News Karnataka Kannada
Friday, May 17 2024
ಮಂಗಳೂರು

ರಾಜ್ಯದ ಬಿಜೆಪಿ ಸರ್ಕಾರ ಜನರ ವಿಶ್ವಾಸವನ್ನು ಕಳೆದುಕೊಂಡಿದೆ- ಸಿದ್ದರಾಮಯ್ಯ

Bengaluru: Addressing a joint press conference at the KPCC office here, Siddaramaiah
Photo Credit : News Kannada

ಹಾಸನ: ನಾನು ಈ ಹಿಂದೆ ಅನೇಕ ಕಾರ್ಯಕ್ರಮಗಳಿಗೆ ಹಾಸನ ಜಿಲ್ಲೆಗೆ ಆಗಮಿಸಿದ್ದೆ, ಆದರೆ ಇಂದು ಜನರಲ್ಲಿರುವ ಉತ್ಸಾಹ ಈ ಹಿಂದೆ ಕಂಡಿರಲಿಲ್ಲ. ಇದನ್ನು ನೋಡಿದರೆ ಪೂರ್ವದಲ್ಲಿ ಸೂರ್ಯ ಉದಯಿಸುವುದು ಎಷ್ಟು ಸತ್ಯವೋ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ಗೊತ್ತಾಗುತ್ತದೆ.

ರಾಜ್ಯದ ಬಿಜೆಪಿ ಸರ್ಕಾರ ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ಈ ಸರ್ಕಾರ ನಾಡಿನ ಬಡವರು, ದಲಿತರು, ಮಹಿಳೆಯರು, ಮಕ್ಕಳ, ಅಲ್ಪಸಂಖ್ಯಾತರ ವಿರೋಧಿ ಸರ್ಕಾರ. ಹಾಸನ ಅತಿ ಹೆಚ್ಚು ರೈತರನ್ನು ಹೊಂದಿರುವ ಜಿಲ್ಲೆ. 2022ರ ಒಳಗಡೆ ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂದು 2016ರಲ್ಲಿ ನರೇಂದ್ರ ಮೋದಿ ಅವರು ರೈತರಲ್ಲಿ ಭ್ರಮೆಯನ್ನು ಹುಟ್ಟಿಸಿದ್ದರು. ಇದನ್ನು ಹೇಳುತ್ತ ಹೇಳುತ್ತಲೇ 3 ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದರು. ದೆಹಲಿಯ ಹೊರವಲಯದಲ್ಲಿ ದೇಶದ ರೈತರು ಅನೇಕ ದಿನಗಳ ಕಾಲ ಹೋರಾಟ ಮಾಡಿದರು, ಮೊದಮೊದಲು ಮೋದಿ ಅವರು ಕ್ಯಾರೇ ಎನ್ನಲಿಲ್ಲ, ಕೊನೆಗೆ ಹೋರಾಟದ ಕಾವು ಜಾಸ್ತಿಯಾದ ಮೇಲೆ ಬೇರೆ ದಾರಿಯಿಲ್ಲದೆ 3 ಮಾರಕ ಕಾಯ್ದೆಗಳನ್ನು ವಾಪಾಸು ಪಡೆದರು. ರಾಜ್ಯದಲ್ಲಿ ಕೂಡ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದರು, ದೇವರಾಜ ಅರಸು ಅವರ ಕಾಲದಲ್ಲಿ ಉಳುವವನೆ ಭೂಮಿಯ ಒಡೆಯ ಎಂದು ಮಾಡಿದ್ದರು, ಈ ಸರ್ಕಾರ ಭೂಸುಧಾರಣಾ ಕಾಯ್ದೆಯ ಸೆಕ್ಷನ್‌ 79(ಎ), (ಬಿ), (ಸಿ) ಗಳನ್ನು ತೆಗೆದುಹಾಕಿ ಉಳ್ಳವನನ್ನು ಭೂಒಡೆಯನನ್ನಾಗಿ ಮಾಡಿದ್ದಾರೆ. ಇದರಿಂದ ಸಣ್ಣ ಮತ್ತು ಮಧ್ಯಮ ಹಿಡುವಳಿ ಹೊಂದಿರುವ ರೈತರು ನಾಶವಾಗುತ್ತಿದ್ದಾರೆ.

