ಬಂಟ್ವಾಳ: ಸುರಕ್ಷಾ ಸಂಗಮ ಪೂರ್ಲಿಪ್ಪಾಡಿ ಕಲ್ಲಡ್ಕ ಇದರ ಪ್ರಾಯೋಜಕತ್ವದಲ್ಲಿ ಬ್ಯಾಂಕ್ ಆಫ್ ಬರೋಡಾ, ಕಲ್ಲಡ್ಕ ಶಾಖೆ ಮತ್ತು ಝಾನ್ಸಿರಾಣಿ ಲಕ್ಷ್ಮೀಬಾಯಿ ಮಹಿಳಾ ಮಂಡಳಿ (ರಿ.) ಕಲ್ಲಡ್ಕ ಹಾಗೂ ಕಸ್ತೂರ್ಬಾ ಮೆಡಿಕಲ್ ಕಾಲೇಜು , ಮಂಗಳೂರು ಇದರ ಸಹಯೋಗದೊಂದಿಗೆ ಕಲ್ಲಡ್ಕದ ಪಂಚವಟಿ ವಾಣಿಜ್ಯ ಸಂಕೀರ್ಣದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ರಕ್ತದಾನ ಶಿಬಿರ ನಡೆಯಿತು.
ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ನನ್ನ ಜೀವವನ್ನುಳಿಸಲು ರಕ್ತದಾನ ಮಾಡಿದ ರಕ್ತದಾನಿ ನೀವಾಗಿರಬಹುದೇ?” ಎನ್ನುವ ಧ್ಯೇಯವಾಕ್ಯದೊಂದಿಗೆ, ಪ್ರತಿವರ್ಷದಂತೆ ನಾಡಿನಾದ್ಯಂತ ಹಲವಾರು ಇನ್ನಿತರ ವಿಶೇಷ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಸದರಿ ಈ ವರ್ಷವೂ ರಕ್ತದಾನ ಶಿಬಿರ ಎನ್ನುವ ಮಹತ್ತರ ಕಾರ್ಯಕ್ರಮವನ್ನು ಮಾಡುವುದು ಅಭಿನಂದಕರವಾಗಿದೆ. ರಕ್ತದಾನ ಮೂಲಕ ಖರ್ಚು ಇಲ್ಲದೆ ಪುಣ್ಯ ಸಂಪಾದಿಸಲು ಸಾಧ್ಯ ಎಂದವರು ಅಭಿಪ್ರಾಯಪಟ್ಟರು.
ಕೆಎಂಸಿ ಆಸ್ಪತ್ರೆಯ ವೈದ್ಯರಾದ ಡಾ.ಅಖಿಲ್ ಅವರು, ರಕ್ತದಾನ ಯಾರೆಲ್ಲ ಮಾಡಬಹುದು ಎನ್ನುವ ಬಗ್ಗೆ ಮಾಹಿತಿ ನೀಡಿದರು, ಕಾರ್ಯಕ್ರಮದ ಸಂಘಟಕರಿಗೆ ತನ್ನ ಸಂಸ್ಥೆಯ ವತಿಯಿಂದ ಅಭಿನಂದನಾ ಪತ್ರ ನೀಡಿದರು. ಕಾರ್ಯಕ್ರಮ ದಲ್ಲಿ ಸುರಕ್ಷಾ ಸಂಗಮ (ರಿ.) ಪೂರ್ಲಿಪ್ಪಾಡಿ, ಕಲ್ಲಡ್ಕ ಇದರ ಲಾಂಛನವನ್ನು ಅನಾವರಣ ಗೊಳಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಕು.ಹಿರಣ್ಮಯಿ, ಝಾನ್ಸಿರಾಣಿ ಲಕ್ಷೀಬಾಯಿ ಮಹಿಳಾ ಮಂಡಳಿ ಅಧ್ಯಕ್ಷೆ ಮೀನಾಕ್ಷಿ ಆರ್. ಪೂಜಾರಿ, ಸುರಕ್ಷಾ ಸಂಗಮ (ರಿ.) ಪೂರ್ಲಿಪ್ಪಾಡಿ ಕಲ್ಲಡ್ಕ ಇದರ ಗೌರವಾಧ್ಯಕ್ಷ ವೆಂಕಟ್ರಾಯ ಪ್ರಭು, ಉಪಸ್ಥಿತರಿದ್ದರು.
ಶ್ರೀಮತಿ ಜಯಂತಿ ಪ್ರಾರ್ಥಿಸಿ, ಸುರಕ್ಷಾ ಸಂಗಮ (ರಿ.) ಪೂರ್ಲಿಪ್ಪಾಡಿ ಇದರ ಅಧ್ಯಕ್ಷರಾದ ನಿತಿನ್ ಕುಮಾರ್ ಸ್ವಾಗತಿಸಿ, ಸಂಘದ ಸಲಹಾ ಸಮಿತಿಯ ಸದಸ್ಯರಾದ ಯತಿನ್ ಕುಮಾರ್ ಪ್ರಸ್ತಾವನೆಗೈದರು. ಬ್ಯಾಂಕ್ ಆಫ್ ಬರೋಡದ ಮ್ಯಾನೇಜರ್ ಸದಾಶಿವ ಆಚಾರ್ಯ ವಂದಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.