ಮಂಗಳೂರು: ಮಂಗಳೂರಿನ ಕಾರ್ಯಕರ್ತರ ಸಮಾವೇಶದಲ್ಲಿ ಏಕ ವಚನದಲ್ಲಿ ರಾಹುಲ್ ಗಾಂಧಿಯನ್ನ ವಿಜಯೇಂದ್ರ ಅವರು ಟೀಕೆ ಮಾಡಿದ್ದಾರೆ. ಮೋದಿ ಹೋಗಿದ್ದಕ್ಕೆ ವಿಶ್ವಕಪ್ ಫೈನಲಿನಲ್ಲಿ ಭಾರತ ಸೋತಿತು ಎಂದ ರಾಹುಲ್ ಗಾಂಧಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿರುಗೇಟು ನೀಡಿದ್ದು, ರಾಹುಲ್ ಎಂದರೆ ರಾಹು ಗ್ರಹ ಎಂದು ಟೀಕಿಸಿದ್ದಾರೆ.
50-60 ವರ್ಷದ ಕಾಂಗ್ರೆಸ್ ಆಡಳಿತಕ್ಕೆ ಇತಿಶ್ರೀ ಹಾಡಿದ್ದು ರಾಹುಲ್ ಗಾಂಧಿ. ರಾಹುಲ್ ಗಾಂಧಿಗೂ ರಾಹುಕಾಲಕ್ಕೂ ಏನೂ ವ್ಯತ್ಯಾಸವಿಲ್ಲ. ರಾಹುಲ್ ಗಾಂಧಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಕಾಂಗ್ರೆಸ್ ಗೆ ರಾಹುಕಾಲ ಆರಂಭವಾಗಿದೆ. ಯಾವಾಗ ಅವ್ರು ಪಕ್ಷದ ಜವಾಬ್ದಾರಿ ತೆಗೆದುಕೊಂಡ್ರೋ. ಅವತ್ತಿನಿಂದ ಕಾಂಗ್ರೆಸ್ ಗೆ ರಾಹುಕಾಲ ಆರಂಭವಾಗಿದೆ. ಈ ವೇದಿಕೆ ಮೂಲಕ ಕಾಂಗ್ರೆಸ್ ಪಕ್ಷದ ನಾಯಕರಿಗೆ ಒಂದು ಮಾತು ಹೇಳ್ತೇನೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನ ಮಂತ್ರಿಯಾಗೋದನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ಅಧಿಕಾರದ ಅಮಲಿನಲ್ಲಿರುವ ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಒಂದು ಮಾತು ಹೇಳುತ್ತೇನೆ. 28 ಕ್ಕೆ 28 ಸಂಸದರನ್ನ ಕಳುಹಿಸುವ ಮೂಲಕ ನರೇಂದ್ರ ಮೋದಿಯವರನ್ನ ಬಲಪಡಿಸುತ್ತೇವೆ . ಹಿಂದೆ 25 ಸಂಸದರ ಮೂಲಕ ಗೆದ್ದಿದ್ದೆವು. ಮುಂದೆ ಬಿಜೆಪಿಯಿಂದ 28 ಸಂಸದರನ್ನ ಕಳುಹಿಸುತ್ತೇವೆ. ಸಿದ್ದರಾಮಯ್ಯ ತಮ್ಮ ಜನಪ್ರಿಯತೆ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲವಿದೆ. ರೈತರ ಸಂಕಷ್ಟಕ್ಕೆ ಸ್ಪಂದನೆ ಮಾಡುವ ಕೆಲಸ ಇವರಿಂದ ಆಗಲಿಲ್ಲ ಎಂದು ಮಂಗಳೂರಿನಲ್ಲಿ ಬಿ ವೈ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.