ಬೀದರ : ಸರ್ಕಾರದ ಸೌಲಭ್ಯಗಳನ್ನು ತಮಗೆ ತಲುಪಿಸಲು ಹಾಗೂ ತಮ್ಮ ಗ್ರಾಮದ ಸಮಸ್ಯೆಗಳನ್ನು ಆಲಿಸಲು ಇಡೀ ಜಿಲ್ಲಾಡಳಿತ ಮತ್ತು ಅಧಿಕಾರಿಗಳು ತಮ್ಮ ಗ್ರಾಮಕ್ಕೆ ಬಂದಿದ್ದಾರೆ ಎಂದು ಬಸವಕಲ್ಯಾಣ ಶಾಸಕ ಶರಣು ಸಲಗರ ಹೇಳಿದರು.
ಅವರು ಶನಿವಾರ ಬಸವಕಲ್ಯಾಣ ತಾಲ್ಲೂಕಿನ ಸೈದಾಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಹಿಂದೆ ಗ್ರಾಮಸ್ಥರು ಪೋಲಿಸ್ ಠಾಣೆಗೆ ಹೊಗಬೇಕಾದರೆ ಎತ್ತಿನ ಬಂಡಿ ಮತ್ತು ಟ್ರ್ಯಾಕ್ಟರ್ ನಲ್ಲಿ ಹೋಗಬೇಕಿತ್ತು ಆದರೆ ಇಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಇಡೀ ಅಧಿಕಾರಿಗಳ ತಂಡ ತಮ್ಮ ಗ್ರಾಮಕ್ಕೆ ಸಮಸ್ಯೆ ಆಲಿಸಲು ಎಲ್ಲರು ಬಂದಿದ್ದರಿAದ ಸಮಾಧಾನದಿಂದ ತಮ್ಮ ಸಮಸ್ಯೆಗಳನ್ನು ತಿಳಿಸಿ ಅವುಗಳಿಗೆ ಪರಿಹಾರ ಪಡೆಯಬೇಕೆಂದು ಹೇಳಿದರು.
ನಮ್ಮ ಸರ್ಕಾರ ಬಡವರು ರೈತರು, ಅಂಗವಿಕಲರು ಸೇರಿದಂತೆ ಇತರೆ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಜನರ ಸಮಸ್ಯೆಗಳನ್ನು ಅರಿಯಲು ಇಂದು ಅಧಿಕಾರಿಗಳು ತಮ್ಮ ಗ್ರಾಮಕ್ಕೆ ಬಂದಿದ್ದಾರೆ ನಮಗೆಲ್ಲರಿಗೂ ತುಂಬಾ ಸಂತೋಷ ಇಂದು ಆಗುತ್ತಿದೆ ಇದರ ಲಾಭ ಎಲ್ಲರೂ ಪಡೆದುಕೊಳ್ಳಬೇಕು. ಹಾರೂಕೂಡ, ಹತ್ಯಾಳ ರಸ್ತೆಗಳು ಯಾವ ರೀತಿಯಾಗಿ ಆಗಿವೆ ಅರ್ಧ ತಾಸಿನಲ್ಲಿ ತಾವು ಬಸವಕಲ್ಯಾಣ ತಲುಪುತ್ತಿರಾ ಎಂದು ಹೇಳಿದರು.
ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಮಾತನಾಡಿ ಪ್ರತಿ ತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಒಂದು ಗ್ರಾಮ ಆಯ್ಕೆ ಮಾಡಿ ಗ್ರಾಮ ಮತ್ತು ಅದರ ಸುತ್ತಮುತ್ತಲಿನ ಗ್ರಾಮದ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿ ಪರಿಹಾರ ನೀಡಲಾಗುತ್ತದೆ ಎಂದರು.
ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇಲ್ಲಿಗೆ ಬಂದಿದ್ದಾರೆ ಈ ಹಳ್ಳಿಯ ನೆನಪು ಸದಾ ನಮ್ಮ ವೃತ್ತಿ ಜೀವನದಲ್ಲಿ ನೆನಪಿನಲ್ಲಿ ಇರುತ್ತದೆ ತಮ್ಮೊಂದಿಗೆ ನಮ್ಮ ಈ ಸಮಯ ಕಳೆಯುತ್ತಿರುವುದು ಮತ್ತು ತಮ್ಮ ಸೇವೆ ಮಾಡಲು ನಮಗೆ ಸಮಯ ಸಿಕ್ಕಿರುವುದು ನಮ್ಮ ಸೌಭಾಗ್ಯ ಆಗಿದೆ ಎಂದರು.
ಇಲ್ಲಿ ಬಗೆಹರಿಯದ ಸಮಸ್ಯೆಗಳನ್ನು ತೆಗೆದುಕೊಂಡು ನಮ್ಮ ಕಛೇರಿ ಬಂದರು ಅವುಗಳಿಗೆ ತಕ್ಷಣ ಸ್ಫಂದಿಸಲಾಗುತ್ತದೆ ಮತ್ತು ತಮ್ಮ ಗ್ರಾಮದ ಸಮಸ್ಯೆಗಳಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸೌಲಭ್ಯಗಳ ಹಕ್ಕು ಪತ್ರಗಳ ವಿತರಣೆ, ಸಾರ್ವಜನಿಕರಿಂದ ಅಹವಾಲು ಸ್ವೀಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗರ್ಭಿಣಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು, ಬಸವಕಲ್ಯಾಣ ಸಹಾಯಕ ಆಯುಕ್ತರಾದ ರಮೇಶ ಕೋಲಾರ, ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಉಪನಿರ್ದೆಶಕರಾದ ಸುರೇಖಾ, ಹಾರಕೂಡ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುಮಿತ್ರಾ ಜಗನ್ನಾಥ ಅಡೆ, ಬಸವಕಲ್ಯಾಣ ತಹಶಿಲ್ದಾರ ಶಾಂತಗೌಡ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸೈದಾಪೂರ ಗ್ರಾಮಸ್ಥರು ಉಪಸ್ಥಿತರಿದ್ದರು.