ಸುಳ್ಯ: ಬಿಜೆಪಿ ಸುಳ್ಯ ಮಂಡಲ ಸಮಿತಿ ನೂತನ ಅಧ್ಯಕ್ಷರ ಘೋಷಣೆ ಬೆನ್ನಿಗೆ ನಾಯಕರು ಹಾಗೂ ಕಾರ್ಯಕರ್ತರ ನಡುವೆ ಅಸಮಾಧಾನ ಸ್ಫೋಟಗೊಂಡಿದ್ದು, ಕಚೇರಿಗೆ ಬೀಗ ಜಡಿದ ಘಟನೆ ನಡೆದಿದೆ.
ಸುಳ್ಯ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಮಂಡಲಗಳಿಗೆ ನೂತನ ಅಧ್ಯಕ್ಷರನ್ನು ಜಿಲ್ಲಾಧ್ಯಕ್ಷರು ಶನಿವಾರ ಘೋಷಿಸಿದ್ದರು. ಸುಳ್ಯ ಮಂಡಲದ ಅಧ್ಯಕ್ಷರಾಗಿ ಜಿಲ್ಲೆಯ ಮಾಜಿ ಉಪಾಧ್ಯಕ್ಷರೂ ಆಗಿರುವ ವೆಂಕಟ್ ವಳಲಂಬೆ ಎರಡನೇ ಬಾರಿಗೆ ಅವಕಾಶ ಪಡೆದಿದ್ದರು. ಆದರೆ, ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದ ಕೋರ್ ಕಮಿಟಿ, ಜಿಲ್ಲಾ ಸಮಿತಿಗೆ ಮಾಜಿ ಎಪಿಎಂಸಿ ಅಧ್ಯಕ್ಷ ವಿನಯಕುಮಾರ್ ಅವರ ಹೆಸರನ್ನು ಕಳುಹಿಸಿತ್ತು.
ವಿನಯಕುಮಾರ್ ಬದಲಿಗೆ ವೆಂಕಟ್ ಅವರ ಹೆಸರು ಘೋಷಣೆಯಾಗಿದ್ದಕ್ಕೆ ಸುಳ್ಯದ ಬಿಜೆಪಿ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದು, ಕಾರ್ಯಕತರು ಸಿಟ್ಟಿಗೆದ್ದರು. ಇದೇ ಕಾರಣದಿಂದಾಗಿ ಪಕ್ಷದ ಕಚೇರಿಗೆ ಬೀಗ ಜಡಿದ ಪ್ರಸಂಗ ನಡೆದಿದೆ.