ಸುಬ್ರಹ್ಮಣ್ಯ: ಸುಳ್ಯ, ಸುಬ್ರಹ್ಮಣ್ಯ ಆಸುಪಾಸು ಭಾರಿ ಮಳೆಯಾಗುತ್ತಿದ್ದು, ಹೊಳೆಗಳಲ್ಲಿ ನೀರಿನ ಹರಿವು ಹೆಚ್ಚಿದೆ. ಸುಬ್ರಹ್ಮಣ್ಯ ರಸ್ತೆಯ ಬೊಳ್ಮಲೆ, ಬಸ್ತಿಕಾಡು ಕಿಂಡಿ ಅಣೆಕಟ್ಟು ಮುಳುಗಡೆಯಾಗಿದ್ದು, ಸೇತುವೆ ಮುಳುಗಿದ ಕಾರಣ 15ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಡಿತಗೊಂಡಿದೆ.
ವಾಹನಸಂಚಾರ ಸ್ಥಗಿತಗೊಂಡಿದ್ದು, ಇದೇ ಪ್ರದೇಶದಲ್ಲಿದ್ದ ಕಾಲುದಾರಿಯೂ ಮುಳುಗಡೆಯಾಗಿ ಜನರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಹೊಳೆಯಲ್ಲಿ ಬೃಹತ್ ದಿಮ್ಮಿಗಳು ತೇಲಿಬಂದು ಅಣೆಕಟ್ಟಿಗೆ ತಾಗಿ ನಿಂತಿದ್ದು, ಕಿಂಡಿ ಅಣೆಕಟ್ಟಿಗೆ ಹಾನಿಯಾಗಿದೆ. ಅಲ್ಲದೆ ಅಕ್ಕಪಕ್ಕದ ಕೃಷಿ ಭೂಮಿಗಳಿಗೂ ನೀರು ನುಗ್ಗಿ ಹಾನಿಯಾಗಿದೆ.
ವಿದ್ಯಾರ್ಥಿಗಳ ಪರದಾಟ: ಕುಕ್ಕೆ ಸುಬ್ರಹ್ಮಣ್ಯ ದ ವಿವಿಧ ರಸ್ತೆಗಳಲ್ಲಿ ಮೊಣಕಾಲುವರೆಗೆ ನೀರು ಸಂಗ್ರಹವಾಗಿದೆ. ಇಂದು ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆಯೂ ಇರುವ ಕಾರಣ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಯಿತು. ವಿದ್ಯಾರ್ಥಿಗಳು ನೀರಿನಲ್ಲಿ ಒದ್ದೆಯಾಗಿ ತೆರಳಿ ಪರೀಕ್ಷೆ ಬರೆಯುವ ಅನಿವಾರ್ಯಯತೆ ಎದುರಾಗಿತ್ತು.