ಮೈಸೂರು: ಕುಂಬಾರಕೊಪ್ಪಲಿನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಪಕ್ಕದ ಅಂಬೇಡ್ಕರ್ ಗ್ರಂಥಾಲಯವನ್ನು ಯಾವುದೇ ಮಾಹಿತಿ ನೀಡದೆ ಏಕಾಏಕಿ ನೆಲಸಮಗೊಳಿಸಿರುವುದನ್ನು ಖಂಡಿಸಿ ಶ್ರೀ ಆದಿ ಶಕ್ತಿ ಕಾಳಿಕಾದೇವಿ ಸೇವಾ ಸಮಿತಿ ವತಿಯಿಂದ ಹೆಬ್ಬಾಳಿನಲ್ಲಿರುವ ಮಹಾನಗರ ಪಾಲಿಕೆಯ ವಲಯ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಹೆಬ್ಬಾಳಿನ ಸರ್ವೇ ನಂ.176ರ 3.13 ಎಕರೆ ಪೈಕಿ 10×12 ಅಡಿ ಜಾಗದಲ್ಲಿ ನಿರ್ಮಿಸಿದ್ದ ಸಾರ್ವಜನಿಕ ಗ್ರಂಥಾಲಯವನ್ನು ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದರೂ ಲೆಕ್ಕಿಸದೆ ಪಾಲಿಕೆ ಸಿಬ್ಬಂದಿ ಏಕಾಏಕಿ ನೆಲಸಮಗೊಳಿಸಿದ್ದಾರೆ. ಸಾರ್ವಜನಿಕರ ಜ್ಞಾನಾರ್ಜನೆಗೆ ನಿರ್ಮಿಸಿದ್ದ ಗ್ರಂಥಾಲಯವನ್ನು ಯಾರಿಗೂ ಮುನ್ಸೂಚನೆ ನೀಡದೆ ಒಡೆದು ಹಾಕಿರುವುದು ಸರಿಯಲ್ಲ ಎಂದು ಕಿಡಿ ಕಾರಿದರು.
ಕಂದಾಯ ಒಲಾಖೆ ಜಾಗವನ್ನು ಅಕ್ಕಪಕ್ಕದವರು ಒತ್ತುವರಿ ಮಾಡಿಕೊಂಡಿದ್ದು, ಇವರ ಪಿತೂರಿಯಿಂದ ಗ್ರಂಥಾಲಯ ನೆಲಸಮಗೊಳಿಸಲಾಗಿದೆ. ಕೂಡಲೇ ನೆಲಸಮಗೊಳಿಸಿರುವ ಜೆಸಿಬಿ ವಶಪಡಿಸಿಕೊಂಡು, ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು. ಗ್ರಂಥಾಲಯ ಜಾಗದಲ್ಲಿ ಮತ್ತೆ ಪಾಲಿಕೆ ವತಿಯಿಂದ ನೂತನ ಗ್ರಂಥಾಲಯ ನಿರ್ಮಿಸಬೇಕು ಎಂದು ಒತ್ತಾಯಿಸಿದರು. ಬಳಿಕ ವಲಯ ಕಚೇರಿಯ ಅಭಿವೃದ್ಧಿ ಅಧಿಕಾರಿ ಮನು ಗೌಡ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ ಸರ್ವೇಶ್, ಮಾಜಿ ಮೇಯರ್ ಪುರುಷೋತ್ತಮ್, ರಾಜಪ್ಪ, ಮಹದೇವ, ರವಿಚಂದ್ರ, ಅಪ್ಪು, ನಾಗರಾಜು, ರೇವಣ್ಣ, ಚಂದ್ರು, ಸ್ವಾಮಿ, ಮಧುಸೂದನ್, ಮನು, ರವಿ ಸೇರಿದಂತೆ ಹಲವರು ಭಾಗವಹಿಸಿದ್ದರು.