2018ರ ಪ್ರಣಾಳಿಕೆಯಲ್ಲಿ ಬಿಜೆಪಿ ತಾವು ಅಧಿಕಾರಕ್ಕೆ ಬಂದರೆ ಸಹಕಾರಿ ಸಂಘಗಳು ಮತ್ತು ಬ್ಯಾಂಕುಗಳಲ್ಲಿರುವ ರೈತರ 1 ಲಕ್ಷದ ವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಯಡಿಯೂರಪ್ಪ ಅಥವಾ ಬಸವರಾಜ ಬೊಮ್ಮಾಯಿ ಒಂದು ರೂಪಾಯಿ ಆದ್ರೂ ಸಾಲ ಮನ್ನಾ ಮಾಡಿದ್ದಾರ? ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ 78,000 ಕೋಟಿ ರೂ. ಮೊತ್ತದ ರೈತರ ಸಾಲವನ್ನು ಮನ್ನಾ ಮಾಡಿದ್ದರು. ಮೋದಿ ಅವರು ಪ್ರಧಾನಿಯಾಗಿ 9 ವರ್ಷವಾಗುತ್ತಾ ಬಂತು ಒಂದು ರೂಪಾಯಿಯಾದ್ರೂ ರೈತರ ಸಾಲ ಮನ್ನಾ ಮಾಡಿದ್ರಾ?

ರೈತರ ಸಾಲಮನ್ನಾ ಮಾಡುತ್ತೇವೆ ಎಂಬ ಭರವಸೆಯನ್ನು ನೀಡದ ಹೊರತಾಗಿ ಕೂಡ ಬರಗಾಲ ಬಂದು ರೈತರು ಸಂಕಷ್ಟದಲ್ಲಿದ್ದಾರೆ ಎಂಬ ಕಾರಣಕ್ಕೆ ನಾನು ಮುಖ್ಯಮಂತ್ರಿಯಾಗಿರುವಾಗ ಸಹಕಾರಿ ಬ್ಯಾಂಕುಗಳಲ್ಲಿನ 22 ಲಕ್ಷದ 27 ಸಾವಿರ ರೈತರ 50,000 ರೂ. ವರೆಗಿನ ಒಟ್ಟು 8,165 ಕೋಟಿ ರೂ. ಸಾಲವನ್ನು ಮನ್ನಾ ಮಾಡಿದ್ದೆ.

ಹಟ್ಟಿಗಳಲ್ಲಿ, ತಾಂಡಗಳಲ್ಲಿ, ಮಜರೆಗಳಲ್ಲಿ ವಾಸಮಾಡುವ ದಾಖಲೆ ರಹಿತ ಜನನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡುವ ಕಾನೂನನ್ನು ಜಾರಿ ಮಾಡಿದವರು ನಾವು. ದೇವರಾಜ ಅರಸು ಅವರ ರೀತಿಯಲ್ಲೆ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ವಾಸಿಸುವವನೆ ಮನೆಯೊಡೆಯನನ್ನಾಗಿ ಮಾಡಿದ್ದು ನಾವು. ಅವರಿಗೆ ಈಗ ಹಕ್ಕುಪತ್ರ ಕೊಡಲು ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದಿದ್ದರು.

ಜೆಡಿಎಸ್‌ ಪಕ್ಷ ಇರುವುದೇ ಐದಾರು ಜಿಲ್ಲೆಗಳಲ್ಲಿ. ಕುಮಾರಸ್ವಾಮಿ ಅವರು ತಮಟೆ ಹೊಡೆದುಕೊಂಡು ಪಂಚರತ್ನ ಯಾತ್ರೆ ಎಂದು ಓಡಾಡುತ್ತಿದ್ದಾರೆ. ಕುಮಾರಸ್ವಾಮಿಯವರು ಅಧಿಕಾರದಲ್ಲಿದ್ದಾಗ ಯಾಕೆ ಪಂಚರತ್ನ ಯೋಜನೆ ಮಾಡಿಲ್ಲ? ಈಗ ಕುಮಾರಸ್ವಾಮಿ ಅವರಿಗೆ ಮತ್ತೆ ಅಧಿಕಾರ ಕೊಡಬೇಕಂತೆ, ಇಲ್ಲದಿದ್ದರೆ ಜೆಡಿಎಸ್‌ ಪಕ್ಷವನ್ನು ವಿಸರ್ಜನೆ ಮಾಡುತ್ತಾರಂತೆ. ಜೆಡಿಎಸ್‌ ನವರು ಗೆದ್ದ ಎತ್ತಿನ ಬಾಲ ಹಿಡಿಯುವವರು, ಅವರು ಯಾವತ್ತೂ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲ್ಲ. ನಿಮ್ಮ ಮತಗಳನ್ನು ದಯವಿಟ್ಟು ವ್ಯರ್ಥ ಮಾಡಿಕೊಳ್ಳಬೇಡಿ. ಜೆಡಿಎಸ್‌ ಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ. ದಯಮಾಡಿ ಜೆಡಿಎಸ್‌ ಪಕ್ಷಕ್ಕೆ ಮತ ನೀಡಬೇಡಿ. ಬಿಜೆಪಿ ಮತ್ತು ಜೆಡಿಎಸ್‌ ನವರಿಂದ ರಾಜ್ಯ ಉದ್ಧಾರವಾಗಲ್ಲ.

