ಮಂಗಳೂರು: ಕೇಶವ ಸ್ಮೃತಿ ಸಂವರ್ಧನಾ ಸಮಿತಿಯ ಆಶ್ರಯದಲ್ಲಿ ನವಂಬರ್ 19,20ರಂದು ಸಂಘನಿಕೇತನದಲ್ಲಿ ಆಯೋಜಿಸಿರುವ ಕನ್ನಡ ಶಾಲಾ ಮಕ್ಕಳ ಹಬ್ಬ ಕಾರ್ಯಕ್ರಮಕ್ಕೆ ಸರಕಾರಿ ಶಾಲಾ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು ಹಾಗೂ ಪೋಷಕರನ್ನು ಕಡ್ಡಾಯವಾಗಿ ಭಾಗವಹಿಸುವಂತೆ ಶಿಕ್ಷಣ ಇಲಾಖಾ ಅಧಿಕಾರಿಗಳಿಗೆ ಒತ್ತಡ ಹೇರಿ ದಾದಗಿರಿ ಪ್ರದರ್ಶಿಸುವ ಶಾಸಕ ವೇದವ್ಯಾಸ ಕಾಮತರ ವರ್ತನೆಯನ್ನು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಖಂಡನೆಯನ್ನು ವ್ಯಕ್ತಪಡಿಸುತ್ತದೆ.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮೋಹನ್ ಆಳ್ವರ ನೇತೃತ್ವದಲ್ಲಿ ಸಂಘಪರಿವಾರ ನಡೆಸಲಿಚ್ಚಿಸಿರುವ ಮಕ್ಕಳ ಹಬ್ಬ ರಾಜಕೀಯ ಪ್ರೇರಿತವಾಗಿದೆ. ಈಗಾಗಲೇ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ವಿವಾದಿತರಾದ ರೋಹಿತ್ ಚಕ್ರತೀರ್ಥ, ಸುಳ್ಳಿನ ಭಾಷಣಗಳ ಮೂಲಕವೇ ಕುಖ್ಯಾತಿ ಪಡೆದ ಚಕ್ರವರ್ತಿ ಸೂಲಿಬೆಲೆ, ಜಿಲ್ಲೆಯಲ್ಲಿ ಕೋಮು ಪ್ರಚೋದಿತ ಭಾಷಣಗಳ ಮೂಲಕ ಶಾಂತಿ ಕದಡಿದ ಕಲ್ಲಡ್ಕ ಪ್ರಭಾಕರ ಭಟ್ ರಂತಹ ಸಂಘಪರಿವಾರದ ಮುಖಂಡರುಗಳನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಆಹ್ವಾನಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿಗಳನ್ನು, ಶಿಕ್ಷಕರು ಮತ್ತು ಪೋಷಕರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಮೇಲೆ ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಒತ್ತಡ ಹೇರಿ ಬಲವಂತಪಡಿಸುತ್ತಿರುವ ಆರೋಪಗಳು ಕೇಳಿ ಬರುತ್ತಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಈಗಾಗಲೇ ಮತಾಂದತೆಯ ಬೀಡಾಗಿರುವ ಕರಾವಳಿಯಲ್ಲಿ ಕೋಮುವಾದ ಮತ್ತಷ್ಟು ವ್ಯಾಪಿಸಿ ಮಕ್ಕಳ ಮನಸ್ಸನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಕಾರ್ಯತಂತ್ರ ಈ ಕಾರ್ಯಕ್ರಮದಲ್ಲಿ ಅಡಗಿದೆ.
ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತವು ಬಿಜೆಪಿ ಪಕ್ಷ ಹಾಗೂ ವೇದವ್ಯಾಸ ಕಾಮತರಂತಹ ಶಾಸಕರುಗಳ ತಾಳಕ್ಕೆ ಕುಣಿಯದೆ ಘನತೆಯಿಂದ ನಡೆದುಕೊಳ್ಳಬೇಕು. ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮದಲ್ಲಿ ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಒದಗಿಸಬಾರದೆಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.