ಉಳ್ಳಾಲ: ಬಿಜೆಪಿ ಗೆಲುವು ಸಾಧಿಸಿದಲ್ಲಿ ಶಾಸಕರಿಂದ ಆಗಿರುವ ತೊಂದರೆ, ತಾರತಮ್ಯವನ್ನು ದೂರವಾಗಿಸುವ ಪ್ರಾಮಾಣಿಕ ಪ್ರಯತ್ನ. ಪ್ರತಿಯೊಬ್ಬರನ್ನು ಮುಟ್ಟುವ ಕೆಲಸವನ್ನು ಪ್ರಯತ್ನಿಸುತ್ತೇನೆ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ಹೇಳಿದ್ದಾರೆ.
ಪಂಡಿತ್ ಹೌಸ್ ನಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಸಿಗುವುದು ಕನಸಾಗಿತ್ತು. ಅನಿವಾರ್ಯವಾಗಿ ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸಲು ಅವಕಾಶವಾಯಿತು. ಇದೀಗ ಬಿಜೆಪಿ ಅಭ್ಯರ್ಥಿ ಯಾಗಿ ಆಯ್ಕೆಗೊಂಡಿದ್ದು, ರಾಜಕೀಯವಾಗಿ ವೈಯಕ್ತಿವಾಗಿ ಇರುವ ವ್ಯತ್ಯಾಸಗಳಿಗೆ ಪ್ರಮಾದವನ್ನು ಕೇಳುತ್ತಿದ್ದೇನೆ ಎಂದರು.
ಕಚೇರಿ ಉದ್ಘಾಟಿಸಿದ ಕೈರಂಗಳ ಪುಣ್ಯಕೋಟಿ ಶಾಲೆ ಸಂಚಾಲಕ ಟಿ.ಜಿ ರಾಜರಾಂ ಭಟ್ ಮಾತನಾಡಿ, ದೈವಸ್ಥಾನಕ್ಕೆ ವರ್ಷಾವಧಿ ಕೋಲದಂತೆ, ಪ್ರಜಾಪ್ರಭುತ್ವದಲ್ಲಿ ಮತದಾನ ಒಂದು ಉತ್ಸವ, ವಿರೋಧಗಳಿಲ್ಲದ ವ್ಯಕ್ತಿ ಈ ಬಾರಿಯ ಅಭ್ಯರ್ಥಿ, ಗ್ರಾಮದ ಮೂಲೆಗಳನ್ನು ತಲುಪಿದಾಗ ಜನರನ್ನು ತಲುಪಲು ಸಾಧ್ಯ. ಹಣಬಲ, ಬಾಹುಬಲದ ವಿರುದ್ಧ ಕಾದಾಡಲು ಕಾರ್ಯಕರ್ತರು ಸನ್ನದ್ಧರಾಗಬೇಕಿದೆ ಎಂದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಮಾತನಾಡಿ, ಆರ್ ಗೊಬ್ಯೆರಾ ಅನ್ನುವ ಮಾತನ್ನು ತಕ್ಷಣದಿಂದ ನಿಲ್ಲಿಸಿರಿ. ವಿರೋಧ ಮಾತುಗಳನ್ನು ಎಲ್ಲರೂ ನಿಲ್ಲಿಸಿ, ಅಭ್ಯರ್ಥಿ ಪರ ಉತ್ತಮ ಮಾತುಗಳನ್ನಾಡಿ ಜನರ ಮನವನ್ನು ಗೆಲ್ಲುವ ಪ್ರಯತ್ನಗಳನ್ನು ಮಾಡಿ. ಅಲ್ಪಸಂಖ್ಯಾತರ ಮನೆಗಳಿಗೂ ಹೋಗಬೇಕಿದೆ, ಮೋದಿಯವರ ಯೋಜನೆ ಪಡೆದ ಅನೇಕ ಫಲಾನುಭವಿಗಳಿದ್ದಾರೆ. ಅವರ ಮನವನ್ನು ಗೆಲ್ಲುವ ಪ್ರಯತ್ನ ಕಾರ್ಯಕರ್ತರು ಮಾಡಬೇಕಿದೆ. ಆರ್ಥಿಕ, ಆರೋಗ್ಯ, ಕುಟುಂಬದ ಸಮಸ್ಯೆಗಳನ್ನು ಎಲ್ಲಾ ಬದಿಗಿಟ್ಟು ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕಿದೆ ಎಂದರು.
ಕ್ಷೇತ್ರ ಪ್ರಭಾರಿ ಕಸ್ತೂರಿ ಪಂಜ ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದೆ ಅನ್ನುವ ಸಂದೇಶವನ್ನು ಇಡೀ ಜಿಲ್ಲೆಗೆ ಮಂಗಳೂರು ಮಂಡಲದ ಬಿಜೆಪಿ ನೀಡಿದೆ. ಎಲ್ಲಾ ಕೆಲಸ ಕಾರ್ಯಗಳನ್ನು ಒಕ್ಕೊರಲಿನಿಂದ ಮಾಡುತ್ತಿರುವ ಉತ್ತಮ ಸಂದೇಶ ರಾಜ್ಯಕ್ಕೆ ದೊರೆತಿದೆ. ರಾಜ್ಯಾಧ್ಯಕ್ಷರಿಗೆ ಹಿರಿಮೆಯ ಗರಿಮೆಯನ್ನು ನೀಡಬೇಕಾದರೆ ಮಂಗಳೂರು ಮಂಡಲವನ್ನು ಗೆಲ್ಲಿಸಿ ಕೊಡಬೇಕಿದೆ. ಕರಾವಳಿ ಭಾಗದಲ್ಲಿ ಮಹಿಳೆಯರಿಗೆ ಸೀಟು ಕೊಡುವುದಿಲ್ಲವೆಂಬ ಕಪ್ಪು ಚುಕ್ಕೆಯಿತ್ತು. ಪುತ್ತೂರು, ಸುಳ್ಯ ಭಾಗದಲ್ಲಿ ಅರ್ಹ ಅಭ್ಯರ್ಥಿ ಗಳಿಗೆ ನೀಡುವ ಮೂಲಕ ಪಕ್ಷ ಅದನ್ನು ದೂರವಾಗಿಸಿದೆ ಎಂದರು.
ಈ ಸಂದರ್ಭ ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ , ಸೀತಾರಾಮ ಬಂಗೇರ, ಲಕ್ಷ್ಮಣ್ ಅಬ್ಬಕ್ಕನಗರ, ಚಂದ್ರಹಾಸ್ ಉಳ್ಳಾಲ್, ಚಂದ್ರಶೇಖರ್ ಉಚ್ಚಿಲ್, ಚಂದ್ರಹಾಸ್ ಅಡ್ಯಂತಾಯ ಉಪಸ್ಥಿತರಿದ್ದರು. ಆನಂದ್ ಶೆಟ್ಟಿ ಭಟ್ನಗರ ನಿರೂಪಿಸಿದರು. ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿದರು.