್ಯೆ ರಸ್ತೆ ಅಪಘಾತ ಸಂಭವಿಸಿದ್ದು ಎರಡೂ ಬಸ್ ಚಾಲಕರು ಗಂಭೀರವಾಗಿ ಗಾಯಗೊಂಡಿದ್ದು ಸುಮಾರು 30 ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು. ಗಾಯಾಳು ವಿದ್ಯಾರ್ಥಿಗಳಿಗೆ ಉಜಿರೆಯ ಎಸ್.ಡಿ.ಎಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ರಸ್ತೆ ಅಪಘಾತದ ಸ್ಥಳದಲ್ಲಿ ಸ್ವಯಂಸೇವಕರ ಮನೆಗಳು ಇದ್ದುದರಿಂದ ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ವಯಂಸೇವಕರು ಗಾಯಗೊಂಡ ವಾಹನ ಚಾಲಕರನ್ನು ತಮ್ಮ ಸ್ವಂತ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ರಕ್ಷಣೆ ಮಾಡಿರುತ್ತಾರೆ. ಅಲ್ಲದೇ ಸುಮಾರು ನಾಲ್ಕರಿಂದ ಐದು ಆಂಬುಲೆನ್ಸ್ ಗಳನ್ನು ಕರೆಯಿಸಿ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ತುರ್ತಾಗಿ ಕಳುಹಿಸಲು ವ್ಯವಸ್ಥೆ ಮಾಡಿರುತ್ತಾರೆ.
ಸುಮಾರು 130 ವಿದ್ಯಾರ್ಥಿಗಳು ಮೂರು ಬಸ್ಸುಗಳಲ್ಲಿ ಆಗಮಿಸಿದ್ದು ಅವರಿಗೆ ಸಂಜೆಯ ವೇಳೆ ತಂಗಲು ಉಜಿರೆಯ ಶಾರದಾ ಮಂಟಪದಲ್ಲಿ ವ್ಯವಸ್ಥೆಯನ್ನು ಮಾಡಿಕೊಟ್ಟು ರಾತ್ರಿಯ ಊಟದ ವ್ಯವಸ್ಥೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಅನ್ನಛತ್ರವನ್ನು ಸಂಪರ್ಕಿಸಿ ಊಟವನ್ನು ತಂದು ನೀಡಿರುತ್ತಾರೆ. ಊಟ ಮಾಡಲು ಬಟ್ಟಲು ಹಾಗೂ ನೀರಿನ ವ್ಯವಸ್ಥೆಯನ್ನು ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಸಮಿತಿಯಿಂದ ಮಾಡಿರುತ್ತಾರೆ.
ಬೆಳಿಗ್ಗೆ 11.30 ರಿಂದ ರಾತ್ರಿ 10.30 ರ ವರೆಗೆ ಸ್ವಯಂಸೇವಕರು ಶಿಕ್ಷಕರ ಸಂಪರ್ಕದಲ್ಲಿ ಇದ್ದು ಚಿಕಿತ್ಸೆಗೆ ವ್ಯವಸ್ಥೆ ಮತ್ತು ಊಟೋಪಚಾರದ ವ್ಯವಸ್ಥೆಗೆ ಸಹಕಾರ ನೀಡಿರುತ್ತಾರೆ.
ಶೌರ್ಯ ಸಮಿತಿಯ ಮಾಸ್ಟರ್ ಪ್ರಕಾಶ್, ಸಂಯೋಜಕರಾದ ಗಿರೀಶ್, ಸಂತೋಷ್ ಗೌಡ, ರವೀಂದ್ರ , ಸಹಕಾರ ಉದ್ಯಮಿ ಭರತ್ ಕುಮಾರ್, ಕಿರಣ್ ಅತ್ತಾಜೆ, ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜೈವಂತ ಪಟಗಾರ್ ಉಪಸ್ಥಿತರಿದ್ದರು. ನಿಡ್ಲೆ-ಧರ್ಮಸ್ಥಳ, ಉಜಿರೆ ಘಟಕದ ಸ್ವಯಂಸೇವಕರು ಸೇವೆ ಸಲ್ಲಿಸಿದರು.