ಪುತ್ತೂರು: ದುಡಿಯುವ ಜನರಿಗೆ ಬಿಜೆಪಿ – ಕಾಂಗ್ರೆಸ್ ಆಡಳಿತ ಮುಖ್ಯವಲ್ಲ. ನಮಗೆ ಬದುಕು ಮುಖ್ಯ. ಶ್ರಮಕ್ಕೆ ತಕ್ಕ ಬೆಲೆ ನೀಡದ ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಅದರ ವಿರುದ್ಧ ನಮ್ಮ ಹೋರಾಟ ನಿಲ್ಲದು ಎಂದು ಅಕ್ಷದಾಸೋಹ ನೌಕರರ ಸಂಘದ ಅಧ್ಯಕ್ಷ ನ್ಯಾಯವಾದಿ ಬಿ.ಎಂ.ಭಟ್ ಎಚ್ಚರಿಕೆ ನೀಡಿದರು.
ಅವರು ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ಪುತ್ತೂರು ಅವಿಭಜಿತ ತಾಲೂಕು ಸಂಘದ ವತಿಯಿಂದ ಮಿನಿವಿಧಾನಸೌಧದ ಮುಂಭಾಗದ ಅಮರ್ ಜವಾನ್ ಜ್ಯೋತಿ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರ ಮಹಿಳೆಯರ ಬಗ್ಗೆ ಅಪಾರ ಗೌರವ ನೀಡಿದ್ದಾರೆ. ತಾಯಿ ಋಣ ತೀರಿಸುವುದು ಸ್ವಾಗತಾರ್ಹ ಬೆಳವಣಿಗೆ. ಆದರೆ ದುಡಿಯುವ ಮಹಿಳೆಯರಿಗೆ ಸ್ವಂದನೆ ನೀಡದಿರುವುದು ಖಂಡನೀಯ ಗೃಹಲಕ್ಷ್ಮಿ ಯೋಜನೆಯನ್ನು ಬಿಸಿಯೂಟದಂಹ ದುಡಿಮೆಗಾರರಿಗೆ ಸೇರಿಸಿ ಅವರ ಶ್ರಮಕ್ಕೆ ಸಮರ್ಪಕವಾದ ವೇತನ ನೀಡದೆ ಇರುವುದು ಸರಿಯಲ್ಲ ಎಂದರು.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ೯ ವರ್ಷಗಳಿಂದ ಕಾರ್ಮಿಕರ ಸಂಬಳ ಹೆಚ್ಚು ಮಾಡದೆ ಅನ್ಯಾಯವೆಸಗಿದೆ. ದೇಶದ ಜನರ ತೆರಿಗೆಯ ೫೦ ಲಕ್ಷ ಕೋಟಿ ಹಣವನ್ನು ೫೦ ಉದ್ಯಮಿ ಕುಟುಂಬಗಳಿಗೆ ನೀಡಿದ ಮೋದಿ ಅದೇ ಹಣವನ್ನು ದೇಶದ ಬಡವರಿಗೆ ಕೊಡುತ್ತಿದ್ದಲ್ಲಿ ಜನರ ಬದುಕು ಉತ್ತಮವಾಗುತ್ತಿತ್ತು ಎಂದರು.
ಸಂಘದ ಗೌರವಾಧ್ಯಕ್ಷ ನ್ಯಾಯವಾದಿ ಪಿ.ಕೆ.ಸತೀಶನ್ ಅವರು ಮಾತನಾಡಿ, ಸರ್ಕಾರ ಯಾವುದೇ ಆಗಿದ್ದರೂ ಅದರಿಂದ ಜನರಿಗೆ ಅನ್ಯಾಯವಾಗಬಾರದು. ಈಗಿನ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಕಾರ್ಮಿಕರು ಬದುಕು ಸಾಧಿಸುವುದು ಕಷ್ಟವಾಗಿದೆ. ಕಾರ್ಮಿಕರ ಬದುಕನ್ನು ಬೀದಿಗೆ ತಳ್ಳಿದೆ. ಕಾರ್ಮಿಕರ ಬೇಡಿಕೆಗಳಿಗೆ ಸರ್ಕಾರ ಸ್ಪಂದನೆ ನೀಡದಿದ್ದಲ್ಲಿ ಬೃಹತ್ ಹೋರಾಟ ಅನಿವಾರ್ಯವಾಗುತ್ತದೆ ಎಂದರು.
ಬಿಸಿಯೂಟ ನೌಕರರಿಗೆ ೧೨ ಸಾವಿರ ವೇತನ ನೀಡಬೇಕು. ನಿವೃತ್ತಿ ಹೊಂದಿದ ಹಾಗೂ ಹೊಂದುತ್ತಿರುವ ನೌಕರರಿಗೆ ರೂ.೧ ಲಕ್ಷ ಪರಿಹಾರ ನೀಡಬೇಕು. ಈ ನೌಕರರನ್ನು ಡಿಗ್ರೂಫ್ ನೌಕರರಾಗಿ ಪರಿಗಣಿಸಬೇಕು. ಅಪಘಾತ-ಆಕಸ್ಮಿಕ ಮರಣ ಹೊಂದಿದಲ್ಲಿ ಅವರ ಕುಟುಂಬಕ್ಕೆ ಕೆಲಸ ನೀಡಬೇಕು. ಬೇಸಿಗೆ ಮತ್ತು ದಸರಾ ರಜೆಗಳ ವೇತನ ನೀಡಬೇಕು. ಬಿಸಿಯೂಟ ಯೋಜನೆಯನ್ನು ಖಾಸಗಿ ಸಂಸ್ಥೆಗಳಿಗೆ ನೀಡಬಾರದು ಹಾಗೂ ಪ್ರತೀ ಶಾಲೆಗಳಲ್ಲಿ ಕನಿಷ್ಠ ಇಬ್ಬರು ಅಡುಗೆಯವರನ್ನು ನೇಮಕ ಮಾಡಬೇಕು ಎಂದು ತಮ್ಮ ಬೇಡಿಕೆಗಳನ್ನು ಪ್ರತಿಭಟನಾಕಾರರು ಮಂಡಿಸಿದರು.
ಪ್ರತಿಭಟನಾ ಸಭೆಯ ಬಳಿಕ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು. ಅಕ್ಷರದಾಸೋಹದ ಪುತ್ತೂರು ತಾಲೂಕು ಅಧ್ಯಕ್ಷೆ ಸುಧಾ, ಕಾರ್ಯದರ್ಶಿ ರಂಜಿತಾ, ಕಡಬ ತಾಲೂಕು ಅಧ್ಯಕ್ಷೆ ರೇವತಿ, ಕಾರ್ಯದರ್ಶಿ ಸುಲೋಚನಾ, ರಾಜ್ಯಸಮಿತಿ ಸದಸ್ಯೆ ವೇದಾವತಿ ಮತ್ತಿತರರು ಇದ್ದರು.