ಬಸವಜಯಂತಿ ದಿನ ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿ, ನೇರವಾಗಿ ವಿಧಾನಸೌಧದ ಕ್ಯಾಬಿನೆಟ್‌ ಹಾಲ್‌ ಗೆ ಹೋಗಿ ನಮ್ಮ 5 ಭರವಸೆಗಳನ್ನು ಈಡೇರಿಸುವ ಕೆಲಸ ಮಾಡಿದ್ದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಬಡವರ ಸಾಲಮನ್ನಾ ಮತ್ತು ಕೃಷಿಭಾಗ್ಯ ಯೋಜನೆಗಳನ್ನು ಜಾರಿಗೆ ತಂದಿದ್ದೆ. ಈ ಯೋಜನೆಗಳನ್ನು ಯಡಿಯೂರಪ್ಪ ಆಗಲೀ ದೇವೇಗೌಡರು ಆಗಲೀ ಮಾಡಿದ್ದಾರ? ನಾವು 2 ಲಕ್ಷ ಕೃಷಿ ಹೊಂಡಗಳನ್ನು ತೋಡಿಸಿದ್ದೆವು, ಬೊಮ್ಮಾಯಿ ಸರ್ಕಾರ ಇದನ್ನು ನಿಲ್ಲಿಸಿದೆ, ವಿದ್ಯಾಸಿರಿ, ಕೃಷಿಭಾಗ್ಯ, ಮೈತ್ರಿ, ಮನಸ್ವಿನಿ, ಶಾದಿಭಾಗ್ಯ, ಇಂದಿರಾಕ್ಯಾಂಟೀನ್‌ ಈ ಎಲ್ಲಾ ಯೋಜನೆಗಳನ್ನು ಬಂದ್‌ ಮಾಡಿದ್ದಾರೆ. ಇಂಥಾ ಸರ್ಕಾರ ಬೇಕಾ?

ಹಾಸನದಲ್ಲಿ 7 ರಲ್ಲಿ ಕನಿಷ್ಠ 5 ಸ್ಥಾನಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸುವ ಪಣತೊಡಬೇಕು. ಜಿಲ್ಲೆಯ ಎಲ್ಲಾ ಮುಖಂಡರು ಒಂದಾಗಿ ಕೆಲಸ ಮಾಡಿ, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡಬೇಕು. ಮಧು ಮಾದೇಗೌಡ ಅವರು ಈ ಬಾರಿ ಮೇಲ್ಮನೆ ಸದಸ್ಯರಾಗಿದ್ದಾರೆ, ಇಲ್ಲಿ ಕಾಂಗ್ರೆಸ್‌ ಗೆ ಶಕ್ತಿ ಇದೆ. ಜನ ಧೈರ್ಯವಾಗಿ ಕಾಂಗ್ರೆಸ್‌ ಪರ ಹೋರಾಟ ಮಾಡಿದರೆ ಖಂಡಿತಾ ನಾವು ಗೆಲ್ಲುತ್ತೇವೆ.

ನಾವು ಅಧಿಕಾರಕ್ಕೆ ಬಂದರೆ ಉಚಿತವಾಗಿ 10 ಕೆ.ಜಿ ಅಕ್ಕಿ, 200 ಯುನಿಟ್‌ ವಿದ್ಯುತ್‌ ಹಾಗೂ ಪ್ರತೀ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ. ನಂತೆ ನೀಡುತ್ತೇವೆ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ, ಇದಕ್ಕೆ ತಪ್ಪಿದಲ್ಲಿ ರಾಜಕೀಯ ನಿವೃತ್ತಿ ತೆಗೆದುಕೊಂಡು ಮನೆಗೆ ಹೋಗುತ್ತೇವೆ. ಇಲ್ಲಿನ ಜನ ಮನಸು ಮಾಡಿದರೆ ಹೊಳೆ ನರಸೀಪುರ, ಅರಕಲಗೂಡು, ಹಾಸನ ಕ್ಷೇತ್ರಗಳನ್ನು ಸಹ ಕಾಂಗ್ರೆಸ್‌ ಪಕ್ಷ ಗೆಲ್ಲಬಹುದು. ತಮ್ಮೆಲ್ಲರ ಆಶೀರ್ವಾದ ಕಾಂಗ್ರೆಸ್‌ ಅಭ್ಯರ್ಥಿಯ ಮೇಲಿರಲಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು